ಉಡುಪಿ/ಬೈಂದೂರು : ಬೈಂದೂರು-ವಿಶ್ವವಿಖ್ಯಾತ ಮರವಂತೆಯ ಪ್ರಕೃತಿ ಸೊಬಗಿನ ತಾಣದಲ್ಲಿ ನೆಲೆ ನಿಂತಿರುವ ಪುರಾಣ ಪ್ರಸಿದ್ದ ಕ್ಷೇತ್ರ ಮಹಾರಾಜಸ್ವಾಮಿ ಶ್ರೀ ವರಾಹ ದೇವಸ್ಥಾನದಲ್ಲಿ ಕರ್ಕಾಟಕ ಅಮವಾಸ್ಯೆ ಜಾತ್ರೆ ಸಂಭ್ರಮದಿಂದ ಜರುಗಿತು.
ಭಾರಿ ಮಳೆಯ ನಡುವೆಯೂ ಬೆಳಗಿನಿಂದಲೇ ಜಿಲ್ಲೆಯ ವಿವಿಧೆಡೆಗಳಿಂದ ಭಕ್ತರ ಮಹಾಪೂರವೇ ಹರಿದು ಬಂದಿತು. ಸಮುದ್ರ ಮತ್ತು ನದಿಗಳಲ್ಲಿ ಪವಿತ್ರ ಸ್ನಾನ ಮಾಡಿ ಶ್ರೀ ದೇವರ ದರ್ಶನ ಪಡೆದು ಅಭಿಷೇಕ, ಪೂಜೆ ಸಲ್ಲಿಸಿದರು. ಸಹಸ್ರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.
ಮಧ್ಯಾಹ್ನ ಭಕ್ತರ ಸಂಖ್ಯೆ ಹೆಚ್ಚಾಗಿದ್ದು, ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಸರತಿ ಸಾಲು ಕಂಡು ಬಂದವು.
ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ರಾಜೇಶ್ ಹೆಬ್ಬಾರ್ ಮಾತನಾಡಿ, ಜಾತ್ರೆಯ ಅಂಗವಾಗಿ ದೇವಾಲಯಕ್ಕೆ ವಿಶೇಷ ದೀಪಾಲಂಕಾರ, ಪುಷ್ಪಾಲಂಕಾರ ಮಾಡಲಾಗಿದ್ದು, ದೇವಾಲಯದೊಳಗೆ ಆಡಳಿತ ಮಂಡಳಿ ಮತ್ತು ಸೇವಾ ವರ್ಗದ ಸದಸ್ಯರು ಸ್ವಯಂಸೇವಕರ ಜೊತೆಗೂಡಿ ಶುಚಿತ್ವ, ಪೂಜೆ, ಭಕ್ತರ ಆಗಮನ-ನಿರ್ಗಮನ, ಪ್ರಸಾದ ವಿತರಣೆ ಸುಗಮವಾಗಿ ನಡೆಯಲು ಅಗತ್ಯ ವ್ಯವಸ್ಥೆ ಕಲ್ಪಿಸಿದ್ದಾರೆ.
ಈ ಬಾರಿಯ ಜಾತ್ರೆಗೆ ಆಗಮಿಸುವ ಭಕ್ತರಿಗೆ ಅನ್ನ, ಚಿತ್ರಾನ್ನ ಮತ್ತು ಪಾಯಸ ವ್ಯವಸ್ಥೆ ಕಲ್ಪಿಸಲಾಗಿದ್ದು, ಸಾವಿರಾರು ಭಕ್ತರಿಗೆ ಈ ವ್ಯವಸ್ಥೆ ಮಾಡಲಾಗಿದೆ. ಭಕ್ತರಿಗೆ ಅನುಕೂಲವಾಗುವಂತೆ, ಪ್ಲಾಸ್ಟಿಕ್ ನಿಷೇಧದ ಮಹತ್ವ ತಿಳಿಸುವ ಉದ್ದೇಶದಿಂದಾಗಿ ದೇವಸ್ಥಾನದ ವತಿಯಿಂದಲೇ ಹಣ್ಣುಕಾಯಿ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ.
