ಬಾಗಲಕೋಟೆ: ಪ್ರೀತಿಸಿ ಮದುವೆಯಾಗಿದ್ದ ಯುವಕನ ಕುಟುಂಬಸ್ಥರ ಮೇಲೆ ಯುವತಿ ಕಡೆಯವರು ಹಲ್ಲೆ ಮಾಡಿರುವ ಘಟನೆ ನಡೆದಿದೆ.
ಗಲಕೋಟೆ ತಾಲ್ಲೂಕಿನ ಬೇವೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಒಂದೇ ಸಮುದಾಯದ ಯುವಕ, ಯುವತಿ ಪರಸ್ಪರ ಪ್ರೀತಿಸಿದ್ದರು. ಆದರೆ, ಯುವತಿಯ ಮನೆಯವರಿಂದ ಪ್ರೀತಿಗೆ ವಿರೋಧ ವ್ಯಕ್ತವಾಗಿತ್ತು. ಗ್ಯಾನೇಶ್ ಹಾಗೂ ಶಶಿಕಲಾ ಪ್ರೀತಿಸಿ ಮದುವೆಯಾಗಿದ್ದರು. ಗ್ಯಾನೇಶ್ ಹಾಗೂ ಶಶಿಕಲಾ ಇಬ್ಬರೂ ನರ್ಸಿಂಗ್ ಓದುತ್ತಿದ್ದು, ಆ ವೇಳೆಯೇ ಪರಸ್ಪರ ಪ್ರೀತಿಯಲ್ಲಿ ಬಿದ್ದಿದ್ದರು.
ವಿರೋಧದ ಮಧ್ಯೆಯೂ ಯುವಕನ ಮನೆಯ ಕಡೆಯಿಂದ ಶಾಸ್ತ್ರೋಕ್ತವಾಗಿ ಈ ಜೋಡಿ ಮದುವೆಯಾಗಿತ್ತು. ನಂತರ ಹಿರಿಯರ ಮಧ್ಯಸ್ಥಿಕೆಯಿಂದ ಜಗಳ ಬಗೆಹರಿದಿತ್ತು. ಯುಗಾದಿ ಸಂದರ್ಭದಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತ್ತು. ಅಲ್ಲಿಂದ ಇಲ್ಲಿಯವರೆಗೆ ಸುಮ್ಮನಿದ್ದ ಯುವತಿಯ ಮನೆಯವರು ಯುವಕನ ಮನೆಗೆ ನುಗ್ಗಿ ಜಗಳ ಮಾಡಿದ್ದಾರೆ. ಯುವಕನ ತಾಯಿ ಹಾಗೂ ಇಬ್ಬರು ಸಹೋದರರ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಗಾಯಾಳುಗಳು ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.