ಕೋಲಾರ : ಕೋಲಾರ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಟಿ.ಎಂ. ವೆಂಕಟೇಶ್ ಮೃತಪಟ್ಟಿರುವ ಘಟನೆ ನಡೆದಿದೆ. ಕೋಲಾರ ತಾಲ್ಲೂಕಿನ ಮುದುವಾಡಿ ಗ್ರಾಮದ ಬಳಿ ಕಾರು ಕೆರೆಗೆ ಬಿದ್ದ ಪರಿಣಾಮ ಈ ದುರಂತ ಸಂಭವಿಸಿದೆ.
ಮಾಹಿತಿ ಪ್ರಕಾರ, ನಾಳೆಯಿಂದ ಕೋಲಾರ ನಗರದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಸಿಪಿಎಂ ಪಕ್ಷದ ರಾಜ್ಯ ಸಮಾವೇಶ ನಡೆಯಲಿದ್ದು, ಅದರ ಸಿದ್ಧತೆಗಾಗಿ ವೆಂಕಟೇಶ್ ಅವರು ಕಾರ್ಯಕರ್ತರೊಂದಿಗೆ ರಾತ್ರಿ ವರೆಗೆ ಬ್ಯಾನರ್ ಹಾಗೂ ಬಂಟಿಂಗ್ಸ್ ಅಳವಡಿಸುವ ಕೆಲಸ ಮಾಡಿದ್ದರು. ಬಳಿಕ ರಾತ್ರಿ ಸುಮಾರು 1.30ರ ವೇಳೆಗೆ ತಮ್ಮ ಇಂಡಿಕಾ ಕಾರಿನಲ್ಲಿ ತಮ್ಮೂರು ತೊರಾಂಡಹಳ್ಳಿ ಕಡೆಗೆ ಹೊರಟಿದ್ದರು.
ಈ ವೇಳೆ ಮುದುವಾಡಿ ಗ್ರಾಮದ ಬಳಿ ತಿರುವಿನಲ್ಲಿ ಕಾರು ಆಯತಪ್ಪಿ ಕೆರೆಗೆ ಬಿದ್ದಿದೆ ಎಂದು ಶಂಕಿಸಲಾಗಿದೆ. ಕಾರು ಕೆರೆಗೆ ಬಿದ್ದ ನಂತರ ಹೊರಬರಲು ವೆಂಕಟೇಶ್ ಪ್ರಯತ್ನಿಸಿದರೂ ಸಾಧ್ಯವಾಗದೆ ಕಾರಿನಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಈ ಅಪಘಾತ ಬೆಳಿಗ್ಗೆ 9 ಗಂಟೆಯವರೆಗೂ ಯಾರಿಗೂ ಗೊತ್ತಾಗಿರಲಿಲ್ಲ. ವೆಂಕಟೇಶ್ ಮನೆಗೆ ತಲುಪದೇ ಇದ್ದ ಕಾರಣ ಕುಟುಂಬಸ್ಥರು ಹುಡುಕಾಟ ಆರಂಭಿಸಿದ್ದರು. ಈ ವೇಳೆ ಕೆರೆಯ ಕಟ್ಟೆಯ ಬಳಿ ಕಾರಿನ ಮುಂಭಾಗದ ನಂಬರ್ ಪ್ಲೇಟ್ ಇರುವ ಮಡ್ ಗಾರ್ಡ್ ಕಂಡುಬಂದಿದ್ದು, ಕೆರೆಯಲ್ಲಿ ಡೀಸೆಲ್ ಲೀಕ್ ಆಗುತ್ತಿರುವುದು ಗಮನಕ್ಕೆ ಬಂದಿದೆ. ಇದರಿಂದ ಅನುಮಾನಗೊಂಡ ಸ್ಥಳೀಯರು ಕೋಲಾರ ಗ್ರಾಮಾಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಪರಿಶೀಲನೆ ನಡೆಸಿದಾಗ ಕೆರೆಯಲ್ಲಿ ಕಾರು ಹಾಗೂ ವೆಂಕಟೇಶ್ ಅವರ ಶವ ಪತ್ತೆಯಾಗಿದೆ.
ತಡೆಗೋಡೆ ಇಲ್ಲದೆ ಅಪಘಾತಕ್ಕೆ ಕಾರಣ?
ಮುದುವಾಡಿ ಕೆರೆ ಕೋಲಾರ ಜಿಲ್ಲೆಯಲ್ಲೇ ದೊಡ್ಡ ಕೆರೆಗಳಲ್ಲಿ ಒಂದಾಗಿದೆ. ಈ ರಸ್ತೆ ಕೋಲಾರ, ಶ್ರೀನಿವಾಸಪುರ ಹಾಗೂ ಆಂಧ್ರಪ್ರದೇಶದ ಮದನಪಲ್ಲಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಾಜ್ಯ ಹೆದ್ದಾರಿಯಾಗಿದೆ. ಆದರೆ ಕೆರೆಯ ಕಟ್ಟೆಯ ಎರಡೂ ಬದಿಯಲ್ಲಿ ತಡೆಗೋಡೆ ಇಲ್ಲದಿರುವುದು ಈ ಅಪಘಾತಕ್ಕೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.
ನಿತ್ಯ ಸಾವಿರಾರು ವಾಹನಗಳು ಸಂಚರಿಸುವ ಈ ರಸ್ತೆಯಲ್ಲಿ ಅಗಲೀಕರಣ ಹಾಗೂ ತಡೆಗೋಡೆ ನಿರ್ಮಾಣ ಮಾಡಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಇದ್ದರೂ ಯಾವುದೇ ಕ್ರಮ ಕೈಗೊಳ್ಳದಿರುವುದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಅಪಘಾತದ ಕುರಿತು ಅನುಮಾನ
ಇನ್ನು ಕಾರು ತಾವಾಗಿಯೇ ಆಯತಪ್ಪಿ ಕೆರೆಗೆ ಬಿದ್ದಿತಾ ಅಥವಾ ಬೇರೆ ವಾಹನ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತಾ ಎಂಬುದರ ಕುರಿತು ತನಿಖೆ ನಡೆಸಬೇಕಿದೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಜೀವನಪೂರ್ತಿ ರೈತರ ಹಕ್ಕಿಗಾಗಿ ಹೋರಾಟ ನಡೆಸಿದ್ದ ವೆಂಕಟೇಶ್ ಅವರ ಸಾವಿನಿಂದ ರೈತ ಸಂಘದ ಕಾರ್ಯಕರ್ತರು ಹಾಗೂ ಸ್ಥಳೀಯರಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ. ಅವರ ಸಾವಿನ ನಂತರವಾದರೂ ಮುದುವಾಡಿ ಕೆರೆಯ ಕಟ್ಟೆಯ ಬಳಿ ತಡೆಗೋಡೆ ನಿರ್ಮಿಸಿ ರಸ್ತೆ ಅಗಲೀಕರಣ ಮಾಡಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.
ಇದನ್ನೂ ಓದಿ : ಅಡ್ರೆಸ್ ಕೇಳುವ ನೆಪದಲ್ಲಿ ಒಂದೇ ದಿನ 3 ಕಡೆ ಸರಗಳ್ಳತನ | ಮೂವರು ಆರೋಪಿಗಳು ಅರೆಸ್ಟ್



















