ನವದೆಹಲಿ: ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಯಲ್ಲಿ 26 ಜನ ಮೃತಪಟ್ಟಿದ್ದು, ಘಟನೆ ಕುರಿತು ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಪಾಕಿಸ್ತಾನದ ಉಗ್ರರ ವಿರುದ್ಧ ಸೇಡು ತೀರಿಸಿಕೊಳ್ಳಬೇಕು ಎಂದು ಆಗ್ರಹಿಸಲಾಗುತ್ತಿದೆ. ಕೇಂದ್ರ ಸರ್ಕಾರವೂ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇದರ ಬೆನ್ನಲ್ಲೇ, ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ) ಸಂಸ್ಥೆಯು ದಾಳಿಯಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ನೆರವಾಗುತ್ತಿದೆ.
ಹೌದು, ಪಹಲ್ಗಾಮ್ ಭೀಕರ ದಾಳಿಯಲ್ಲಿ ಮೃತಪಟ್ಟವರ ಕುಟುಂಬಸ್ಥರು ಎಲ್ಐಸಿ ಪಾಲಿಸಿ ಮಾಡಿಸಿದ್ದರೆ, ಅವರು ಕ್ಲೇಮ್ ಸಲ್ಲಿಸುವ ನಿಯಮಗಳನ್ನು ಸಡಿಲಗೊಳಿಸಿದೆ. ಪಹಲ್ಗಾಮ್ ಘಟನೆಯಿಂದ ತೀವ್ರ ದುಃಖವಾಗಿದೆ. ಬಾಧಿತರನ್ನು ಬೆಂಬಲಿಸಲು ಹಾಗೂ ಆರ್ಥಿಕ ಸಹಾಯ ಒದಗಿಸಲು ಎಲ್ಐಸಿ ಬದ್ಧವಾಗಿದೆ. ಕ್ಲೈಮ್ ಹಾಗೂ ಇನ್ನಿತರ ವಿಷಯಗಳಿಗೆ ಸಂಬಂಧಿಸಿದಂತೆ ತ್ವರಿತವಾಗಿ ಕಾರ್ಯ ನಿರ್ವಹಿಸಲಾಗುವುದು ಎಂದು ಕಂಪನಿ ಹೇಳಿದೆ.
ಮರಣ ಪ್ರಮಾಣಪತ್ರದ ಬದಲಾಗಿ, ಸರ್ಕಾರಿ ದಾಖಲೆಗಳಲ್ಲಿ ಇರುವ ಯಾವುದೇ ಸಾಕ್ಷಿ, ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ನೀಡಲಾದ ಪರಿಹಾರದ ಡಾಕ್ಯುಮೆಂಟ್ಸ್ನ್ನು ಕೂಡ ಪುರಾವೆಯಾಗಿ ಎಲ್ಐಸಿ ಪರಿಗಣಿಸಲಿದೆ ಎಂದು ಸಿಇಒ ಸಿದ್ಧಾರ್ಥ್ ಮೋಹಂತಿ ಹೇಳಿದ್ದಾರೆ.
ಪರಿಹಾರ ಧನ ಹಕ್ಕುದಾರರಿಗೆ ತಲುಪಿದೆಯೋ ಇಲ್ಲವೋ ಎನ್ನುವ ಬಗ್ಗೆಯೂ ಗಮನ ಹರಿಸಲಾಗುತ್ತದೆ ಎಂದು ಹೇಳಿದ್ದಾರೆ. ಹೆಚ್ಚಿನ ಸಹಾಯಕ್ಕಾಗಿ ಹಕ್ಕುದಾರರು ಹತ್ತಿರದ ಎಲ್ಐಸಿ ಶಾಖೆಗೆ ತೆರಳಬಹುದು. ಕಾಲ್ ಸೆಂಟರ್ -022 68276827 ಗೆ ಕರೆ ಮಾಡಬಹುದು ಹಾಗೆಯೇ, ed_cc@licindia.com www.licindia.in ವಿಳಾಸಕ್ಕೆ ಇ-ಮೇಲ್ ಕೂಡ ಮಾಡಬಹುದಾಗಿದೆ.
ಸಂತ್ರಸ್ತರು ಏನು ಮಾಡಬೇಕು?
ನಾಮಿನಿಯು ಪಾಲಿಸಿಯ ಮೂಲ ಪ್ರತಿಯೊಂದಿಗೆ ಶಾಖೆಗೆ ತೆರಳಿ, ಪಾಲಿಸಿ ಸಂಖ್ಯೆ, ಮರಣದ ದಿನಾಂಕ ಹಾಗೂ ಕಾರಣವನ್ನು ಲಿಖಿತವಾಗಿ ನೀಡಬೇಕು. ಕ್ಲೈಮ್ ಫಾರ್ಮ್ ಭರ್ತಿ ಮಾಡಿ, ಫಾರ್ಮ್ ನಲ್ಲಿ ನಾಮಿನಿ ಮತ್ತು ಪಾಲಿಸಿದಾರರ ನಡುವಿನ ಸಂಬಂಧದ ವಿವರ ನೀಡಬೇಕು. ಮುನ್ಸಿಪಲ್ ಕಚೇರಿ ಅಥವಾ ಆಸ್ಪತ್ರೆ ನೀಡಿದ ಡೆತ್ ಸರ್ಟಿಫಿಕೇಟ್ ನೀಡಿದರೆ ಕ್ಲೇಮ್ ನೀಡಲಾಗುತ್ತದೆ.