ಕೋಲಾರ : ಕೋಲಾರ ತಾಲೂಕಿನ ಹೊಲೇರಹಳ್ಳಿಯಲ್ಲಿ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನಡೆಸುವ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ಮಧ್ಯೆ ಜಟಾಪಟಿ ನಡೆದಿದೆ.
ಹೊಲೇರಹಳ್ಳಿಯ ನಿವಾಸಿ ಹನುಮಂತಪ್ಪ ಅವರು ಇಂದು ನಿಧನರಾಗಿದ್ದು, ಅಂತ್ಯಸಂಸ್ಕಾರಕ್ಕೆ ಸ್ಮಶಾನಕ್ಕೆ ಕರೆದೊಯ್ಯುವ ವೇಳೆ ಕೆಲ ರಾಜಕೀಯ ಪ್ರಭಾವಿಗಳಿಂದ ವಿರೋಧ ವ್ಯಕ್ತವಾಗಿದೆ. ಮುನಿರಾಜು, ಅರುಣ್ ಕುಮಾರ್ ಹಾಗೂ ಚಿಕ್ಕ ವೆಂಕಟೇಶಪ್ಪ ಅವರು ಅಂತ್ಯಸಂಸ್ಕಾರಕ್ಕೆ ಬಿಡದಿರುವುದಾಗಿ ಆರೋಪಿಸಲಾಗಿದೆ.
ಗ್ರಾಮದಲ್ಲಿ ಒಟ್ಟು 120 ಎಕರೆ ಸರ್ಕಾರಿ ಗೋಮಾಳ ಜಮೀನಿದ್ದು, ಅದರಲ್ಲಿ 2 ಎಕರೆ ಜಮೀನನ್ನು ಗ್ರಾಮ ಸ್ಮಶಾನಕ್ಕಾಗಿ ಮೀಸಲಿಟ್ಟಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಜಮೀನು ಸ್ಮಶಾನಕ್ಕೆ ಸೇರಿರುವುದಲ್ಲ ಎಂದು ಕೆಲ ಪ್ರಭಾವಿಗಳು ಪಟ್ಟು ಹಿಡಿದಿದ್ದು, ಇದೇ ವಿವಾದಕ್ಕೆ ಕಾರಣವಾಗಿದೆ.
ಘಟನೆಯಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಮಾಹಿತಿ ಪಡೆದ ವೇಮಗಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ.
ಇದನ್ನೂ ಓದಿ : ತಂದೆ-ತಾಯಿ, ಸಹೋದರಿಯ ಬರ್ಬರ ಹತ್ಯೆ | ದೂರು ನೀಡಲು ಹೋಗಿ ಸಿಕ್ಕಿ ಬಿದ್ದ ಭೂಪ!



















