ಉಡುಪಿ: ಕಾಪು ಹೊಸ ಮಾರಿಗುಡಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಭೇಟಿ ನೀಡಿ, ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಇತ್ತೀಚೆಗಷ್ಟೇ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಾರು ಅಪಘಾತದಲ್ಲಿ ಗಾಯಗೊಂಡಿದ್ದರು. ಹೀಗಾಗಿ ಆಸ್ಪತ್ರೆಗೆ ದಾಖಲಾದ ನಂತರ ಉಡುಪಿಗೆ ಪ್ರಥಮ ಭೇಟಿ ನೀಡಿದ್ದಾರೆ. ಹಲವು ತಿಂಗಳ ಬಳಿಕ, ತಾಯಿಯ ದರ್ಶನ ಮಾಡಿ ತಮ್ಮ ಕೆಲಸ ಆರಂಭಿಸಿದ್ದಾರೆ.
ಈ ವೇಳೆ ಮಾತನಾಡಿದ ಅವರು, ಖುಷಿಯಿಂದ ಮತ್ತೆ ಮರಳಿ ಕೆಲಸಕ್ಕೆ ಬಂದಿದ್ದೇನೆ. ಅಮ್ಮನವರಿಂದ ಆಶೀರ್ವಾದ ಪಡೆದು ಕೆಲಸ ಆರಂಭಿಸುತ್ತಿದ್ದೇನೆ. ದೇವಿಯ ಸನ್ನಿಧಾನದಲ್ಲಿ ಉತ್ತಮ ಕೆಲಸ ಮಾಡುವ ಸಂಕಲ್ಪ ಮಾಡಿದ್ದೇನೆ. ಈ ದೇವಾಲಯದ ಕಲ್ಪನೆ ಅದ್ಭುತವಾಗಿದೆ. ದೇವಾಲಯದ ಇತಿಹಾಸ ಕೇಳಿ ನಾನು ಅಚ್ಚರಿಗೊಂಡೆ. ಭಕ್ತರ ಸಹಕಾರದಿಂದಲೇ ದೇಗುಲ ನಿರ್ಮಾಣವಾಗಿದೆ ಎಂಬುವುದನ್ನು ತಿಳಿದುಕೊಂಡಿದ್ದೇನೆ. ಸ್ವರ್ಣ ಗದ್ದುಗೆಯ ಮೇಲೆ ಕುಳಿತ ತಾಯಿಯನ್ನು ಕಂಡರೆ ಭಾರತದ ಸಂಸ್ಕೃತಿ ನಿಜ ಎನ್ನುವುದು ಅರಿವಾಗುತ್ತದೆ ಎಂದಿದ್ದಾರೆ.