ಬೆಂಗಳೂರು | ಯೋಗಿ ಈಗ ಕರುನಾಡ ಸುಲ್ತಾನ ಯೋಗೇಶ್ ಆಗಿದ್ದಾರೆ. ಯೋಗೇಶ್ ನಟನೆಯ 50ನೇ ಚಿತ್ರ “ಕಿಂಗ್” ಶೀರ್ಷಿಕೆಯನ್ನು ಸ್ಯಾಂಡಲ್ ವುಡ್ ಕಿಂಗ್ ಡಾ.ಶಿವರಾಜ್ ಕುಮಾರ್ ಅನಾವರಣ ಮಾಡಿದ್ರು. ಚಿತ್ರವನ್ನು ಜಾಕ್ ಚೊಚ್ಚಲ ಬಾರಿಗೆ ನಿರ್ದೇಶನ ಮಾಡುತ್ತಿದ್ದು ಮಹೇಂದರ್, ಸಿದ್ದೇಶ್, ಸಂತೋಷ್ ಬಸವರಾಜ್, ವಿಶಾಲ್ ಪ್ರಸಾದ್, ಮಲ್ಲಿಕಾರ್ಜುನ ಸ್ವಾಮಿ ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ.

ಟೀಸರ್ ಕನ್ನಡದ ಜೊತೆಗೆ ತೆಲುಗು ಮತ್ತು ತಮಿಳು ಭಾಷೆಯಲ್ಲಿ ಸಿದ್ದಗೊಂಡಿದ್ದು, ಮುಂದಿನ ಒಂದು ತಿಂಗಳಲ್ಲಿ ಚಿತ್ರೀಕರಣಕ್ಕೆ ತೆರಳಲು ಚಿತ್ರತಂಡ ಸಜ್ಜಾಗಿದೆ, ನಟ ಯೋಗೇಶ್ ಹಿಂದೆಂದೂ ಕಾಣದ ರೀತಿ ಕಾಣಿಸಿಕೊಂಡಿದ್ದಾರೆ. ಡಾ.ಶಿವರಾಜ್ ಕುಮಾರ್ ಮಾತನಾಡಿ “ಕಿಂಗ್” ಚಿತ್ರದಲ್ಲಿ ರಕ್ತ ಸಿಕ್ತ ಅಧ್ಯಾಯ ಮಾತ್ರ ಅಲ್ಲ ಎಮೋಷನ್ ಕೂಡ ಇದೆ. ಕಪಾಲಿ ಚಿತ್ರದಲ್ಲಿ ಓಂ ಚಿತ್ರ ಹೊಸ ದಾಖಲೆ ಬರೆದಿತ್ತು, ಜೋಗಿ ಸೇರಿದಂತೆ ಅನೇಕ ಚಿತ್ರಗಳು ಇಲ್ಲಿ ಯಶಸ್ಸು ಕಂಡಿವೆ. ಯೋಗಿಯ ನಂದ ಲವ್ಸ್ ನಂದಿತಾ ಚಿತ್ರ ಕೂಡ ಯಶಸ್ಸು ಕಂಡಿತ್ತು, ಹೀಗಾಗಿ ಕಪಾಲಿ ಚಿತ್ರಮಂದಿರದ ಮೇಲೆ ವಿಶೇಷ ಅಭಿಮಾನವಿದೆ. ಈಗ ಹೊಸ ರೂಪದಲ್ಲಿ ಸಜ್ಜುಗೊಂಡಿರುವುದು ಸಂತಸದ ಸಂಗತಿ, ನಟ ಯೋಗಿ ನಟನೆಗೆ ನಾನು ದೊಡ್ಡ ಅಭಿಮಾನಿ.ಅಪ್ಪು ಜೊತೆ ಹುಡುಗರು ಚಿತ್ರದಲ್ಲಿ ನಟಿಸಿದ್ದರು, ಜೊತೆಗೆ ನನ್ನ ಜೊತೆಯೂ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಉತ್ತಮ ನಟ, ಒಳ್ಳೆಯದಾಗಬೇಕು ಎಂದು ಮನದುಂಬಿ ಹಾರೈಸಿದರು.
