ಚಂಡೀಗಢ: ಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಹರಿಯಾಣದ ಸೋನಿಪತ್ ನಲ್ಲಿ ಬಿಜೆಪಿ ನಾಯಕರೊಬ್ಬರನ್ನು ಪಕ್ಕದ ಮನೆಯ ವ್ಯಕ್ತಿ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ. ಸುರೇಂದ್ರ ಜವಾಹರ್ ಎಂಬ ಬಿಜೆಪಿ ನಾಯಕನನ್ನು ಶುಕ್ರವಾರ ರಾತ್ರಿ ಅಟ್ಟಾಡಿಸಿಕೊಂಡು ಬಂದ ಪಕ್ಕದ ಮನೆಯ ಮೋನು ಎಂಬ ವ್ಯಕ್ತಿಯು, ಅಂಗಡಿಯೊಂದರಲ್ಲಿ ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ. ಈ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಶುಕ್ರವಾರ ರಾತ್ರಿ 9.30ರ ಸುಮಾರಿಗೆ ಘಟನೆ ನಡೆದಿದೆ. ತುಂಬ ದೂರದಿಂದ ಜವಾಹರ್ ಅವರನ್ನು ಹಿಂಬಾಲಿಸಿದ ಮೋನು, ಅಂಗಡಿಯೊಂದಕ್ಕೆ ನುಗ್ಗಿದ ಜವಾಹರ್ ಮೇಲೆ ಗುಂಡು ಹಾರಿಸಿದ್ದಾನೆ. “ನನ್ನನ್ನು ಸಾಯಿಸುತ್ತಿದ್ದಾನೆ. ಸಹಾಯ ಮಾಡಿ” ಎಂದು ಬಿಜೆಪಿ ನಾಯಕ ಕೂಗಿದ್ದಾರೆ. ಆಗ ಮೋನುವಿನನ್ನು ಇಬ್ಬರು-ಮೂವರು ಹಿಡಿದು ಎಳೆಯಲು ಯತ್ನಿಸಿದ್ದಾರೆ. ಇಷ್ಟಾದರೂ ಮೋನು ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ.
ಶನಿವಾರ ಬೆಳಗ್ಗೆ ಪೊಲೀಸರು ಮೋನು ಎಂಬಾತನನ್ನು ಬಂಧಿಸಿದ್ದಾರೆ. ಮೋನುವಿನ ಚಿಕ್ಕಪ್ಪ ಹಾಗೂ ಚಿಕ್ಕಮ್ಮ ಅವರ ಭೂಮಿಯನ್ನು ಬಿಜೆಪಿ ನಾಯಕ ಖರೀದಿಸಿದ್ದರು. ಇದರಿಂದ ಬಿಜೆಪಿ ನಾಯಕನ ಮೇಲೆ ಮೋನು ಕುಪಿತಗೊಂಡಿದ್ದ. ನನ್ನ ಚಿಕ್ಕಪ್ಪ-ಚಿಕ್ಕಮ್ಮ ಅವರ ಜಮೀನಿನಲ್ಲಿ ನೀನು ಕಾಲಿಡುವಂತಿಲ್ಲ ಎಂದೆಲ್ಲ ವಾರ್ನಿಂಗ್ ಕೊಟ್ಟಿದ್ದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಮೋನು ಎಚ್ಚರಿಕೆ ಕೊಟ್ಟ ಬಳಿಕ ಜವಾಹರ್ ಅವರು ಸಮಸ್ಯೆ ಬಗೆಹರಿಸಿಕೊಳ್ಳಲು ಮೋನುವಿನ ಚಿಕ್ಕಪ್ಪ-ಚಿಕ್ಕಪ್ಪ ಅವರನ್ನು ಭೇಟಿಯಾಗಿದ್ದರು. ಇದೇ ವೇಳೆ ಮೋನು ಹಾಗೂ ಬಿಜೆಪಿ ನಾಯಕನ ಮಧ್ಯೆ ವಾಗ್ವಾದ ನಡೆದಿದೆ. ಅಲ್ಲದೆ, ಬಿಜೆಪಿ ನಾಯಕನನ್ನು ಅಟ್ಟಾಡಿಸಿಕೊಂಡು ಹೋದ ಮೋನು, ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.