ಧಾರವಾಡ : ‘ನಮ್ಮ ತಾಯಿಯ ಹೆಸರಿನಲ್ಲಿ ಒಂದು ಗಿಡ ನೆಟ್ಟು ಅದನ್ನು ಪೋಷಿಸಿ ಬೆಳೆಸುತ್ತೇವೆ’ ಎಂದು ಜಿಲ್ಲೆಯ ಗಳಗಿಹುಲಕೊಪ್ಪ ಗ್ರಾಮದ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ವಿಶ್ವ ಪರಿಸರ ದಿನದಂದು ಸಾಮೂಹಿಕ ಸಂಕಲ್ಪ ಕೈಕೊಂಡು ವಿಶ್ವ ಪರಿಸರ ದಿನದ ಅರ್ಥಪೂರ್ಣ ಆಚರಣೆಗೆ ತೆರೆದುಕೊಂಡರು. ಇದಕ್ಕೆ ಪೂರಕವಾಗಿ ಶಾಲಾ ಆವರಣದಲ್ಲಿ ತಾವೇ ತಮ್ಮ ಸಂಕಲ್ಪ ಸಸಿಗಳನ್ನು ನೆಟ್ಟು ನೀರುಣಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರೌಢ ಶಾಲೆಯ ಮುಖ್ಯಾಧ್ಯಾಪಕಿ ಶಾಂತಾ ಮೀಶಿ, ಇಂದು ಮನುಕುಲಕ್ಕೆ ಕಂಟಕಪ್ರಾಯವಾಗಿರುವ ಪ್ಲಾಸ್ಟಿಕ್ ಮಾಲಿನ್ಯ ಕೊನೆಗೊಳಿಸುವುದೂ ಸಹ ಸಾರ್ವತ್ರಿಕ ಸಂಕಲ್ಪವಾಗಬೇಕು. ಎಲ್ಲೆಡೆ ಪ್ಲಾಸ್ಟಿಕ್ ಮುಕ್ತ ವಾತಾವರಣ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಶ್ರಮಿಸಬೇಕು. ಪ್ರಸ್ತುತ ಶಾಲೆಯ ಮಕ್ಕಳು ತಮ್ಮ ತಾಯಿಯ ಹೆಸರಿನಲ್ಲಿ ಸಸಿ ನೆಟ್ಟು ಅದನ್ನು ರಕ್ಷಿಸಿ ಬೆಳೆಸುವ ಸಂಕಲ್ಪ ಮಾಡಿರುವುದು ತಮಗೆ ವ್ಯಾಪಕ ಖುಷಿ ತಂದಿದೆ ಎಂದರು.
ವಿಜ್ಞಾನ ಶಿಕ್ಷಕಿ ರಮಾ ಪಾಟೀ¯ ವಿಶ್ವ ಪರಿಸರ ದಿನದ ಮಹತ್ವ ಕುರಿತು ಮಾತನಾಡಿದರು. ರಮೇಶ್ ಪರಿಟ್, ಆರ್. ಸಿ. ಹಿರೇಮಠ, ಎಂ. ಎ. ಕೊಂಕಣಿ, ಎಸ್. ಎ. ಹಿರೇಮಠ, ಎಸ್. ಬಿ. ಉಡುಚಂಚಿ, ಜಿ. ಬಿ. ಕತ್ತಿ ಹಾಗೂ ಊರಿನ ಹಿರಿಯರು ಪಾಲಕರು ಇದ್ದರು.