ಮಡಿಕೇರಿ: ಕೊಡಗಿನ ಬಡಗ ಬನಂಗಾಲ ಗ್ರಾಮದ ಎಸ್ಟೇಟ್ ಬಳಿ 30 ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಓಡಾಡುತ್ತಿರುವುದು ಕಂಡು ಬಂದಿದ್ದು, ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ.
ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆನೆಗಳ ಉಪಟಳ ಹೆಚ್ಚುತ್ತಿರುವ ಬಗ್ಗೆ ದೂರುಗಳು ಬಂದ ಬಳಿಕ ಅರಣ್ಯ ಇಲಾಖೆ ಆನೆಗಳನ್ನು ಓಡಿಸಲು ಕಾರ್ಯಾಚರಣೆಯನ್ನು ಕೈಗೆತ್ತಿಕೊಂಡಿತ್ತು. ಈ ವೇಳೆ ಎಸ್ಟೇಟ್’ವೊಂದರ ಬಳಿ 30 ಆನೆಗಳಿರುವುದು ಪತ್ತೆಯಾಗಿದ್ದು, ಆನೆಗಳನ್ನು ಕಾಡಿಗೆ ಓಡಿಸಲು ಕಾರ್ಯಾಚರಣೆಯನ್ನು ಆರಂಭಿಸಲಾಯಿತು.
ಈ ವೇಳೆ ಆನೆಗಳನ್ನು ಕಾಡಿಗೆ ಓಡಿಸಲು ಮುಂದಾದ ಸಿಬ್ಬಂದಿಗಳಿಗೆ ಹಲವು ಸವಾಲುಗಳು ಎದುರಾಗಿದ್ದು, ಮಳೆಯಿಂದ ಭೂಮಿ ತೇವ ಮತ್ತು ಕೆಸರುಮಯವಾಗಿದ್ದರಿಂದ ಸಾಕಷ್ಟು ಪ್ರಯತ್ನಗಳ ಬಳಿಕ ಆನೆಗಳನ್ನು ಕಾಡಿಗೆ ಓಡಿಸಲಾಗಿದೆ ಎಂದು ತಿಳಿದು ಬಂದಿದೆ.
ಕೆಲ ಆನೆಗಳು ಮರಿಗಳನ್ನು ಹೊಂದಿದ್ದು, ಅವುಗಳು ಸ್ಥಳದಿಂದ ಕದಲಲಿಲ್ಲ. ಆದ್ದರಿಂದ ಎಸ್ಟೇಟ್ ಮಿತಿಯಲ್ಲಿ ಉಳಿದುಕೊಂಡಿರುವ ಆನೆಗಳ ಚಲನವಲನಗಳನ್ನು ಪತ್ತೆಹಚ್ಚಲು ಕ್ಷಿಪ್ರ ಪ್ರತಿಕ್ರಿಯೆ ತಂಡವನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಳೆಯಿಂದಾಗಿ ನಾವು ಈಗಾಗಲೇ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತೇವೆ. ಇದೀಗ ಆನೆಗಳ ಹಾವಳಿ ಪರಿಸ್ಥಿತಿ ಮತ್ತಷ್ಟು ಹದಗೆಡುವಂತೆ ಮಾಡುತ್ತಿದೆ ಎಂದು ಇಲ್ಲಿನ ಬೆಳೆಗಾರರು ಬೇಸರ ವ್ಯಕ್ತಪಡಿಸಿದ್ದಾರೆ.