ಆರ್ ಸಿಬಿ ಅಭಿಮಾನಿಗಳ ಸಾವಿಗೆ ಇಡೀ ರಾಜ್ಯವೇ ಮಮ್ಮಲ ಮರಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ರಾಜ್ಯ ಸರ್ಕಾರವು ಹಲವರನ್ನು ಅಮಾನತು ಮಾಡಿದೆ. ಈ ವಿಚಾರವಾಗಿ ಇದೀಗ “ಸಿಟಿಜನ್ ರೈಟ್ಸ್ ಫೌಂಡೇಷನ್” ನಿಂದ ರಾಜ್ಯಪಾಲರಿಗೆ ಪತ್ರ ಬರೆಯಲಾಗಿದೆ.
ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಾ, ಸಾಮಾಜಿಕ ಹಿತಾಸಕ್ತಿ ಚಟುವಟಿಕೆಗಳಲ್ಲಿ ತೊಡಗಿರುವ ‘ಸಿಟಿಜನ್ ರೈಟ್ಸ್ ಫೌಂಡೇಷನ್’, ಬಿಟ್ ಕಾಯಿನ್, ಕೋವಿಡ್, ಬಿಬಿಎಂಪಿ ಅಕ್ರಮಗಳು, ನಿವೇಶನ ಹಂಚಿಕೆ ಅಕ್ರಮ, ಕೆಐಎಡಿಬಿ ಅವ್ಯವಹಾರಗಳು, ವೈದ್ಯಕೀಯ ಶಿಕ್ಷಣ ಇಲಾಖೆಗಳ ಹಗರಣ ಸೇರಿದಂತೆ ಅನೇಕ ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಗಮನ ಸೆಳೆದಿದ್ದು, ಅನೇಕ ಪ್ರಕರಣಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆಗಳ ಮೂಲಕ ಕಾನೂನು ಹೋರಾಟ ನಡೆಸಿದೆ.
ಕಾನೂನು ಸುವ್ಯವಸ್ಥೆಯ ವಿಚಾರ ಬಂದಾಗಲೂ ಸರ್ಕಾರ ಹಾಗೂ ರಾಜಭವನಕ್ಕೆ ಸೂಕ್ತ ಮಾಹಿತಿ ನೀಡುತ್ತ ಆಡಳಿತ ಸುಧಾರಣೆಗೆ ಬೆಂಗಾವಲಾಗಿ ನಿಲ್ಲುವ ಪ್ರಯತ್ನ ಮಾಡಿದೆ. ಇದೀಗ ‘ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನ ಕಾಲ್ತುಳಿತ ದುರಂತ’ದ ಬಗ್ಗೆ ಹಾಗೂ ಘಟನೆಯ ನಂತರದಲ್ಲಿ ನಡೆದಿರುವ ಬೆಳವಣಿಗೆಗಳ ಬಗ್ಗೆ ರಾಜಭವನದ ಗಮನಸೆಳೆಯುತ್ತಿದ್ದು, ಘಟನೆ ಬಗ್ಗೆ ಸೂಕ್ತ ತನಿಖೆ ನಡೆಯಬೇಕು, ಕಾನೂನು ಸುವ್ಯವಸ್ಥೆ ಕಾಪಾಡಲು ಶ್ರಮಿಸಿರುವ ಅಧಿಕಾರಿಗಳಿಗೆ ಆಗುತ್ತಿರುವ ಅನ್ಯಾಯವನ್ನು ತಡೆಯಬೇಕು. ಜೊತೆಗೆ ತನಿಖೆ ಮುಗಿಯುವವರೆಗೂ 11 ಜನರ ಮಾರಣಹೋಮಕ್ಕೆ ನೇರ ಕಾರಣವಾಗಿರುವ ರಾಜ್ಯ ಸರ್ಕಾರವನ್ನು ಅಮಾನತಿನಲ್ಲಿಡಬೇಕೆಂದು ಮನವಿ ಸಲ್ಲಿಸಲಾಗಿದೆ.