ಹೈದರಾಬಾದ್: ವಿಶ್ವದ ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆಗಳಲ್ಲಿ ಒಂದಾದ 72ನೇ ಮಿಸ್ ವರ್ಲ್ಡ್ ಸ್ಪರ್ಧೆಯು ಹೈದರಾಬಾದ್ನಲ್ಲಿ ನಡೆಯುತ್ತಿದ್ದು, 110 ದೇಶಗಳಿಂದ ಆಗಮಿಸಿದ ಸುಂದರಿಯರು ಕಿರೀಟಕ್ಕಾಗಿ ಸೆಣಸುತ್ತಿದ್ದಾರೆ. ಭಾರತ, ಶ್ರೀಲಂಕಾ, ನೇಪಾಳ ಮತ್ತು ಬಾಂಗ್ಲಾದೇಶದ ಸ್ಪರ್ಧಿಗಳು ಸೇರಿದಂತೆ ಭಾರತೀಯ ಉಪಖಂಡದ ಹಲವು ಪ್ರತಿನಿಧಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಆದರೆ, ಭಾರತ-ಪಾಕಿಸ್ತಾನ ಸಂಘರ್ಷದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಸುಂದರಿಯರಿಗೆ ಇಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ .

ಮಿಸ್ ವರ್ಲ್ಡ್ ಸ್ಪರ್ಧೆಯ ಪ್ರತಿನಿಧಿ ಅಶ್ವನಿ ಶುಕ್ಲಾ ಅವರು, ಮಿಸ್ ಪಾಕಿಸ್ತಾನರ ಗೈರುಹಾಜರಿ ಇತ್ತೀಚಿನ ಸಂಘರ್ಷಕ್ಕೆ ಸಂಬಂಧಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪಾಕಿಸ್ತಾನವು ಸಾಮಾನ್ಯವಾಗಿ ಅಂತರರಾಷ್ಟ್ರೀಯ ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸುವುದಿಲ್ಲ ಮತ್ತು 2023ರಲ್ಲಿ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಮೊದಲ ಬಾರಿಗೆ ಭಾಗವಹಿಸಿದಾಗ ದೇಶದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು ಎಂದು ಅವರು ತಿಳಿಸಿದ್ದಾರೆ. ಆದಾಗ್ಯೂ ಪಾಕ್ ಚೆಲುವೆಯರ ಅನುಪಸ್ಥಿತಿಗೆ ಭಾರತ-ಪಾಕ್ ಮಿಲಿಟರಿ ಸಂಘರ್ಷವೇ ಕಾರಣ ಎಂಬ ವಾದವೂ ಕೇಳಿಬಂದಿದೆ.
ಈ ವರ್ಷ ಭಾರತವನ್ನು ರಾಜಸ್ಥಾನದ ಕೋಟಾದ ನಂದಿನಿ ಗುಪ್ತಾ ಪ್ರತಿನಿಧಿಸುತ್ತಿದ್ದಾರೆ. ನಂದಿನಿ ಗುಪ್ತಾ ಅವರು ತಮ್ಮ ‘ಪ್ರಾಜೆಕ್ಟ್ ಏಕತಾ’ ಮೂಲಕ ವಿಕಲಾಂಗರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರುವ ಗುರಿ ಹೊಂದಿದ್ದಾರೆ. ತಮ್ಮ ಚಿಕ್ಕಪ್ಪನ ಪೋಲಿಯೊ ಅನುಭವದಿಂದ ಸ್ಫೂರ್ತಿ ಪಡೆದು ವಿಕಲಾಂಗರ ಹಕ್ಕುಗಳಿಗಾಗಿ ಕೆಲಸ ಮಾಡುತ್ತಿರುವುದಾಗಿ ಅವರು ಹೇಳಿದ್ದಾರೆ.

