ಕೊಪ್ಪಳ: ಕೊಪ್ಪಳ ತಾಲೂಕಿನ ಕೂಕನಪಳ್ಳಿ ಗ್ರಾಮದಲ್ಲಿ ಸ್ಪಿರಿಟ್ ಸೇವನೆಯಿಂದ ಇಬ್ಬರು ಯುವಕರು ಮೃತಪಟ್ಟಿದ್ದು, ಮತ್ತೊಬ್ಬ ಯುವಕ ಸಾವು–ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಘಟನೆ ನಡೆದಿದೆ.
ಮೃತರನ್ನು ಕೂಕನಪಳ್ಳಿ ಗ್ರಾಮದ ಅಮರಯ್ಯ ಹಿರೇಮಠ (35) ಮತ್ತು ರಮೇಶ್ ಹೊಸಹಳ್ಳಿ (25) ಎಂದು ಗುರುತಿಸಲಾಗಿದೆ. ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಶರಣಪ್ಪ ಹಂಚಿನಾಳ. ಅಮರಯ್ಯ ಜೆಸ್ಕಾಂನಲ್ಲಿ ಹೊರಗುತ್ತಿಗೆ ನೌಕರನಾಗಿ ಕೆಲಸ ಮಾಡುತ್ತಿದ್ದರೆ, ರಮೇಶ್ ತಂದೆ–ತಾಯಿಗೆ ಒಬ್ಬನೇ ಮಗನಾಗಿದ್ದನು. ಯುವಕರ ಅಕಾಲಿಕ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಕಳೆದ ಫೆ.4ರಂದು ಐವರು ಸ್ನೇಹಿತರು ಪಾರ್ಟಿ ಮಾಡಿಕೊಂಡಿದ್ದು, ಈ ವೇಳೆ ದದೇಗಲ್ ಗ್ರಾಮದ ವಾಟರ್ ಸರ್ವಿಸ್ ಕೆಲಸ ಮಾಡುವ ಮಾರುತಿ ಬಂಡಿ ಸ್ಪಿರಿಟ್ ತಂದು ‘ಸರಾಯಿ’ ಎಂದು ಹೇಳಿ ಎಲ್ಲರಿಗೂ ನೀಡಿದ್ದಾನೆ ಎನ್ನಲಾಗಿದೆ. ಅಮರಯ್ಯ ಹಿರೇಮಠ, ರಮೇಶ್ ಹೊಸಹಳ್ಳಿ ಮತ್ತು ಶರಣಪ್ಪ ಹಂಚಿನಾಳ ಸ್ಪಿರಿಟ್ ಸೇವಿಸಿದ್ದು, ಮಾರುತಿ ಬಂಡಿ ಹಾಗೂ ಶರಣಪ್ಪ ಗುರಿಕಾರ ಸೇವಿಸಿರಲಿಲ್ಲ ಎಂದು ತಿಳಿದುಬಂದಿದೆ.
ಸ್ಪಿರಿಟ್ ಸೇವಿಸಿದ ಮರು ದಿನವೇ ಅಮರಯ್ಯ ಮತ್ತು ಶರಣಪ್ಪ ಹಂಚಿನಾಳ ಅಸ್ವಸ್ಥಗೊಂಡು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಾದರು. ಈ ಪೈಕಿ ಅಮರಯ್ಯ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ವಿಚಾರಣೆ ಆರಂಭಿಸಿದ ಹಿನ್ನೆಲೆಯಲ್ಲಿ ಆತಂಕಗೊಂಡ ರಮೇಶ್, ಪೊಲೀಸ್ ಠಾಣೆಯಿಂದ ಮನೆಗೆ ಮರಳಿದ ನಂತರ ಮತ್ತೆ ಅದೇ ಸ್ಪಿರಿಟ್ ಸೇವನೆ ಮಾಡಿದ್ದು, ತೀವ್ರ ಅಸ್ವಸ್ಥಗೊಂಡು ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಸಂಬಂಧ ಮೃತರ ಜೊತೆ ಊಟ ಮಾಡಿದ್ದ ಹಾಗೂ ಸ್ಪಿರಿಟ್ ನೀಡಿದ್ದ ಆರೋಪದ ಮೇಲೆ ಮಾರುತಿ ಬಂಡಿ ಮತ್ತು ಶರಣಪ್ಪ ಗುರಿಕಾರ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮೃತ ರಮೇಶ್ ತಂದೆ ಯಮನಪ್ಪ ಹೊಸಹಳ್ಳಿ ನೀಡಿದ ದೂರಿನ ಮೇರೆಗೆ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾರುತಿ ಬಂಡಿ ಕಳೆದ 15 ದಿನಗಳ ಹಿಂದೆಯೇ ಸ್ಪಿರಿಟ್ ಸಂಗ್ರಹಿಸಿದ್ದಾನೆ ಎನ್ನಲಾಗಿದ್ದು, ಅದು ಗೋವಾದ ಕಾಜು ಮದ್ಯ ಎಂದುಕೊಂಡು ಸೇವನೆ ಮಾಡಿರುವ ಸಾಧ್ಯತೆಯನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ. ಸ್ಪಿರಿಟ್ ಸೇವನೆಯೇ ಸಾವಿಗೆ ಕಾರಣವೇ ಅಥವಾ ಅದರಲ್ಲಿ ವಿಷಕಾರಿ ಪದಾರ್ಥ ಮಿಶ್ರಣವಾಗಿತ್ತೇ ಎಂಬ ಅನುಮಾನಗಳು ವ್ಯಕ್ತವಾಗಿವೆ. ಜೊತೆಗೆ ಸಾವಿಗೆ ಕಾರಣವಾದ ಸ್ಪಿರಿಟ್ ಮೂಲ ಪತ್ತೆಹಚ್ಚುವುದು ಪೊಲೀಸರಿಗೆ ಸವಾಲಾಗಿದೆ.
ಇದನ್ನೂ ಓದಿ : ಚಾ.ನಗರ | 9 ಕಾಡಾನೆಗಳ ದಾಳಿಗೆ ರೈತ ಬಲಿ ; ಗ್ರಾಮಸ್ಥರಿಂದ ಪ್ರತಿಭಟನೆ



















