ವಾಷಿಂಗ್ಟನ್ : ಅಮೆರಿಕ ಮತ್ತು ಇರಾನ್ ನಡುವಿನ ರಾಜತಾಂತ್ರಿಕ ಸಂಘರ್ಷವು ಇದೀಗ ಯುದ್ಧದ ಕಾರ್ಮೋಡವನ್ನು ಸೃಷ್ಟಿಸಿದೆ. ಇದಕ್ಕೆ ಸಾಕ್ಷಿ ಎಂಬಂತೆ ಇರಾನ್ನಲ್ಲಿರುವ ತನ್ನೆಲ್ಲಾ ಪ್ರಜೆಗಳು ತಕ್ಷಣವೇ ಆ ದೇಶವನ್ನು ತೊರೆಯುವಂತೆ ಅಮೆರಿಕ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಇರಾನ್ನಲ್ಲಿರುವ ವರ್ಚುವಲ್ ಯುಎಸ್ ರಾಯಭಾರ ಕಚೇರಿಯು ಈ ತುರ್ತು ಸಲಹೆಯನ್ನು ಹೊರಡಿಸಿದ್ದು, ಯಾವುದೇ ಕ್ಷಣದಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗುವ ಸಾಧ್ಯತೆ ಇರುವುದರಿಂದ ಅಮೆರಿಕನ್ನರು ಸುರಕ್ಷಿತವಾಗಿ ಹೊರಬರಲು ಸಿದ್ಧತೆ ಮಾಡಿಕೊಳ್ಳಬೇಕು ಎಂದು ತಿಳಿಸಿದೆ.
ಟ್ರಂಪ್ ದಾಳಿ ಎಚ್ಚರಿಕೆ
2025ರ ಡಿಸೆಂಬರ್ ಅಂತ್ಯದಲ್ಲಿ ಇರಾನ್ನಲ್ಲಿ ನಡೆದ ಬೃಹತ್ ಪ್ರತಿಭಟನೆಯನ್ನು ಅಲ್ಲಿನ ಸರ್ಕಾರ ರಕ್ತಪಾತದ ಮೂಲಕ ಹತ್ತಿಕ್ಕುತ್ತಿದೆ ಎಂದು ಆರೋಪಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ಖಮೇನಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಇರಾನ್ ಮೇಲೆ ವಾಯು ವೀಕ್ಷಣೆ ಅಥವಾ ಸಶಸ್ತ್ರ ದಾಳಿ ನಡೆಸುವ ಎಚ್ಚರಿಕೆಯನ್ನು ಟ್ರಂಪ್ ನೀಡಿದ್ದರು. ಈಗಾಗಲೇ ಜನವರಿ ಅಂತ್ಯದಿಂದಲೇ ಗಲ್ಫ್ ಪ್ರದೇಶದಲ್ಲಿ ಅಮೆರಿಕದ ಅಬ್ರಹಾಂ ಲಿಂಕನ್ ಯುದ್ಧನೌಕೆ ಸೇರಿದಂತೆ ಬೃಹತ್ ನೌಕಾಪಡೆಗಳನ್ನು ನಿಯೋಜಿಸಲಾಗಿದೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಟ್ರಂಪ್ ಅವರು, ಇರಾನ್ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರು ಈಗಿನ ಪರಿಸ್ಥಿತಿಯ ಬಗ್ಗೆ ಬಹಳ ಆತಂಕ ಪಡಬೇಕಾದ ಅಗತ್ಯವಿದೆ ಎಂದು ಹೇಳಿರುವುದು ಸಂಘರ್ಷದ ಸೂಚನೆ ನೀಡಿದೆ.