ನಟ ಯೋಗೇಶ್ ಮಾತನಾಡಿ ಇದುವರೆಗೂ ಒಂದು ಲೆಕ್ಕ, ಇನ್ಮುಂದೆ ಮತ್ತೊಂದು ಲೆಕ್ಕ. ತಪ್ಪುಗಳನ್ನು ಸರಿ ಪಡಿಸಿಕೊಂಡಿದ್ದೇನೆ. ‘ಕಿಂಗ್’ ವೃತ್ತಿ ಜೀವನದ 50ನೇ ಚಿತ್ರ, ಸಿನಿಮಾದಲ್ಲಿ ಬೇರೆ ಲುಕ್ನಲ್ಲಿ ಕಾಣಿಸಿಕೊಳ್ಳಲಿದ್ದೇನೆ. ನಿರ್ದೇಶಕ ಜಾಕ್ ಕಥೆ ಹೇಳಿದಾಗ ಥ್ರಿಲ್ ಆದೆ. ಬಜೆಟ್ ಕೇಳಿ ಒಂದು ಕ್ಷಣ ಹೌರಾರಿದೆ. ಅಂತಹ ಸಮಯದಲ್ಲಿ ನಿರ್ಮಾಪಕರು ಸಿಕ್ಕರು ಎಲ್ಲರಿಗೂ ಇಷ್ಟವಾಗುವ ಸಿನಿಮಾ ನೀಡುತ್ತೇವೆ. ಟೀಸರ್ನಲ್ಲಿ ಮೂಡಿ ಬರುವ ಟೇಕ್ ಅನ್ನು 5 ಬಾರಿ ತೆಗೆದುಕೊಂಡಿದ್ದೇನೆ ಎಂದರು.
ಚಿಕ್ಕ ವಯಸ್ಸಿನಲ್ಲಿಯೇ ನಾಯಕನಾದೆ,ಸೋಲು ಗೆಲುವು ಎಲ್ಲವನ್ನೂ ಕಂಡೆ. ಮತ್ತೆ ಪುಟಿದೇಳಲು ಸಿದ್ದನಾಗಿದ್ದೇನೆ. ಅದಕ್ಕೆ ಕಿಂಗ್ ಚಿತ್ರ ಪೂರಕವಾಗಲಿದೆ, ಮೊದಲ ಕನ್ನಡದಲ್ಲಿ ಮಾತ್ರ ಸಿನಿಮಾ ಮಾಡೋಣ ಅಂತ ನಿರ್ಧರಿಸಿದ್ದೆವು. ಆನಂತರ ತೆಲುಗು, ತಮಿಳಿನಲ್ಲಿಯೂ ಚಿತ್ರ ಮೂಡಿಬರಲಿದೆ, ಇದುವರೆಗೆ ಸೈಲೆಂಟ್ ಆಗಿದ್ದೆ ಇನ್ನು ಮುಂದೆ ಹೊಸ ಹೊಸ ಪ್ರಾಜೆಕ್ಟ್ಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತೇನೆ ಎಂದು ಮಾಹಿತಿ ನೀಡಿದರು.
ನಿರ್ದೇಶಕ ಜಾಕ್ ಮಾತನಾಡಿ ಕನ್ನಡದ ಜೊತೆಗೆ ತೆಲುಗು ಮತ್ತು ತಮಿಳಿನಲ್ಲಿ ಚಿತ್ರ ಮಾಡಲಾಗುತ್ತಿದೆ, ಚಿತ್ರದಲ್ಲಿ ಬಾಲಿವುಡ್ ಸೇರಿದಂತೆ ತೆಲುಗು,ತಮಿಳು ಮತ್ತು ಮಲೆಯಾಳಂ ಭಾಷೆಯ ಕಲಾವಿದರು ಚಿತ್ರದಲ್ಲಿದ್ದಾರೆ. ಕಥೆ ಮಾಡಿಕೊಳ್ಳುವಾಗಲೇ ನಟ ಯೋಗಿ ನಟಿಸಿದ್ದರೆ ಚೆನ್ನ ಎಂದು ಹೇಳಿ ಅವರಿಗೆ ಕಥೆ ಹೇಳಿ ಸಿನಿಮಾ ಮಾಡುತ್ತಿದ್ದೇನೆ ದೊಡ್ಡ ಬಜೆಟ್ ಸಿನಿಮಾ, ಕನ್ನಡ, ತಮಿಳು ನೇಟೀವಿಟಿ ಅನ್ನುವುದಕ್ಕಿಂತ ಇಂಡಿಯನ್ ಸಿನಿಮಾ ಮಾಡುತ್ತೇವೆ ಎಂದರು.
