ರಾಂಚಿ: ಛತ್ತೀಸ್ಗಢದ ನಾರಾಯಪುರದಲ್ಲಿ ಟಾಪ್ ನಕ್ಸಲ್ ನಾಯಕ ನಂಬಲ ಕೇಶವ ರಾವ್ ಅಲಿಯಾಸ್ ಬಸವರಾಜು ಹತ್ಯೆಯ ಬೆನ್ನಲ್ಲೇ ಜಾರ್ಖಂಡ್ನ ಹಿರಿಯ ಮಾವೋವಾದಿ ನಾಯಕ ಪಪ್ಪು ಲೋಹಾರಾನನ್ನು ಭದ್ರತಾ ಪಡೆಗಳು ಶನಿವಾರ ಹೊಡೆದುರುಳಿಸಿದೆ. ಜಾರ್ಖಂಡ್ನ ಲಾತೇಹಾರ್ನಲ್ಲಿ ನಡೆದ ಎನ್ಕೌಂಟರ್ನಲ್ಲಿ ಪಪ್ಪು ಹತ್ಯೆ ನಡೆದಿದೆ.
ಜಾರ್ಖಂಡ್ ಜನ ಮುಕ್ತಿ ಪರಿಷತ್ ನಾಯಕನಾಗಿದ್ದ ಪಪ್ಪು ಲೋಹಾರಾನ ತಲೆಗೆ 10 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ಈತನ ಜೊತೆಗೆ ಇವನ ಸಹಚರ, 5 ಲಕ್ಷ ರೂ. ಬಹುಮಾನ ಹೊತ್ತಿದ್ದ ಪ್ರಭಾತ್ ಗಂಜು ಎಂಬಾತನನ್ನೂ ಸದೆಬಡಿಯಲಾಗಿದೆ. ಮತ್ತೊಬ್ಬ ನಕ್ಸಲ್ ಗಾಯಗೊಂಡಿದ್ದು ಆತನನ್ನು ಬಂಧಿಸಲಾಗಿದ್ದು, ಅವನ ಬಳಿಯಿದ್ದ ಇನ್ಸಾಸ್ ರೈಫಲ್ ಅನ್ನು ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮೂರು ದಿನಗಳ ಹಿಂದಷ್ಟೇ ಛತ್ತೀಸ್ಗಢದ ನಾರಾಯಣಪುರ ಜಿಲ್ಲೆಯಲ್ಲಿ ನಡೆದ ಮಹತ್ವದ ಕಾರ್ಯಾಚರಣೆಯಲ್ಲಿ ಪ್ರಮುಖ ನಕ್ಸಲ್ ನಾಯಕ ಬಸವರಾಜುನನ್ನು ಕೊಲ್ಲಲಾಗಿತ್ತು. ಸುಮಾರು 50 ಗಂಟೆಗಳ ಕಾಲ ನಾರಾಯಣಪುರ-ಬಿಜಾಪುರ ಗಡಿಯಲ್ಲಿ ನಡೆದ ಈ ಗುಂಡಿನ ಚಕಮಕಿಯಲ್ಲಿ ಬಸವರಾಜು ಮಾತ್ರವಲ್ಲದೆ ಒಟ್ಟು 27 ಮಾವೋವಾದಿಗಳನ್ನು ಹತ್ಯೆಗೈಯ್ಯಲಾಗಿತ್ತು.
ಆರಂಭದಲ್ಲಿ ನಕ್ಸಲರ ಸೆಂಟ್ರಲ್ ಮಿಲಿಟರಿ ಕಮಿಷನ್ನ ನೇತೃತ್ವ ವಹಿಸಿದ್ದ ಬಸವರಾಜು ನಂತರ ಮಾವೋವಾದಿಗಳಲ್ಲೇ ಅತ್ಯಂತ ಉನ್ನತ ಹುದ್ದೆಯಾದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದ. ಬಸವರಾಜು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ), ತೆಲಂಗಾಣ ಹಾಗೂ ಆಂಧ್ರಪ್ರದೇಶದ ಪೊಲೀಸರಿಗೂ ಬೇಕಾಗಿದ್ದ. ಈತನ ಸುಳಿವು ನೀಡಿದವರಿಗೆ 1.5 ಕೋಟಿ ರೂ. ಬಹುಮಾನವನ್ನೂ ಘೋಷಿಸಲಾಗಿತ್ತು.
2026ರ ಮಾರ್ಚ್ ತಿಂಗಳೊಳಗಾಗಿ ದೇಶವನ್ನು ನಕ್ಸಲ್ ಮುಕ್ತಗೊಳಿಸುವುದಾಗಿ ಶಪಥ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಈ ಕಾರ್ಯಾಚರಣೆಯನ್ನು ನಕ್ಸಲಿಸಂ ನಿರ್ಮೂಲನೆಯ ನಿಟ್ಟಿನಲ್ಲಿ ಆದ ಐತಿಹಾಸಿಕ ಸಾಧನೆ ಎಂದು ಬಣ್ಣಿಸಿದ್ದಾರೆ. ಭಾರತದ ನಕ್ಸಲ್ ನಿಗ್ರಹ ಹೋರಾಟದಲ್ಲಿ ಕಳೆದ 30 ವರ್ಷಗಳಲ್ಲೇ ನಮ್ಮ ಭದ್ರತಾ ಪಡೆಗಳು ನಕ್ಸಲರ ಪ್ರಧಾನ ಕಾರ್ಯದರ್ಶಿ ಮಟ್ಟದ ನಾಯಕನನ್ನು ಹೊಡೆದುರುಳಿಸಿದ್ದು ಇದೇ ಮೊದಲು ಎಂದೂ ಅವರು ಟ್ವೀಟ್ ಮಾಡಿದ್ದರು.