ಹುಬ್ಬಳ್ಳಿ: ಇಡೀ ರಾಜ್ಯದ ಆಕ್ರೋಶಕ್ಕೆ ಕಾರಣವಾಗಿದ್ದ ಅಪ್ರಾಪ್ತ ಬಾಲಕಿಯ ಹತ್ಯೆ ಪ್ರಕರಣದ ಆರೋಪಿಯ ಎನ್ ಕೌಂಟರ್ ಪ್ರಕರಣದ ಲೇಡಿ ಸಿಂಗಂ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಹಂತಕನನ್ನು ಅರೆಸ್ಟ್ ಮಾಡಲು ಹೋಗಿದ್ದ ವೇಳೆ ಎನ್ ಕೌಂಟರ್ ಮಾಡಿದ್ದ ಲೇಡಿ ಸಿಂಗಂ ಎಂದೇ ಹೆಸರು ಮಾಡಿರುವ ಪಿಎಸ್ ಐ ಅನ್ನಪೂರ್ಣ ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಅನ್ನಪೂರ್ಣ ಅವರೊಂದಿಗೆ ಮತ್ತಿಬ್ಬರು ಪೊಲೀಸ್ ಸಿಬ್ಬಂದಿಗಳು ಕೂಡ ಚೇತರಿಸಿಕೊಂಡಿದ್ದಾರೆ. ಹೀಗಾಗಿ ಕಿಮ್ಸ್ ವೈದ್ಯರು ಮೂವರನ್ನೂ ಇಂದು ಡಿಸ್ಚಾರ್ಜ್ ಮಾಡಿದ್ದಾರೆ. ಮೂವರು ಪೊಲೀಸ್ ಸಿಬ್ಬಂದಿ ಕಳೆದ 8 ದಿನಗಳಿಂದ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ರಿತೇಶ್ ಕುಮಾರ್ ಎಂಬ ಕಾಮುಕ, ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿದ್ದ ಎನ್ನಲಾಗಿದೆ. ಕಾಮುಕ ರಿತೇಶ್ ಕುಮಾರ್ ನನ್ನು ಹೆಚ್ಚಿನ ವಿಚಾರಣೆಗಾಗಿ ರಾಯನಾಳ ಬ್ರಿಡ್ಜ್ ಬಳಿ ಕರೆದೊಯ್ದ ಸಂದರ್ಭದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ. ಪೊಲೀಸರ ಮೇಲೆಯೇ ಕಲ್ಲು ತೂರಾಟ ನಡೆಸಿ, ಪರಾರಿಯಾಗಲು ಯತ್ನಿಸಿದ್ದ. ಈ ವೇಳೆ ಪಿಎಸ್ ಐ ಅನ್ನಪೂರ್ಣ ಮತ್ತು ಸಿಬ್ಬಂದಿಗಳಾದ ವೀರೇಶ, ಯಶವಂತ ಗಾಯಗೊಂಡಿದ್ದರು. ಈ ವೇಳೆ ಆತ್ಮರಕ್ಷಣೆಗಾಗಿ ಪಿಎಸ್ ಐ ಹಂತಕನ ಮೇಲೆ ಫೈರಿಂಗ್ ಮಾಡಿ ಎದೆ ಸೀಳಿದ್ದರು. ಆರೋಪಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.



















