ಬೆಂಗಳೂರು: ಕೇಂದ್ರ ಸರ್ಕಾರವು ಅಡುಗೆ ಅನಿಲ ಸಿಲಿಂಡರ್ (ಎಲ್ ಪಿಜಿ) ಬುಕಿಂಗ್, ಡೆಲಿವರಿ ಹಾಗೂ ಸಬ್ಸಿಡಿಯಲ್ಲಿ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಸೆಂಟ್ರಲ್ ಗವರ್ನ್ ಮೆಂಟ್ ಸ್ಕೀಮ್ ಫಾರ್ ರೇಷನ್ ಕಾರ್ಡ್ ಆ್ಯಂಡ್ ಗ್ಯಾಸ್ ಸಿಲಿಂಡರ್ 2025 ನಿಯಮಗಳಿಗೆ ತಿದ್ದುಪಡಿ ತರಲಾಗಿದ್ದು, ಹೊಸ ನಿಯಮಗಳು 2028ರ ಡಿಸೆಂಬರ್ 31ರವರೆಗೆ ಚಾಲ್ತಿಯಲ್ಲಿರಲಿವೆ. ಗ್ಯಾಸ್ ಸಿಲಿಂಡರ್ ವಿತರಣೆ, ಬುಕಿಂಗ್ ಸೇರಿ ಎಲ್ಲ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಕೇಂದ್ರ ಸರ್ಕಾರವು ನಿಯಮಗಳನ್ನು ಬದಲಿಸಿದೆ ಎಂದು ತಿಳಿದುಬಂದಿದೆ.
ಬುಕಿಂಗ್ ಗೆ ಕೆವೈಸಿ ಕಡ್ಡಾಯ
ಗ್ಯಾಸ್ ಸಿಲಿಂಡರ್ ಬುಕಿಂಗ್ ಮಾಡುವ ಮೊದಲು ಗ್ರಾಹಕರು ಕೆವೈಸಿ ಮಾಡಿಸಿರುವುದು ಕಡ್ಡಾಯವಾಗಿದೆ. ಗ್ಯಾಸ್ ಏಜೆನ್ಸಿ ಜತೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು, ಸರಿಯಾದ ಮೊಬೈಲ್ ನಂಬರ್ ನೀಡುವುದು, ಒಟಿಪಿ ಮೂಲಕ ಆಧಾರ್ ಲಿಂಕಿಂಗ್ ಅನ್ನು ದೃಢಪಡಿಸುವ ಮೂಲಕ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸುವುದು ಈಗ ಕಡ್ಡಾಯವಾಗಿದೆ. ಕೆವೈಸಿ ಮಾಡಿಸದಿದ್ದರೆ ಎಲ್ ಪಿ ಜಿ ಸಿಲಿಂಡರ್ ಡೆಲಿವರಿಯಲ್ಲಿ ವ್ಯತ್ಯಯವಾಗಲಿದೆ.
ಬುಕಿಂಗ್ ಮಾಡುವಾಗ ಒಟಿಪಿ ಇಲ್ಲದಿದ್ದರೆ ಗ್ಯಾಸ್ ಸಿಲಿಂಡರ್ ಸಿಗುವುದಿಲ್ಲ. ಕೇಂದ್ರ ಸರ್ಕಾರವು ಬದಲಾವಣೆ ಮಾಡಲು ಮುಖ್ಯ ಉದ್ದೇಶವೆಂದರೆ ವಂಚನೆಯನ್ನು ತಡೆಯುವುದು. ಸಿಲಿಂಡರ್ಗಳನ್ನು ಬ್ಲಾಕ್ ಮಾರ್ಕೆಟ್ನಲ್ಲಿ ಮಾರಾಟ ಮಾಡುವುದನ್ನು ತಡೆಯುವುದು ಮತ್ತು ಸಬ್ಸಿಡಿ ಸರಿಯಾದ ವ್ಯಕ್ತಿಗೆ ತಲುಪುವಂತೆ ಮಾಡುವುದು ಇದರ ಗುರಿಯಾಗಿದೆ. ಒಟಿಪಿ ವಿತರಣೆ ಮತ್ತು ಇ-ಕೆವೈಸಿ ಯಿಂದ ಗ್ಯಾಸ್ ಡೆಲಿವರಿ ಇನ್ನಷ್ಟು ಸುರಕ್ಷಿತವಾಗಿರಲಿದೆ. ಅಲ್ಲದೆ ಯಾವುದೇ ಅಕ್ರಮವನ್ನು ಸುಲಭವಾಗಿದೆ ಪತ್ತೆಹಚ್ಚಬಹುದು.
ಹೊಸ ನಿಯಮವು ಸಬ್ಸಿಡಿ ಹಣದ ದುರುಪಯೋಗಪಡಿಸುವುದನ್ನು ತಡೆಯಲಿದೆ. ಉದಾಹರಣೆಗೆ, ಕೆಲವರು ಒಂದಕ್ಕಿಂತ ಹೆಚ್ಚು ಗ್ಯಾಸ್ ಕನೆಕ್ಷನ್ ಹೊಂದಿದ್ದು, ಸಬ್ಸಿಡಿ ಹಣವನ್ನು ಪಡೆಯುತ್ತಿದ್ದರು. ಆದರೆ ಈಗ ಕೆವೈಸಿ ಮತ್ತು ಆಧಾರ್ ಲಿಂಕ್ ಮಾಡುವುದರಿಂದ ಇಂತಹ ಅಕ್ರಮಗಳನ್ನು ತಡೆಯಬಹುದು.