ಬೆಂಗಳೂರು: ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (HD Kumarswamy) ವಿರುದ್ಧ ಕರಿಯ ಎಂದು, ನಿನ್ನ ರೇಟ್ ಹೇಳು ಎಂದಿರುವ ಸಚಿವ ಜಮೀರ್ ಜಮೀರ್ ಅಹ್ಮದ್ (Zameer Ahmed) ಕೂಡಲೇ ಬಹಿರಂಕ ಕ್ಷಮೆ ಕೇಳಬೇಕು ಎಂದು ಜೆಡಿಎಸ್ ಆಗ್ರಹಿಸಿದೆ.
ಈ ಕುರಿತು ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ಜೆಡಿಎಸ್, ಕೇಂದ್ರ ಸಚಿವ ಕುಮಾರಸ್ವಾಮಿ ಅವರ ವಿರುದ್ಧ ಮಾತನಾಡಿರುವ ಜಮೀರ್ ಅಹ್ಮದ್ ರಾಜ್ಯದ ಜನತೆಯಲ್ಲಿ ಕ್ಷಮೆ ಕೇಳಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದೆ.
ಜಮೀರ್ ಅಹ್ಮದ್ ಅವರೇ, ಹೆಚ್.ಡಿ ಕುಮಾರಸ್ವಾಮಿ ಅವರು ಜಾತಿ, ಪಂಥ ಮತ್ತು ಬಣ್ಣದಿಂದ ಜನನಾಯಕರಾಗಿ ಬೆಳೆದಿಲ್ಲ. ಅವರ ನಾಯಕತ್ವ ಗುಣ, ಸಮಾಜಕ್ಕೆ ಮತ್ತು ಸಮುದಾಯಗಳ ಅಭಿವೃದ್ಧಿಗೆ ಕೊಟ್ಟಿರುವ ಕೊಡುಗೆಗಳು, ಜನಪರ ಯೋಜನೆಗಳು ಮತ್ತು ಉತ್ತಮವಾದ ಆಡಳಿತ ಮತ್ತು ಆರ್ಥಿಕ ಅಭಿವೃದ್ಧಿ ದೃಷ್ಟಿಕೋನದಿಂದಲೇ ಉತ್ತಮ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದಾರೆ ಎಂದು ಟ್ವೀಟ್ ನಲ್ಲಿ ಆಕ್ರೋಶ ವ್ಯಕ್ತಪಡಿಸಲಾಗಿದೆ.
ಸರ್ವಜನಾಂಗದ ಶಾಂತಿಯ ತೋಟವಾಗಿರುವ ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ನೀವು ಕ್ಷುಲ್ಲಕ ರಾಜಕೀಯಕ್ಕಾಗಿ ದ್ವೇಷ ಹರಡಲು, ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದ್ದೀರಿ. ನೆನಪಿರಲಿ, ಇಲ್ಲಿ ನಿಮ್ಮ ಒಡೆದು ಆಳುವ ನೀತಿಗೆ ಜಾಗವಿಲ್ಲ. ಜನಾಂಗೀಯ ನಿಂದನೆ, ವರ್ಣಭೇದ ಹೇಳಿಕೆಗಳನ್ನು ನೀಡಿ ಅಪಮಾನ ಎಸಗಿರುವ ನೀವು ನಾಡಿನ ಜನರಲ್ಲಿ ಕ್ಷಮೆಯಾಚಿಸಿ, ರಾಜೀನಾಮೆ ನೀಡಬೇಕು ಎಂದು ಜೆಡಿಎಸ್ ಸೂಚಿಸಿದೆ.