ಚಿತ್ರವನ್ನು ಮಂಗಳೂರು, ಮೈಸೂರು, ಚೆನ್ನೈ ಸೇರಿದಂತೆ ವಿವಿಧ ಭಾಗಗಳಲ್ಲಿ ಚಿತ್ರೀಕರಣ ಮಾಡುವ ಉದ್ದೇಶವಿದೆ, ಯೋಗಿ ನಟನೆಯ ಅಂಬಾರಿ ಸಿನಿಮಾ ನೋಡಿ ಅವರ ನಟನೆ ಮೆಚ್ಚಿಕೊಂಡಿದ್ದೆ. ಚಿತ್ರ ಬರೀ ಆಕ್ಷನ್ ಅಷ್ಟೇ ಅಲ್ಲ ಕಣ್ಣೀರಿನ ಕಥೆಯನ್ನು ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಲಾಗುತ್ತಿದೆ, ಅದನ್ನು ಟೀಸರ್ನಲ್ಲಿ ತೋರಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನುಳಿದ ಕಲಾವಿದರು ಸೇರಿದಂತೆ ಚಿತ್ರದ ಬೇರೆ ಮಾಹಿತಿ ನೀಡಲಾಗುವುದು ಎಂದು ಮಾಹಿತಿ ಹಂಚಿಕೊಂಡರು.
ನಟ ಪ್ರತಾಪ್ ನಾರಾಯಣ್ ಮಾತನಾಡಿ ಚಿತ್ರದಲ್ಲಿ ಖಡಕ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದೇನೆ, ಟೀಸರ್ ಕುತೂಹಲ ಕೆರಳಿಸಿದೆ ಚಿತ್ರದಲ್ಲಿ ನಟಿಸಲು ಎದುರು ನೋಡುತ್ತಿದ್ದೇನೆ ಎಂದರು.
ಸಂಗೀತ ನಿರ್ದೇಶಕ ಶಶಾಂಕ್ ಶೇಷಗಿರಿ ಮಾತನಾಡಿ ಕಣ್ಣೀರಿನ ಕಥೆಯನ್ನು ‘ಕಿಂಗ್’ ಮೂಲಕ ಹೇಳುವ ಪ್ರಯತ್ನ ಮಾಡಲಾಗಿದೆ ಸದ್ಯಕ್ಕೆ ಮೂರು ಹಾಡುಗಳು ಚಿತ್ರದಲ್ಲಿವೆ. ಇದೊಂದು ಪ್ರಯೋಗಾತ್ಮಕ ಚಿತ್ರ ಎಂದು ಮಾಹಿತಿ ಹಂಚಿಕೊಂಡರು. ನಿರ್ಮಾಪಕರಾದ ಸಂತೋಷ್ ಬಸವರಾಜ್ , ಮಲ್ಲಿಕಾರ್ಜುನ್ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು, ಈ ವೇಳೆ ಹಿರಿಯ ನಿರ್ಮಾಪಕ ಟಿಪಿ ಸಿದ್ದರಾಜ್, ಭಾಮ ಹರೀಶ್, ಕೃಷ್ಣೇಗೌಡ ಸೇರಿದಂತೆ ಚಿತ್ರತಂಡದ ಅನೇಕರು ಉಪಸ್ಥಿತರಿದ್ದರು.
ಇದನ್ನೂ ಓದಿ ; ಮಹಾ ಶಿವರಾತ್ರಿ ಪ್ರಯುಕ್ತ ಭಾನುವಾರ GBA ವ್ಯಾಪ್ತಿಯಲ್ಲಿ ಮಾಂಸ ಮಾರಾಟ ನಿಷೇಧ



















