ನವದೆಹಲಿ : ಹೈಕಮಾಂಡ್ ನಿರ್ದೇಶನದ ಮೇರೆಗೆ ಕೆ.ಎನ್. ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಲಾಗಿದೆ. ಕೆಲವು ವಿಚಾರಕ್ಕೆ ಪಕ್ಷದಲ್ಲಿ ಶಿಸ್ತು ಮೀರಿ ಹೋದಾಗ ಇಂತಹ ಕ್ರಮ ಆಗುತ್ತವೆ. ಇದು ದುರದೃಷ್ಟಕರ ಎಂದು ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.
ದೆಹಲಿಯಲ್ಲಿ ಮಾತನಾಡಿದ ಹರಿಪ್ರಸಾದ್, ರಾಜಣ್ಣ ಅವರದ್ದೇ ಆದ ಕೊಡುಗೆ ರಾಜ್ಯಕ್ಕೆ ಇದೆ. ಅವರ ತಪ್ಪುಗಳ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದಿದ್ದಾರೆ.
ರಾಜಣ್ಣನಿಗೆ ಅನ್ಯಾಯವಾಗಿದೆ ಎಂದು ಬಿಜೆಪಿ ನಾಯಕರು ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ. ಪಾಪ ಬಿಜೆಪಿ ಅವರು ಸತ್ಯಹರಿಶ್ಚಂದ್ರರು, ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ತೆಗೆದು ಹಾಕಿದಾಗ ಎಲ್ಲಿ ಹೋಗಿದ್ದರು? ಈ ಸತ್ಯವಂತರು, ಜಗದೀಶ್ ಶೆಟ್ಟರ್, ಬಸನಗೌಡ ಪಾಟೀಲ್ ಯತ್ನಾಳರನ್ನು ಆರು ವರ್ಷ ವಜಾ ಮಾಡಿದಾಗ ಎಲ್ಲಿ ಹೋಗಿದ್ದರು ಎಂದು ಕಿಡಿಕಾರಿದ್ದಾರೆ.
ರಾಜೀನಾಮೆ ಹಿಂದೆ ಷಡ್ಯಂತ್ರ ಇದೆ ಎಂದು ರಾಜಣ್ಣ ಹೇಳಿದ್ದಾರೆ. ರಾಜಕೀಯದಲ್ಲಿ ಷಡ್ಯಂತ್ರ ಇರುವುದು ಸಹಜ. ಅದನ್ನೆಲ್ಲ ಎದುರಿಸಬೇಕು. ಅವರು ಸುಮ್ಮನೆ ಕೂರುವ ವ್ಯಕ್ತಿ ಅಲ್ಲ. ನಿಷ್ಠುರವಾದ ವ್ಯಕ್ತಿ, ಮುಂದೆ ಕುಳಿತು ಮಾತಾಡಿ ಸರಿ ಮಾಡುವ ಪ್ರಯತ್ನ ಮಾಡಲಾಗುತ್ತದೆ. ಕೆಲವು ವಿಚಾರದಲ್ಲಿ ಹೈಕಮಾಂಡ್ ತೀರ್ಮಾನ ಅಂತಿಮ. ಮುಂದೆ ಹೀಗಾಗಬಾರದು ಎನ್ನುವುದಕ್ಕೆ ಇದು ಎಚ್ಚರಿಕೆ ಗಂಟೆ. ಇದು ಶಾಸಕರಿಗೆ, ಸಚಿವರಿಗೆ ಎಲ್ಲರಿಗೂ ಅನ್ವಯಿಸಲಿದೆ ಎಂದು ಹೇಳಿದ್ದಾರೆ.
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿ, ಕಾನೂನು ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ಬಿಜೆಪಿಯವರು ನಿರುದ್ಯೋಗಿಗಳಾಗಿದ್ದಾರೆ. ಇದರಲ್ಲಿ ಅವರು ಉದ್ಯೋಗವನ್ನು ಹುಡುಕುತ್ತಿದ್ದಾರೆ. ಆರೋಪ ಬಂದಿದೆ. ತನಿಖೆ ನಡೆಯುತ್ತಿದೆ. ಎಸ್ಐಟಿ ತನ್ನ ತನಿಖೆಯನ್ನು ತ್ವರಿತವಾಗಿ ಮುಗಿಸಬೇಕು. ಸರ್ಕಾರ ನಿರ್ದಿಷ್ಟ ಕಾಲಮಿತಿ ನೀಡಬೇಕು. ಧರ್ಮಸ್ಥಳ ಕ್ಷೇತ್ರಕ್ಕೆ ಕೆಟ್ಟ ಹೆಸರು ಅಪನಂಬಿಕೆ ಬರಬಾರದು ಎಂದು ಹೇಳಿದ್ದಾರೆ.