ಗುವಾಹಟಿ: ಅಸ್ಸಾಂ ಗಾಯಕ ಜುಬೀನ್ ಗರ್ಗ್ ಅವರಿಗೆ ಅವರ ಮ್ಯಾನೇಜರ್ ಮತ್ತು ಅವರು ಪ್ರದರ್ಶನ ನೀಡಬೇಕಿದ್ದ ಉತ್ಸವದ ಸಂಘಟಕರು ವಿಷವುಣಿಸಿದ್ದಾರೆ ಎಂದು ಅವರ ಬ್ಯಾಂಡ್ಮೇಟ್ ಶೇಖರ್ ಜ್ಯೋತಿ ಗೋಸ್ವಾಮಿ ಸ್ಫೋಟಕ ಆರೋಪ ಮಾಡಿದ್ದಾರೆ. ಗಾಯಕನ ಸಾವಿಗೆ ಮುನ್ನ ಅವರ ಮ್ಯಾನೇಜರ್ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದರು ಎಂದು ಗೋಸ್ವಾಮಿ ಹೇಳಿದ್ದಾರೆ. ಜುಬೀನ್ ಗರ್ಗ್ ಅವರು ಸೆ.19ರಂದು ಸಿಂಗಾಪುರದಲ್ಲಿ ಈಜುತ್ತಿದ್ದಾಗ ನಿಗೂಢವಾಗಿ ಸಾವನ್ನಪ್ಪಿದ್ದರು.
ಜುಬೀನ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸ್ಸಾಂ ಪೊಲೀಸರು ಬಂಧಿಸಿರುವ ನಾಲ್ವರಲ್ಲಿ ಗೋಸ್ವಾಮಿ ಕೂಡ ಒಬ್ಬರಾಗಿದ್ದಾರೆ. ಕೃತ್ಯವನ್ನು ಮುಚ್ಚಿಹಾಕಲು ಆರೋಪಿಗಳು ಉದ್ದೇಶಪೂರ್ವಕವಾಗಿ ವಿದೇಶಿ ಸ್ಥಳವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಗೋಸ್ವಾಮಿ ಅವರಲ್ಲದೆ, ಗಾಯಕನ ಮ್ಯಾನೇಜರ್ ಸಿದ್ಧಾರ್ಥ್ ಶರ್ಮಾ, ಕಾರ್ಯಕ್ರಮ ಸಂಘಟಕ ಶ್ಯಾಮಕಾನು ಮಹಂತ ಮತ್ತು ಸಂಗೀತಗಾರ್ತಿ ಅಮೃತ್ಪ್ರವಾ ಮಹಂತ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಕೊಲೆ ಆರೋಪವನ್ನೂ ಸೇರಿಸಲಾಗಿದೆ. ಬಾಲಿವುಡ್ನ “ಯಾ ಅಲಿ” ಖ್ಯಾತಿಯ ಗಾಯಕ ಜುಬೀನ್, ಮಹಂತ ಆಯೋಜಿಸಿದ್ದ ಈಶಾನ್ಯ ಭಾರತ ಉತ್ಸವದಲ್ಲಿ ಪ್ರದರ್ಶನ ನೀಡಲು ಸಿಂಗಾಪುರಕ್ಕೆ ತೆರಳಿದ್ದರು.
“ಸಿಂಗಾಪುರದಲ್ಲಿ ನಡೆದಿದ್ದೇನು”?