ಸ್ಥಳಾಂತರಕ್ಕೆ ಪರ್ಯಾಯ ಮಾರ್ಗಗಳ ಹುಡುಕಾಟ
ಇರಾನ್ನಲ್ಲಿರುವ ಅಮೆರಿಕನ್ನರು ಅಲ್ಲಿಂದ ಹೊರಬರಲು ಯುಎಸ್ ಸರ್ಕಾರದ ಸಹಾಯಕ್ಕಾಗಿ ಕಾಯದೆ ಸ್ವಂತ ಸಿದ್ಧತೆ ಮಾಡಿಕೊಳ್ಳಿ. ವಿಮಾನಯಾನ ಸೇವೆಗಳಲ್ಲಿ ಯಾವುದೇ ಮುನ್ಸೂಚನೆ ಇಲ್ಲದೆ ವ್ಯತ್ಯಯ ಉಂಟಾಗಬಹುದು ಅಥವಾ ರದ್ದಾಗಬಹುದು. ಇಂತಹ ಸಂದರ್ಭದಲ್ಲಿ ಸಾಧ್ಯವಾದರೆ ರಸ್ತೆ ಮಾರ್ಗದ ಮೂಲಕ ನೆರೆಯ ಆರ್ಮೇನಿಯಾ ಅಥವಾ ಟರ್ಕಿಗೆ ತೆರಳಿ ಎಂದು ತನ್ನ ನಾಗರಿಕರಿಗೆ ಅಮೆರಿಕ ಸೂಚಿಸಲಾಗಿದೆ. ಇಂಟರ್ನೆಟ್ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇರುವುದರಿಂದ ಸಂವಹನಕ್ಕಾಗಿ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವಂತೆ ಮತ್ತು ಅಗತ್ಯ ಆಹಾರ, ಔಷಧಗಳನ್ನು ಸಂಗ್ರಹಿಸಿಟ್ಟುಕೊಳ್ಳುವಂತೆಯೂ ಅಮೆರಿಕದ ವಿದೇಶಾಂಗ ಇಲಾಖೆ ತಿಳಿಸಿದೆ.
ದ್ವಿಪೌರತ್ವ ಹೊಂದಿರುವವರಿಗೆ ಹೆಚ್ಚಿನ ಅಪಾಯ
ಇರಾನ್ ಸರ್ಕಾರವು ದ್ವಿಪೌರತ್ವವನ್ನು ಮಾನ್ಯ ಮಾಡದ ಕಾರಣ, ಅಮೆರಿಕ ಮತ್ತು ಇರಾನ್ ಎರಡೂ ದೇಶದ ಪೌರತ್ವ ಹೊಂದಿರುವವರು ಇರಾನಿ ಪಾಸ್ಪೋರ್ಟ್ ಬಳಸಿಯೇ ದೇಶದಿಂದ ಹೊರಬರಲು ಸಲಹೆ ನೀಡಲಾಗಿದೆ. ಅಮೆರಿಕದ ಸಂಪರ್ಕ ಹೊಂದಿರುವವರನ್ನು ಇರಾನ್ ಅಧಿಕಾರಿಗಳು ಬಂಧಿಸುವ ಅಥವಾ ವಿಚಾರಣೆಗೊಳಪಡಿಸುವ ಸಾಧ್ಯತೆ ಇರುವುದರಿಂದ ತೀರಾ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. ಇದೇ ವೇಳೆ, ಟರ್ಕಿ ಅಧ್ಯಕ್ಷ ತಯ್ಯಿಪ್ ಎರ್ಡೋಗನ್ ಅವರು ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆಯನ್ನು ಶಮನಗೊಳಿಸಲು ಮತ್ತು ಮಧ್ಯಪ್ರಾಚ್ಯದಲ್ಲಿ ಹೊಸದೊಂದು ಯುದ್ಧವನ್ನು ತಡೆಯಲು ರಾಜತಾಂತ್ರಿಕ ಪ್ರಯತ್ನಗಳನ್ನು ಮುಂದುವರಿಸಿದ್ದಾರೆ.
ಇದನ್ನೂ ಓದಿ : ದಾವಣಗೆರೆಯಲ್ಲಿ ಡೆಡ್ಲಿ ಆಕ್ಸಿಡೆಂಟ್ | ಅಪಘಾತದ ರಭಸಕ್ಕೆ ಕಾರು ಪೀಸ್ ಪೀಸ್.. ಓರ್ವ ಸಾವು, ಮೂವರು ಗಂಭೀರ!



















