ವಿಜಯಪುರ: ಪ್ರವಾದಿ ಪೈಗಂಬರ್ ವಿರುದ್ದ ಶಾಸಕ ಯತ್ನಾಳ್ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ಮುಸ್ಲಿಂ ಸಮುದಾಯ ಆರೋಪಿಸಿದೆ. ಹೀಗಾಗಿ ಬೃಹತ್ ಹೋರಾಟಕ್ಕೆ ಮುಂದಾಗಿದೆ.
ಮುಸ್ಲಿಂ ಆಕ್ಷನ್ ಕಮೀಟಿಯಿಂದ ವಿಜಯನಗರದಲ್ಲಿ ಬೃಹತ್ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ. ಕಳೆದ 15ರಂದು ಮುಸ್ಲಿಂ ಸಮುದಾಯದವರು ಬೃಹತ್ ಹೋರಾಟ ನಡೆಸಲು ಮುಂದಾಗಿದ್ದರು. ಆ ವೇಳೆ ಯತ್ನಾಳ್ ಅವರಿಗೆ ಜೀವ ಬೆದರಿಕೆ ನೀಡಿರುವ ಆಡಿಯೋ ಹಾಗೂ ವಿಡಿಯೋ ವೈರಲ್ ಆಗಿದ್ದವು. ಇದರಿಂದಾಗಿ ಹೋರಾಟ ರದ್ದು ಮಾಡಲಾಗಿತ್ತು. ಹೀಗಾಗಿ ಈಗ ಮುಸ್ಲಿಂ ಸಮುದಾಯ ಮತ್ತೆ ಹೋರಾಟಕ್ಕೆ ಮುಂದಾಗಿದೆ.
ಹೋರಾಟದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ 4 ಐಆರ್ಬಿ ಪಡೆ, 8 ಡಿಆರ್ ಪೊಲೀಸ್ ತುಕುಡಿ, ಓರ್ವ ಎಸ್ಪಿ, ಇಬ್ಬರು ಎಎಸ್ಪಿ, 8 ಡಿವೈಎಸ್ಪಿ, 20 ಪೊಲೀಸ್ ಇನ್ಸ್ ಪೆಕ್ಟರ್, 60 ಪಿಎಸ್ ಐ, 100 ಎಎಸ್ ಐಗಳು ಸೇರಿದಂತೆ ಒಟ್ಟು 500ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ಇನ್ನು ಅಂಬೇಡ್ಕರ್ ವೃತ್ತದಿಂದ ಡಿಸಿ ಕಚೇರಿ ವರೆಗೆ ಮಾತ್ರ ಪ್ರತಿಭಟನಾ ಮೆರವಣಿಗೆಗೆ ಅವಕಾಶ ಕಲ್ಪಿಸಿದ್ದು ಕೇವಲ 500 ಮೀಟರ್ ವರೆಗೆ ಮಾತ್ರ ಪ್ರತಿಭಟನಾ ರ್ಯಾಲಿಗೆ ಅವಕಾಶ ನೀಡಲಾಗಿದೆ.
ಹೋರಾಟದ ದಿಕ್ಕು ತಪ್ಪಿಸಲು ಕಲ್ಲು ತೂರಾಟ, ಬೆಂಕಿ, ಗಲಾಟೆ ನಡೆಯುವ ಸಾಧ್ಯತೆ ಇದ್ದು ವಜ್ರ, ತುರ್ತು ಪಡೆ, ಕ್ಷೀಪ್ರಕಾರ್ಯ ಪಡೆಯಿಂದಲೂ ಕೂಡ ಪ್ರತಿಭಟನಾಕಾರರ ಮೇಲೆ ಹದ್ದಿನ ಕಣ್ಣು ಇಟ್ಟಿದ್ದಾರೆ