ಹಾವೇರಿ: ಕಾಂಗ್ರೆಸ್ ಗೆ ಚನ್ನಪಟ್ಟಣದಲ್ಲಿ ಅಭ್ಯರ್ಥಿಯೇ ಇರಲಿಲ್ಲ. ಎನ್ ಡಿಎ ಸುಲಭವಾಗಿ ಗೆಲ್ಲಬಹುದಿತ್ತು. ಆದರೆ, ಯೋಗೇಶ್ವರ್ ತಪ್ಪು ಮಾಡಿದರು. ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ (HD Kumaraswamy) ಪ್ರಭಾವ ಹೆಚ್ಚಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ.
ಶಿಗ್ಗಾಂವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಚುನಾವಣೆಯಲ್ಲಿ ಅಲ್ಲಿ ತ್ರಿಕೋನ ಸ್ಪರ್ಧೆ ಇದ್ದರೂ ಕುಮಾರಸ್ವಾಮಿ ಗೆದ್ದಿದ್ದರು. ಈ ಬಾರಿಯೂ ಅಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲುತ್ತಾರೆ. ಮೈತ್ರಿ ಅಭ್ಯರ್ಥಿ ಯಾರು ಅಂತ ನೀವು ಕುಮಾರಸ್ವಾಮಿಯವರನ್ನೇ ಕೇಳಬೇಕು. ಡಿಕೆ ಸುರೇಶ್ ಕಣಕ್ಕೆ ಇಳಿಸುವ ಬಗ್ಗೆ ಏನು ಗೊತ್ತಿಲ್ಲ. ಆದರೆ ಕಾಂಗ್ರೆಸ್ಗೆ ಅಲ್ಲಿ ಬೇಸ್ ಇಲ್ಲ ಎಂದಿದ್ದಾರೆ.
ಶಿಗ್ಗಾಂವಿಗೆ ವಿನಯ್ ಕುಲಕರ್ಣಿ ಪುತ್ರಿಗೆ ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡುವ ಸಾಧ್ಯತೆಯ ವಿಚಾರವಾಗಿ ಮಾತನಾಡಿದ ಅವರು, ಯಾರೇ ಸ್ಪರ್ಧೆ ಮಾಡಿದರೂ ಕಾಂಗ್ರೆಸ್ ಅಭ್ಯರ್ಥಿ ಕಾಂಗ್ರೆಸ್ ಅಭ್ಯರ್ಥಿನೇ. ಚುನಾವಣೆಯನ್ನು ಅತ್ಯಂತ ಸ್ಪರ್ಧಾತ್ಮಕವಾಗಿಯೇ ಎದುರಿಸುತ್ತೇವೆ. ಸೌಹಾರ್ದ ಚುನಾವಣೆ ಮಾಡುತ್ತೇವೆ. ಗೆಲುವು ಮಾತ್ರ ನಮ್ಮದು ಎಂದಿದ್ದಾರೆ.


















