ಕಲಬುರಗಿ/ನವ ದೆಹಲಿ : ಪ್ರಧಾನಿ ನರೇಂದ್ರ ಮೋದಿ ಆಕಾಶವಾಣಿ ರೇಡಿಯೊ ಕಾರ್ಯಕ್ರಮದ ಮನ್ ಕಿ ಬಾತ್ 125ನೇ ಸಂಚಿಕೆಯಲ್ಲಿ ಹೈದರಾಬಾದ್ ಕರ್ನಾಟಕ ವಿಮೋಚನಾ ಹೋರಾಟವನ್ನು ಸ್ಮರಿಸಿದ್ದಾರೆ.
ಹೈದರಾಬಾದ್ ನಿಜಾಮರ ಆಳ್ವಿಕೆಗೆ ಒಳಗೊಂಡಿದ್ದ ಪ್ರದೇಶಗಳ ವಿಮೋಚನೆಗಾಗಿ ಹೋರಾಡಿದ ಅಂದಿನ ಹೋರಾಟಗಾರರ ತ್ಯಾಗ, ಬಲಿದಾನವನ್ನು ಸ್ಮರಿಸಿದ ಮೋದಿ, ಅಂದಿನ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ತೋರಿದ ಕಠಿಣ ನಿರ್ಧಾರ, ಕಾನೂನು ಸಚಿವರಾಗಿದ್ದ ಡಾ. ಬಿ.ಆರ್ ಅಂಬೇಡ್ಕರ್ ಮಹತ್ವದ ಸಲಹೆ ಮತ್ತು ಆಪರೇಷನ್ ಪೋಲೊ ಸಮಯದಲ್ಲಿ ಮಿಲಿಟರಿ ಪಡೆಗಳು ತೋರಿದ ಧೈರ್ಯವನ್ನು ನೆನೆಪು ಮಾಡಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಅಂದು ಆಪರೇಷನ್ ಪೋಲೊ ಬಗ್ಗೆ ಮಾತನಾಡಿದ್ದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲರ ಆಡಿಯೊವನ್ನು ಹಂಚಿಕೊಂಡರು. ಸೆಪ್ಟೆಂಬರ್ 17 ಅನ್ನು ಹೈದರಾಬಾದ್ ವಿಮೋಚನಾ ದಿನವನ್ನಾಗಿ ಆಚರಿಸುವ ನಮ್ಮ ಸರ್ಕಾರದ ನಿರ್ಧಾರವನ್ನು ವಿಶೇಷವಾಗಿ ತೆಲಂಗಾಣ, ಕರ್ನಾಟಕ ಮತ್ತು ಮಹಾರಾಷ್ಟ್ರದ ಜನರು ಬಹಳವಾಗಿ ಮೆಚ್ಚಿಕೊಂಡಿದ್ದಾರೆ ಎಂದು ನಮೋ ಅಭಿಪ್ರಾಯಪಟ್ಟಿದ್ದಾರೆ.



