ವಿಶೇಷ ತನಿಖಾ ತಂಡಕ್ಕೆ (ಎಸ್ಐಟಿ) ನೀಡಿದ ಹೇಳಿಕೆಯಲ್ಲಿ ಗೋಸ್ವಾಮಿ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಜುಬೀನ್ ಅವರೊಂದಿಗೆ ಹೋಟೆಲ್ನಲ್ಲಿ ತಂಗಿದ್ದ ಮ್ಯಾನೇಜರ್ ಶರ್ಮಾ, ಅವರ ಸಾವಿಗೆ ಮುನ್ನ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದರು. ದೋಣಿ ವಿಹಾರದ ವೇಳೆ, ಶರ್ಮಾ ನಾವಿಕನಿಂದ ಬಲವಂತವಾಗಿ ದೋಣಿಯ ನಿಯಂತ್ರಣವನ್ನು ವಶಪಡಿಸಿಕೊಂಡು ಪ್ರಯಾಣಿಕರ ಜೀವಕ್ಕೆ ಅಪಾಯವನ್ನುಂಟುಮಾಡಿದ್ದರು. ಪಾನೀಯಗಳನ್ನು ತಾವೇ ತರುವುದಾಗಿ ಹೇಳಿ, ಬೇರೆ ಯಾರಿಗೂ ತರಬೇಡಿ ಎಂದು ಶರ್ಮಾ ಸೂಚಿಸಿದ್ದರು. ಝುಬೀನ್ ಈಜುವಾಗ ಉಸಿರಾಡಲು ಹೆಣಗಾಡುತ್ತಿದ್ದಾಗ, ಶರ್ಮಾ, “ಜಾಬೋ ದೇ, ಜಾಬೋ ದೇ” (ಹೋಗಲಿ ಬಿಡು, ಹೋಗಲಿ ಬಿಡು) ಎಂದು ಕೂಗಿದ್ದರು.
ಜುಬೀನ್ ಅವರ ಬಾಯಿ ಮತ್ತು ಮೂಗಿನಿಂದ ನೊರೆ ಬರುತ್ತಿದ್ದಾಗ, ಶರ್ಮಾ ಅದನ್ನು “ಆಸಿಡ್ ರಿಫ್ಲಕ್ಸ್” ಎಂದು ಹೇಳಿ, ಚಿಂತಿಸುವ ಅಗತ್ಯವಿಲ್ಲ ಎಂದು ಇತರರಿಗೆ ಭರವಸೆ ನೀಡಿದ್ದರು. ತಮಗೆ ಮತ್ತು ಶರ್ಮಾಗೆ ಈಜು ಕಲಿಸಿದ ಪರಿಣತ ಈಜುಗಾರರಾದ ಜುಬೀನ್, ಕೇವಲ ನೀರಿನಲ್ಲಿ ಮುಳುಗಿ ಸಾಯಲು ಸಾಧ್ಯವಿಲ್ಲ ಎಂದು ಗೋಸ್ವಾಮಿ ಪ್ರತಿಪಾದಿಸಿದ್ದಾರೆ.
“ಪತ್ನಿಯಿಂದಲೂ ಸಂಚಿನ ಶಂಕೆ”
ಜುಬೀನ್ ಅವರ ಪತ್ನಿ ಗರಿಮಾ ಸೈಕಿಯಾ ಗರ್ಗ್ ಕೂಡ ಸಾವಿನ ಬಗ್ಗೆ ಸಂಚಿನ ಶಂಕೆ ವ್ಯಕ್ತಪಡಿಸಿದ್ದಾರೆ. “ಅಂದು ಅವರು ತೀವ್ರ ಬಳಲಿದ್ದರು. ಅವರಿಗೆ ಮೂರ್ಛೆ ರೋಗವಿತ್ತು. ವೈದ್ಯರು ನೀರು ಅಥವಾ ಬೆಂಕಿಯ ಬಳಿ ಹೋಗದಂತೆ ಸಲಹೆ ನೀಡಿದ್ದರು. ಆದರೂ, ಅವರನ್ನು ವಿಹಾರ ನೌಕೆಯಲ್ಲಿ ಪಾರ್ಟಿಗೆ ಕರೆದೊಯ್ದು, ಲೈಫ್ ಜಾಕೆಟ್ ಇಲ್ಲದೆ ಈಜಲು ಬಿಡಲಾಯಿತು. ನನ್ನ ಪತಿಯನ್ನು ಹೀಗೇಕೆ ನಡೆಸಿಕೊಳ್ಳಲಾಯಿತು?” ಎಂದು ಅವರು ಪ್ರಶ್ನಿಸಿದ್ದಾರೆ. ಈ ಸ್ಫೋಟಕ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಗಾಯಕನ ಸಾವಿನ ತನಿಖೆಗಾಗಿ ನ್ಯಾಯಾಂಗ ಆಯೋಗವನ್ನು ರಚಿಸುವುದಾಗಿ ಘೋಷಿಸಿದ್ದಾರೆ.


















