ಬೆಂಗಳೂರು : ಮದ್ದೂರು ಗಲಾಟೆ ಪ್ರಕರಣದಲ್ಲಿ ಬಿಜೆಪಿಯವರು ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಸಿಎಂ ಕಾನೂನು ಸಲಹೆಗಾರ, ಶಾಸಕ ಪೊನ್ನಣ್ಣ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿಯಿಂದ ಮದ್ದೂರು ಚಲೋ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಸೌಧದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಪೊನ್ನಣ್ಣ, ಮದ್ದೂರಿನಲ್ಲಿ ಆಗಿರುವ ಘಟನೆ ಖಂಡನೀಯ. ಎಲ್ಲರೂ ಆ ಘಟನೆಯನ್ನು ಖಂಡಿಸುತ್ತಾರೆ. ಆದರೆ ಇದಕ್ಕೆ ಕುಮ್ಮಕ್ಕು ಯಾರು ಕೊಟ್ಟಿದ್ದಾರೆ ಎಂದು ಜನರಿಗೆ ಗೊತ್ತಿದೆ. ಅಲ್ಲಿ ಕಲ್ಲು ಎಸೆದರವರು, ಘಟನೆಗೆ ಕಾರಣ ಆಗಿರುವವರು ಯಾರೂ ಅಲ್ಲಿಯವರಲ್ಲ, ಹೊರಗಿನಿಂದ ಬಂದವರು. ಈಗಾಗಲೇ ಸರ್ಕಾರ ಉನ್ನತ ಮಟ್ಟದ ತನಿಖೆಗೆ ಆದೇಶ ಮಾಡಿ ತನಿಖೆ ಆಗುತ್ತಿದೆ. ಬಿಜೆಪಿಯವರಿಗೆ ಯಾವುದೇ ತನಿಖೆ ಆಗಬಾರದು. ಇವರೇ ನ್ಯಾಯಾಧೀಶರಾಗಿ ತೀರ್ಪು ನೀಡುತ್ತಾರೆ. ಬಿಜೆಪಿ ಅವರು ಬೆಂಕಿ ಹಚ್ಚುವ ಕೆಲಸ ಮಾಡುತ್ತಾರೆ ಎಂದು ಕಿಡಿಕಾರಿದ್ದಾರೆ.
ಸಾಮರಸ್ಯವನ್ನು ಕಾಪಾಡುವ ಕೆಲಸ ಬಿಜೆಪಿ ಮಾಡಬೇಕು. ಆದರೆ ಸಾಮರಸ್ಯ ಹಾಳು ಮಾಡುವ ಕೆಲಸ ಮಾಡುತ್ತಿದ್ದಾರೆ. ಇಂತಹ ಘಟನೆ ಆದಾಗ ಬಿಜೆಪಿಯವರು ಹದ್ದುಗಳ ತರಹ ಕಾಯುತ್ತಿರುತ್ತಾರೆ. ಇಂತಹ ಘಟನೆ ಬಳಸಿಕೊಂಡು ಸಮಾಜದಲ್ಲಿ ಒಡಕು ಮೂಡಿಸುವುದಕ್ಕೆ ಕಾಯುತ್ತಿರುತ್ತಾರೆ. ಹೀಗಾಗಿ ಬಿಜೆಪಿಯವರನ್ನು ಜನ ಗಂಭೀರವಾಗಿ ಪರಿಗಣಿಸಿಲ್ಲ. ಈಗಾಗಲೇ ತನಿಖೆ ಆಗುತ್ತಿದೆ. 22 ಜನರ ಬಂಧನವಾಗಿದೆ. ಯಾರೇ ತಪ್ಪಿತಸ್ಥರು ಇದ್ದರೂ ಕ್ರಮ ಆಗುತ್ತದೆ. ತನಿಖೆ ಬಳಿಕ ಇದರ ಹಿಂದೆ ಯಾರಿದ್ದಾರೆ ಎಂದು ಗೊತ್ತಾಗುತ್ತದೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಅಲ್ಪಸಂಖ್ಯಾತ ಒಲೈಕೆ ಮಾಡುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿ, ಅಲ್ಪಸಂಖ್ಯಾತ, ಬಹುಸಂಖ್ಯಾತರು, ದಲಿತರು ಎಂದು ಅಲ್ಲ. ಎಲ್ಲರಿಗೂ ಸಂವಿಧಾನ, ಕಾನೂನು ಅನ್ವಯ ಆಗುತ್ತದೆ. ಬಿಜೆಪಿಯವರಿಗೂ ಸಂವಿಧಾನ, ಕಾನೂನು ಅನ್ವಯ ಆಗುತ್ತದೆ. ಬಿಜೆಪಿಯವರು ಜವಾಬ್ದಾರಿಯುತವಾಗಿ ನಡೆದುಕೊಳ್ಳಲಿ ಎಂದು ತಿರುಗೇಟು ನೀಡಿದ್ದಾರೆ.
ಮದ್ದೂರು ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆ ಆಗಬೇಕು ಎಂದು ಆಗ್ರಹ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರಗೆ ತಿರುಗೇಟು ಕೊಟ್ಟ ಪೊನ್ನಣ್ಣ, ನ್ಯಾಯಾಂಗ ತನಿಖೆ ಅವಶ್ಯಕತೆ ಇಲ್ಲ. ಘಟನೆಗೆ ಸಂಬಂಧಿಸಿದಂತೆ ಎಫ್.ಐ.ಆರ್ ದಾಖಲಾಗಿದೆ. ಪೊಲೀಸ್ ತನಿಖೆ ಆಗುತ್ತಿದೆ. ಈ ಹಂತದಲ್ಲಿ ನ್ಯಾಯಾಂಗ ತನಿಖೆ ಅವಶ್ಯಕತೆ ಇಲ್ಲ. ಹಾಗೇನಾದರೂ ಅವಶ್ಯಕತೆ ಇದ್ದರೆ ಸರ್ಕಾರ ಅದನ್ನು ನಿರ್ಧಾರ ಮಾಡುತ್ತದೆ. ಆದರೆ ಸರ್ಕಾರ ಅಪರಾಧಿಗಳನ್ನು ಬಂಧನ ಮಾಡಿ ಅವರಿಗೆ ಶಿಕ್ಷೆ ಕೊಡಿಸುವ ಕೆಲಸ ಮಾಡುತ್ತದೆ. ಸದ್ಯ ಈಗ ನ್ಯಾಯಾಂಗ ತನಿಖೆ ಅವಶ್ಯಕತೆ ಇಲ್ಲ. ಪೊಲೀಸ್ ತನಿಖೆ ಆಗಲಿ ಎಂದಿದ್ದಾರೆ.



