ಒಂದೆಡೆ ಸಮುದ್ರ, ಇನ್ನೊಂದೆಡೆ ನದಿ, ನಡುವೆ ಹಾದು ಹೋಗುವ ಹೆದ್ದಾರಿ ಕಾರಣದಿಂದ ತೀರ ಕಿರಿದಾದ ಭೂಪ್ರದೇಶದಲ್ಲಿ ಅಮಾವಾಸ್ಯೆಯ ಪರ್ವದಲ್ಲಿ ಪಾಲ್ಗೊಳ್ಳಲು ಬರುವ ಸಹಸ್ರಾರು ಭಕ್ತರ ಸುರಕ್ಷತೆಗಾಗಿ ಮತ್ತು ಹೆದ್ದಾರಿಯಲ್ಲಿ ಎಡೆಬಿಡದೆ ಸಂಚರಿಸುವ ವಾಹನಗಳ ಜತೆಗೆ ಜಾತ್ರೆಗೆ ಬರುವ ಅಸಂಖ್ಯ ವಾಹನಗಳ ಸುಗಮ ಸಂಚಾರ, ನಿಲುಗಡೆ ಮತ್ತು ಜನದಟ್ಟಣೆಯ ನಿಯಂತ್ರಣ, ಸಮುದ್ರ ಮತ್ತು ನದಿಸ್ನಾನ ಮಾಡುವವರ ಬಗೆಗೆ ವಹಿಸಬೇಕಾದ ಎಚ್ಚರದ ಕುರಿತು ಗಂಗೊಳ್ಳಿ ಪೊಲೀಸರು, ಕರಾವಳಿ ಕಾವಲು ಪಡೆ ಪೊಲೀಸರು, ಕುಂದಾಪುರ ಸಂಚಾರಿ ಪೊಲೀಸರು ಅಗತ್ಯ ಕ್ರಮಕೈಗೊಂಡರು. ದೇವಸ್ಥಾನದ ಎದುರು ಯಾವುದೇ ವ್ಯಾಪಾರಿ ಮಳಿಗೆಗೆ ಅವಕಾಶ ನೀಡದೇ ಅಲ್ಲಿ ಭಕ್ತರು ದೇವಳದೊಳಕ್ಕೆ ಆಗಮಿಸಲು ಸರತಿ ಸಾಲಿನ ಅವಕಾಶ ಮಾಡಿಕೊಡಲಾಯಿತು.
ಈ ಸಂದರ್ಭದಲ್ಲಿ ಬೈಂದೂರು ಶಾಸಕರಾದ ಗುರುರಾಜ್ ಗಂಟಿಹೊಳೆ,ಮಾಜಿ ಶಾಸಕರಾದ ಗೋಪಾಲ್ ಪೂಜಾರಿ ಮಾಜಿ ಶಾಸಕರಾದ ಬಿ ಎಮ್ ಸುಕುಮಾರ ಶೆಟ್ಟಿ, ದೇವಸ್ಥಾನದ ಜೀರ್ಣೋದರ ಸಮಿತಿ ಅಧ್ಯಕ್ಷರಾದ ರಾಜಶೇಖರ್ ಹೆಬ್ಬಾರ್, ಮುನಿಯಲ್ ಉದಯ ಕುಮಾರ್ ಶೆಟ್ಟಿ, ಮಟ್ಟಾರು ರತ್ನಾಕರ ಹೆಗ್ಡೆ,ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅರವಿಂದ ಪೂಜಾರಿ, ಆಡಳಿತ ಮಂಡಳಿ ಸದಸ್ಯರಾದ ನರಸಿಂಹ ಅಡಿಗ, ಲಕ್ಷ್ಮಣ್ ಪೂಜಾರಿ ಹಡವು, ಗಣೇಶ್ ಕೆ. ಪೂಜಾರಿ, ನಾಗವೇಣಿ ಪ್ರಭಾಕರ್ ಮರವಂತೆ, ಸುಶೀಲಾ ಎಸ್ ಮೆಂಡನ್,ಗೋಪಾಲ ದೇವಾಡಿಗ,ಸುರೇಶ್ ಬಿ ನಾಡ,ಹೆಚ್ ಅನು ಕುಮಾರ್ ಶೆಟ್ಟಿ, ದೇವಸ್ಥಾನ ಸಿಬ್ಬಂದಿಗಳು, ಅರ್ಚಕರು, ಹುಟ್ಟಿನವರು, ವಿವಿಧ ಸಂಘ-ಸಂಸ್ಥೆ ಸದಸ್ಯರು ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.





















