ಬೆಂಗಳೂರು : ಡಾ. ರಾಜಕುಮಾರ್ ಹಾಗೂ ಪುನೀತ್ ರಾಜಮಾರ್ ಅಭಿನಯದ ‘ಭಕ್ತ ಪ್ರಹ್ಲಾದ’ ಚಿತ್ರ ಕನ್ನಡದ ಅತ್ಯುತ್ತಮ ಚಿತ್ರಗಳ ಪೈಕಿ ಒಂದು. ಭಕ್ತ ಪ್ರಹ್ಲಾದ ಮತ್ತು ನರಸಿಂಹಾವತಾರ ಕಥೆಯನ್ನು ಮುಂದಿನ ತಲೆಮಾರಿನವರಿಗೆ ತಿಳಿಸಲು ಒಂದು ಅನಿಮೇಷನ್ ಚಿತ್ರ ತಯಾರಾಗಿದೆ. ಆ ಚಿತ್ರದ ಹೆಸರು ‘ಮಹಾವತಾರ ನರಸಿಂಹ’.

ಈಗಾಗಲೇ ಚಿತ್ರದ ಟ್ರೇಲರ್ ಚಿತ್ರ ಪ್ರೇಮಿಗಳ ಹೃದಯ ಗೆದ್ದಿದೆ. ಇದೇ ಜುಲೈ 25ರಂದು ಕನ್ನಡ ಸೇರಿದಂತೆ ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ದೇಶಾದ್ಯಂತ ಬಿಡಗುಡೆ ಆಗುತ್ತಿದೆ. ಕನ್ನಡದಲ್ಲಿ ಈ ಚಿತ್ರವನ್ನು ಪ್ರತಿಷ್ಠಿತ ಚಿತ್ರ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲ್ಮ್ಸ್ ಅರ್ಪಿಸುತ್ತಿದೆ ಎನ್ನುವುದು ವಿಶೇಷ.

ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಚಿತ್ರದ ನಿರ್ದೇಶಕ ಅಶ್ವಿನ್ ಕುಮಾರ್, ‘2018ರಲ್ಲಿ ಗೆಳೆಯರು ಸೇರಿ ಭಕ್ತ ಪ್ರಹ್ಲಾದ ಸಿನೆಮಾದ ಬಗ್ಗೆ ಚರ್ಚೆ ಮಾಡಿದ್ದೇವು. ಆ ನಂತರ ನರಸಿಂಹ ಸ್ವಾಮಿ ಕುರಿತು ಸಿನಿಮಾ ಮಾಡಲು ಕನ್ನಡದ ‘ಭಕ್ತ ಪ್ರಹ್ಲಾದ’ ಚಿತ್ರ ಸೇರಿದಂತೆ ಹಲವು ಚಿತ್ರಗಳು ಮತ್ತು ಪುರಾಣಗಳನ್ನು ಓದಿ ಚಿತ್ರಕಥೆ ಮಾಡಲಾಗಿದೆ. ಈ ‘ಮಹಾವತಾರ ನರಸಿಂಹ’ಚಿತ್ರಕ್ಕಾಗಿ ನಮ್ಮ ತಂಡ ಐದು ವರ್ಷ ಶ್ರಮ ಹಾಕಿದೆ ಎಂದವರು ಹೇಳಿದ್ದಾರೆ.
‘ಭಕ್ತ ಪ್ರಹ್ಲಾದʼ ಚಿತ್ರವನ್ನು ಮೂಲವಾಗಿಟ್ಟುಕೊಂಡು ಚಿತ್ರ ಮಾಡಿದ್ದೇವೆ. ಸಂಪೂರ್ಣ ಆನಿಮೇಷನ್ ಚಿತ್ರ ಮಾಡುವುದು ಸುಲಭದ ಮಾತಲ್ಲ. ಸಾಕಷ್ಟು ತಾಂತ್ರಿಕ ಸಮಸ್ಯೆಗಳಿದ್ದು, ಅವನ್ನೆಲ್ಲಾ ಮೀರಿ ನಾಲ್ಕೂವರೆ ವರ್ಷಗಳಳ್ಲಿ ಈ ಚಿತ್ರ ರೂಪಿಸಿದ್ದೇವೆ. ಈ ಸರಣಿಯ ಮುಂದುವರೆದ ಭಾಗವಾಗಿ ‘ಮಹಾವತಾರ ಪರಶುರಾಮ’ ಮಾಡಲು ಯೋಜನೆ ಹಾಕಿಕೊಂಡಿದ್ದೇವೆ’ ಎಂದು ತಿಳಿಸಿದ್ದಾರೆ.

ಶಿಲ್ಪಾ ಧವನ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯ ಮೂಲಕ ಚಿತ್ರವನ್ನು ಬಿಡುಗಡೆಯಾಗುತ್ತಿದೆ. ‘ಹೊಂಬಾಳೆ ಸಂಸ್ಥೆ ಜೊತೆ ಕೈ ಜೋಡಿಸಿದ್ದು ತುಂಬಾ ಖುಷಿ ಇದೆ. ಇದು ನಮ್ಮ ನಿರ್ಮಾಣದ ಮೊದಲ ಸಿನಿಮಾ. ನಮ್ಮ ಕ್ಲೀಂ ಪ್ರೊಡಕ್ಷನ್ಸ್ ಸಂಸ್ಥೆಯಿಂದ ಇನ್ನಷ್ಟು ಸಿನಿಮಾ ಮಾಡುತ್ತೇವೆ. ಈ ಚಿತ್ರವನ್ನು ನಾವು ಅತ್ಯುತ್ತಮ ಆನಿಮೇಷನ್ ತಂತ್ರಜ್ಞಾನ ಮೂಲಕ ಮಾಡಲಾಗಿದೆ. ಇದು ಡಬ್ಬಿಂಗ್ ಚಿತ್ರವಲ್ಲ ಕನ್ನಡ ಸಿನಿಮಾ’ ಎಂದವರು ಹೇಳಿದ್ದಾರೆ.
ನಂತರ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯ ಪರವಾಗಿ ಆದರ್ಶ್ ಮಾತನಾಡಿ, ‘ನಮ್ಮ ತಂಡ ಸಿನಿಮಾ ನೋಡಿ, ಈ ಚಿತ್ರವನ್ನು ಅರ್ಪಿಸುತ್ತಿದ್ದೇವೆ. ರಾಜ್ಯಾದ್ಯಂತ ಸುಮಾರು 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಯೋಚನೆ ಇದೆʼ ಎಂದು ತಿಳಿಸಿದ್ದಾರೆ.