ಬೆಂಗಳೂರು: ಮದರಸಾದಲ್ಲಿ (Madrasa) ಬಾಲಕಿಯರ ಮೇಲೆ ಹಲ್ಲೆ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿ ವಿರುದ್ಧ ದೂರು ಕೊಟ್ಟ ಪೋಷಕರಿಗೆ ಕೊಲೆ ಬೆದರಿಕೆ (Death Threat) ಹಾಕಿರುವ ಆರೋಪವೊಂದು ಕೇಳಿ ಬಂದಿದೆ.
ದೂರು ನೀಡಿದ್ದನ್ನು ಹಿಂಪಡೆಯಬೇಕು. ಇಲ್ಲವಾದರೆ ಕೊಲೆ ಮಾಡುವುದಾಗಿ ಮದರಸಾದವರು ಫೋನ್ ಮೂಲಕ ಬೆದರಿಕೆ ಹಾಕಿದ್ದಾರೆ ಎಂದು ಸಂತ್ರಸ್ತ ಪೋಷಕರು ಆರೋಪಿಸಿದ್ದಾರೆ. ಅನ್ವರ್ ಅಲಿ, ಹಸನ್ ಮುಸ್ಮಿಲ್ ವಿರುದ್ಧ ಜೀವ ಬೆದರಿಕೆ ಹಾಕಿದ ಆರೋಪ ಮಾಡಲಾಗಿದೆ. ಈ ಕುರಿತು ಸಂತ್ರಸ್ತರ ಬಾಲಕಿಯ ತಾಯಿ ಯಶವಂತಪುರ ಠಾಣೆಗೆ ದೂರು ನೀಡಿದ್ದಾರೆ.
ಹಸನ್ ಎಂಬಾತ ಮದರಸಾದಲ್ಲಿ ಹೆಣ್ಣು ಮಕ್ಕಳ ಮೇಲೆ ಹಲ್ಲೆ ಮಾಡಿದ್ದ. ಹಲ್ಲೆ ನಡೆಸಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ನಂತರ ಆರೋಪಿ ಹಸನ್ನನ್ನು ಕೊತ್ತನೂರು ಠಾಣೆ ಪೊಲೀಸರು ಬಂಧಿಸಿದ್ದರು. ಅಲ್ಲದೇ, ಮದರಸಾವನ್ನು ಪೊಲೀಸರು ಬಂದ್ ಮಾಡಿಸಿದ್ದರು. ಕೇಂದ್ರ ಮಹಿಳಾ ಆಯೋಗದ ಕಮಿಟಿ ಸದಸ್ಯರು ಕೂಡ ಮದರಸಾಗೆ ಭೇಟಿ ನೀಡಿದ್ದರು. ಈಗ ಆರೋಪಿಯ ಹಿಂದಿದ್ದವರು ಕೇಸ್ ಹಿಂಪಡೆಯುವಂತೆ ಪೋಷಕರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.