ಹುಬ್ಬಳ್ಳಿ: ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ಅದ್ಧೂರಿಯಾಗಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ತೆರಳುವ ಯಾತ್ರಿಗಳ ಅನುಕೂಲಕ್ಕಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಒಪ್ಪಂದದ ಮೇರೆಗೆ ಹಲವು ಮಾದರಿಯ ಬಸ್ಗಳ ವ್ಯವಸ್ಥೆ ಮಾಡಿಲಾಗಿದೆ. ಇದರ ಭಾಗವಾಗಿಯೇ ಶನಿವಾರ 3 ಬಸ್ ಗಳು ಮಹಾ ಕುಂಭಮೇಳದ ಕಡೆ ಪ್ರಯಾಣ ಬೆಳೆಸಿದವು.
10 ದಿನಗಳ ಪ್ರವಾಸವಾಗಿದ್ದು, ಯಾತ್ರಿಗಳು ಮಾರ್ಗ ಮಧ್ಯದಲ್ಲಿ ನಾಸಿಕ್, ಓಂಕಾರೇಶ್ವರ, ಉಜ್ಜಯಿನಿ, ಚಿತ್ರಕೂಟ, ಅಯೋಧ್ಯಾ, ಕಾಶಿ, ಔರಂಗಾಬಾದ್, ಅಕ್ಕಲಕೋಟೆ ಸೇರಿ ಹತ್ತು ಹಲವು ಧಾರ್ಮಿಕ ಕೇಂದ್ರಿತ ಸ್ಥಳಗಳಿಗೆ ಭೇಟಿ ನೀಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.
ಮೊದಲ ಹಂತದ 3 ನಾನ್ ಎಸಿ ಸ್ಲೀಪರ್ ಬಸ್ ಗಳು ಪ್ರವಾಸ ಆರಂಭಿಸಿವೆ. ಸುಗಮ, ಸುರಕ್ಷಿತ ಪ್ರಯಾಣಕ್ಕಾಗಿ ತಲಾ ಇಬ್ಬರು ಹಿರಿಯ ಚಾಲಕರು ಹಾಗೂ ನಿರ್ವಹಣೆಗಾಗಿ ತಾಂತ್ರಿಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಹೇಳಿದರು.
ಮೂರು ಬಸ್ ಗಳ ಸಂಚಾರಕ್ಕೆ ಚಾಲನೆ ನೀಡುವ ವೇಳೆ ಡಿಟಿಓ ಕೆ.ಎಲ್. ಗುಡೆಣ್ಣವರ, ಸಹಾಯಕ ಲೆಕ್ಕಾಧಿಕಾರಿ ಸುನಿಲ ವಾಡೇಕರ, ಮ್ಯಾನೇಜರ್ ದೀಪಕ ಜಾಧವ್, ವಿರುಪಾಕ್ಷಿ ಹಟ್ಟಿ, ದಾವಲಸಾಬ ಬೂದಿಹಾಳ ಮತ್ತು ಘಟಕದ ಸಿಬ್ಬಂದಿ ಇದ್ದರು. ಮಾಹಿತಿಗೆ 77609 91674, 77609 91682 ಮೊಬೈಲ್ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.