ನೇಪಾಳದ ಪ್ರತಿನಿಧಿ ಶ್ರೀಚ್ಛಾ ಪ್ರಧಾನ್ ಅವರು ‘ಪಂಚ ಪ್ರಣಾಲಿ’ ಯೋಜನೆಯಡಿ ಪೂರ್ವಜರ ಬುದ್ಧಿವಂತಿಕೆಯತ್ತ ಗಮನ ಹರಿಸುವ ಜಗತ್ತಿಗಾಗಿ ಹಂಬಲಿಸುತ್ತಿರುವುದಾಗಿ ಹೇಳಿದ್ದಾರೆ. ಬಾಂಗ್ಲಾದೇಶದ ಸ್ಪರ್ಧಿ ಅತೀಕಾ ಕೊನಿಕಾ ಅವರು ಕೊನೆಯ ಕ್ಷಣದಲ್ಲಿ ತಂಡವನ್ನು ಸೇರಿದ್ದಾರೆ. ಪ್ರಮಾಣೀಕೃತ ಮಾನಸಿಕ ಆರೋಗ್ಯ ಬೆಂಬಲ ಕಾರ್ಯಕರ್ತೆಯಾಗಿರುವ ಕೊನಿಕಾ, ತಮ್ಮ ಸ್ವಂತ ಮಾನಸಿಕ ಆರೋಗ್ಯ ಹೋರಾಟದಿಂದ ಪ್ರೇರಿತರಾಗಿ ‘ಯಂಗ್ ಮೈಂಡ್ ಮ್ಯಾಟರ್ಸ್’ ಯೋಜನೆಯಡಿ ಮಾನಸಿಕ ಆರೋಗ್ಯ ಬೆಂಬಲ ಮತ್ತು ಪರಿಹಾರಗಳನ್ನು ಒದಗಿಸುವ ಗುರಿ ಹೊಂದಿದ್ದಾರೆ. ತಮ್ಮ ದೇಶದಲ್ಲಿ ಹೆಚ್ಚುತ್ತಿರುವ ವಿದ್ಯಾರ್ಥಿಗಳ ಆತ್ಮಹತ್ಯೆಗಳ ಸಂಖ್ಯೆಯನ್ನು ಅವರು ಉಲ್ಲೇಖಿಸಿದ್ದಾರೆ.
ಶ್ರೀಲಂಕಾದ ಅನುದಿ ಗುಣಸೇಕರ ಅವರು ತಮ್ಮ ‘ಬ್ಯೂಟಿ ವಿಥ್ ಎ ಪರ್ಪಸ್’ ಯೋಜನೆಯಾದ ‘ಸಹೇಲಿ’ ಮೂಲಕ ಋತುಸ್ರಾವದ ಆರೋಗ್ಯ ಮತ್ತು ಸ್ವಚ್ಛತೆಯ ಕುರಿತು ಅರಿವು ಮೂಡಿಸುತ್ತಿದ್ದಾರೆ. ಅಗತ್ಯ ಉತ್ಪನ್ನಗಳನ್ನು ವಿತರಿಸುತ್ತಿದ್ದಾರೆ. ಇದು ಅನೇಕ ಮಹಿಳೆಯರ ಜೀವನದಲ್ಲಿ ಬದಲಾವಣೆ ತರುವ ಗುರಿ ಹೊಂದಿದೆ.
ಈ ವರ್ಷ ಮಿಸ್ ಫಿನ್ಲ್ಯಾಂಡ್ (ಸೋಫಿಯಾ ಸಿಂಗ್) ಮತ್ತು ಮಿಸ್ ಮಲೇಷ್ಯಾ (ಸರೂಪ್ ರೋಶಿ) ಸ್ಪರ್ಧಿಗಳು ಸಹ ಭಾರತೀಯ ಮೂಲದವರಾಗಿದ್ದಾರೆ. ಅವರ ವೈವಿಧ್ಯಮಯ ಹಿನ್ನೆಲೆ ಮತ್ತು ಸಾಧನೆಗಳು ಗಮನ ಸೆಳೆದಿವೆ.

ಮೂರನೇ ಬಾರಿ ಆಯೋಜನೆ
ಭಾರತವು ಮಿಸ್ ವರ್ಲ್ಡ್ ಸ್ಪರ್ಧೆಯನ್ನು ಆಯೋಜಿಸುತ್ತಿರುವುದು ಇದು ಮೂರನೇ ಬಾರಿ. ಕಳೆದ ವರ್ಷ ಮುಂಬೈ ಮತ್ತು ದೆಹಲಿಯಲ್ಲಿ ನಡೆದಿದ್ದರೆ, 1996 ರಲ್ಲಿ ಬೆಂಗಳೂರಿನಲ್ಲಿ ಆಯೋಜಿಸಲಾಗಿತ್ತು. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ 1996 ರ ಫೈನಲ್ ಅನ್ನು ಒಂದು ಶತಕೋಟಿಗೂ ಹೆಚ್ಚು ಜನರು ವೀಕ್ಷಿಸಿದ್ದರು ಮತ್ತು ಹಂಪಿಯ ವಿಜಯನಗರ ಸಾಮ್ರಾಜ್ಯದಿಂದ ಸ್ಫೂರ್ತಿ ಪಡೆದ ವೇದಿಕೆ ವಿಶೇಷ ಆಕರ್ಷಣೆಯಾಗಿತ್ತು.
ಈ ವರ್ಷದ ಸ್ಪರ್ಧೆಯ ಪ್ರಮುಖ ವಿಷಯ ಶಾಂತಿಯಾಗಿದೆ ಎಂದು ಮಿಸ್ ವರ್ಲ್ಡ್ ಲಿಮಿಟೆಡ್ನ ಅಧ್ಯಕ್ಷೆ ಮತ್ತು ಸಿಇಒ ಜೂಲಿಯಾ ಮಾರ್ಲೆ ಹೇಳಿದ್ದಾರೆ. ಜಾಗತಿಕ ಒಗ್ಗಟ್ಟು, ಶಾಂತಿ ಮತ್ತು ಸಾಂಸ್ಕೃತಿಕ ಮೆಚ್ಚುಗೆಯನ್ನು ಉತ್ತೇಜಿಸುವುದು ಈ ಸ್ಪರ್ಧೆಯ ಉದ್ದೇಶವಾಗಿದೆ ಎಂದಿದ್ದಾರೆ. 71ನೇ ಮಿಸ್ ವರ್ಲ್ಡ್ ವಿಜೇತೆ ಕ್ರಿಸ್ಟಿನಾ ಪಿಸ್ಕೋವಾ ಅವರು ಮೇ 31 ರಂದು ಹೊಸ ಮಿಸ್ ವರ್ಲ್ಡ್ಗೆ ಕಿರೀಟಧಾರಣೆ ಮಾಡಲಿದ್ದಾರೆ.
ಹೈದರಾಬಾದ್ನಲ್ಲಿ ನಡೆಯುತ್ತಿರುವ ಈ ಅಂತಾರಾಷ್ಟ್ರೀಯ ಕಾರ್ಯಕ್ರಮವು ವಿವಿಧ ದೇಶಗಳ ಸಂಸ್ಕೃತಿಗಳ ಸಂಗಮಕ್ಕೆ ವೇದಿಕೆಯಾಗಿದೆ ಮತ್ತು ಸಾಮಾಜಿಕ ಕಳಕಳಿಯ ವಿವಿಧ ಯೋಜನೆಗಳನ್ನು ಜಾಗತಿಕ ಮಟ್ಟದಲ್ಲಿ ಪ್ರಚುರಪಡಿಸಲು ಅವಕಾಶ ಕಲ್ಪಿಸಿದೆ.