ಧಾರವಾಡ : ಸಾರ್ವಜನಿಕ ಬದುಕಿನ ಮೇರು ಸಾಧನೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಸಂಸ್ಥೆಯಾದ ಭಾರತೀಯ ಸಾಧಕರ ವೇದಿಕೆ ಕೊಡಮಾಡುವ 2025ರ ‘ಭಾರತೀಯ ಸಾಧಕರ ಪ್ರಶಸ್ತಿ’ಯು ಜಾರ್ಖಂಡ ರಾಜ್ಯದ ರಾಂಚಿಯ ರಾಷ್ಟ್ರೀಯ ಕಾನೂನು ಅಧ್ಯಯನ ಮತ್ತು ಸಂಶೋಧನಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಶೋಕ ರಾಮಚಂದ್ರ ಪಾಟೀಲ ಅವರಿಗೆ ಲಭಿಸಿದೆ.
ಮೂಲತಃ ಧಾರವಾಡದವರೇ ಆಗಿರುವ ಡಾ. ಅಶೋಕ ಪಾಟೀಲ ಅವರು ನಗರದ ಖ್ಯಾತ ಮಕ್ಕಳ ಸಾಹಿತಿ ಹಾಗೂ ಡಯಟ್ನ ವಿಶ್ರಾಂತ ಉಪನ್ಯಾಸಕ ದಿ. ರಾಮಚಂದ್ರ ಪಾಟೀಲ ಅವರ ಪುತ್ರರು. ಕ.ವಿ.ವಿ. ಮೂಲಕ ಎಲ್.ಎಲ್.ಎಂ. ಪದವಿಯಲ್ಲಿ ಮೊದಲ ರಾಂಕ್ ಪಡೆದಿದ್ದು, ಕಾನೂನು ವಿಷಯದಲ್ಲಿಯೇ ಪಿ.ಎಚ್ಡಿ. ಪದವಿ ಸಂಪಾದಿಸಿದ್ದಾರೆ. ಶ್ರೇಷ್ಠ ಶಿಕ್ಷಣ ತಜ್ಞರಾಗಿ ಮತ್ತು ಕಾನೂನು ವಿದ್ವಾಂಸರಾಗಿ ಕಳೆದ 27 ವರ್ಷಗಳಿಂದ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗ್ರಾಹಕ ಕಾನೂನು, ಸಾರ್ವಜನಿಕ ನೀತಿ ಮತ್ತು ಕಾನೂನು ಶಿಕ್ಷಣದ ವಿಕಾಸಕ್ಕೆ ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ. ಗ್ರಾಹಕ ಕಲ್ಯಾಣ, ಅಪರಾಧ ಹಾಗೂ ವಿಮಾ ಕಾನೂನುಗಳಲ್ಲಿ ವ್ಯಾಪಕ ಪರಿಣತಿ ಹೊಂದಿದ್ದಾರೆ.
ಕಾನೂನು ವಿವಿ ಕುಲಪತಿ : 2023ರ ಜೂನ್ದಲ್ಲಿ ರಾಂಚಿಯ ರಾಷ್ಟ್ರೀಯ ಕಾನೂನು ಅಧ್ಯಯನ ಮತ್ತು ಸಂಶೋಧನಾ ವಿಶ್ವವಿದ್ಯಾಲಯದ ಕುಲಪತಿಯಾಗಿ ನೇಮಕಗೊಂಡು ಸೇವೆ ಸಲ್ಲಿಸುತ್ತಿದ್ದಾರೆ. ನಿಕಟಪೂರ್ವದಲ್ಲಿ ಬೆಂಗಳೂರಿನ ಭಾರತೀಯ ವಿ.ವಿ. ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಪ್ರಾಧ್ಯಾಪಕರಾಗಿ ಸೇವೆಗೈದಿದ್ದಾರೆ. ಅಂತಾರಾಷ್ಟ್ರೀಯ ಗ್ರಾಹಕ ಕಾನೂನು ಮತ್ತು ಅಭ್ಯಾಸದ ಜರ್ನಲ್ ಪ್ರಾರಂಭಿಸಿ, ಅದರ ಪ್ರಧಾನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಗ್ರಾಹಕ ಸಂರಕ್ಷಣಾ ಕಾಯ್ದೆ-2019ರ ಸಮಗ್ರ ವ್ಯಾಖ್ಯಾನ ಮತ್ತು 40ಕ್ಕೂ ಹೆಚ್ಚು ವಿದ್ವತ್ಪೂರ್ಣ ಲೇಖನಗಳನ್ನು ಒಳಗೊಂಡಂತೆ 6 ಕೃತಿಗಳನ್ನು ಬರೆದು ಪ್ರಕಟಿಸಿದ್ದಾರೆ. ಪ್ರತಿಷ್ಠಿತ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಹಲವಾರು ಸಂಶೋಧನಾ ಲೇಖನಗಳನ್ನು ಪ್ರಕಟಿಸಿ ಗಮನಸೆಳೆದಿದ್ದಾರೆ. ವಿಶ್ವದ 15ಕ್ಕೂ ಹೆಚ್ಚು ದೇಶಗಳಲ್ಲಿ ಪ್ರಬುದ್ಧ ಪ್ರಬಂಧಗಳನ್ನು ಮಂಡಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.
ವ್ಯಾಪಾರ ಮತ್ತು ಅಭಿವೃದ್ಧಿ ಕುರಿತ ವಿಶ್ವಸಂಸ್ಥೆಯ ಸಮ್ಮೇಳನದ ಜಾಗತಿಕ ವೇದಿಕೆಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಡಾ. ಅಶೋಕ ಪಾಟೀಲ ಅವರ ಸಾಧನೆ ಗುರುತಿಸಿ ದಕ್ಷಿಣ ಆಫ್ರಿಕಾದ ಅಂತಾರಾಷ್ಟ್ರೀಯ ಮ್ಯಾಕ್ ಜನೆಟ್ ಪ್ರಶಸ್ತಿ, ಕಾನೂನು ಶಿಕ್ಷಣ ನಾವೀನ್ಯತೆ ಪ್ರಶಸ್ತಿ, ಏಷ್ಯನ್ ಕಾನೂನು ಸಂಸ್ಥೆಯ ಫೆಲೋಶಿಪ್ ಜೊತೆಗೆ ಇದೀಗ ಪ್ರತಿಷ್ಠಿತ ಭಾರತೀಯ ಸಾಧಕರ ಪ್ರಶಸ್ತಿ ಲಭಿಸಿವೆ. ಗ್ರಾಹಕ ರಕ್ಷಣೆ, ಕಾನೂನು ಸಬಲೀಕರಣ ಮತ್ತು ಅಂತರಶಿಸ್ತೀಯ ಶ್ರೇಷ್ಠತೆಯನ್ನು ಸಂಪಾದಿಸಿರುವ ಪ್ರೊ. ಅಶೋಕ ಪಾಟೀಲ ಅವರು ರಾಂಚಿಯ ರಾಷ್ಟ್ರೀಯ ಕಾನೂನು ಅಧ್ಯಯನ ಮತ್ತು ಸಂಶೋಧನಾ ವಿಶ್ವವಿದ್ಯಾಲಯವನ್ನು ಕಾನೂನು ಸಂಶೋಧನೆ ಮತ್ತು ಸಾಮಾಜಿಕ ಪ್ರಭಾವದ ಪ್ರಮುಖ ಕೇಂದ್ರವಾಗಿ ಪರಿವರ್ತಿಸುವಲ್ಲಿ ಶ್ರಮಿಸುತ್ತಿದ್ದಾರೆ.