ನವದೆಹಲಿ: ಹರಿಯಾಣದ ಹಿಸಾರ್ನಲ್ಲಿ ಮಹಿಳೆಯೊಬ್ಬಳು, “ನಿನ್ನ ರಕ್ತವನ್ನು ಕುಡಿಯುತ್ತೇನೆ”, “ನಿನ್ನ ಸಾವು ನನ್ನ ಕೈಯ್ಯಲ್ಲೇ” ಎಂದು ಕಿರುಚಾಡುತ್ತಾ, ತನ್ನ ತಾಯಿಯ ತೊಡೆಗೆ ಕಚ್ಚಿ, ಕೂದಲನ್ನು ಎಳೆದು, ದೈಹಿಕವಾಗಿ ಹಲ್ಲೆ ನಡೆಸಿದ ಹೃದಯ ವಿದ್ರಾವಕ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ವಿಡಿಯೋ ವೈರಲ್ ಆದ ನಂತರ, ಮಹಿಳೆಯ ಸಹೋದರ ಪೊಲೀಸರಿಗೆ ದೂರು ನೀಡಿದ್ದು, ನನ್ನ ತಾಯಿಯನ್ನು ತನ್ನ ಮನೆಯಲ್ಲಿ ಬಂಧಿಯಾಗಿರಿಸಿರುವ ಅಕ್ಕ, ಆಸ್ತಿಯನ್ನು ತನ್ನ ಹೆಸರಿಗೆ ವರ್ಗಾಯಿಸುವಂತೆ ಅಮ್ಮನಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಿದ್ದಾಳೆ ಎಂದು ಆರೋಪಿಸಿದ್ದಾರೆ. ಪೊಲೀಸರು ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಆರಂಭಿಸಿದ್ದಾರೆ.
ವೈರಲ್ ಆಗಿರುವ 3 ನಿಮಿಷಗಳ ವಿಡಿಯೋದಲ್ಲಿ ಹಿಸಾರ್ನ ಆಜಾದ್ ನಗರದ ಮಾಡರ್ನ್ ಸಾಕೇತ್ ಕಾಲೋನಿಯಲ್ಲಿ ರೀಟಾ ಎಂಬ ಮಹಿಳೆಯು ತನ್ನ ತಾಯಿ ನಿರ್ಮಲಾ ದೇವಿಯ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ಕಾಣಬಹುದಾಗಿದೆ. ಅಮ್ಮನನ್ನು ಹೀನಾಯವಾಗಿ ನಿಂದಿಸಿದ ಬಳಿಕ, ಹಾಸಿಗೆಯಲ್ಲಿ ಕುಳಿತಿದ್ದ ತಾಯಿಯ ತೊಡೆಗೆ ಬಲವಾಗಿ ಕಚ್ಚುತ್ತಾಳೆ. ತಾಯಿಯು ನೋವಿನಿಂದ ಕಿರುಚಾಡುತ್ತಿರುವಂತೆಯೇ, ಅವರನ್ನು ಥಳಿಸಿ, ಕೂದಲು ಹಿಡಿದು ಎಳೆದಾಡಿ, ಮಂಚದಿಂದ ಕೆಳಕ್ಕೆ ನೂಕುತ್ತಾಳೆ. ಜೊತೆಗೆ, “ನಾನು ನಿನ್ನ ರಕ್ತವನ್ನು ಕುಡಿಯುತ್ತೇನೆ, ನಿನ್ನ ಸಾವು ನನ್ನ ಕೈಯಿಂದಲೇ ಆಗುತ್ತದೆ” ಎಂದೂ ಹೇಳುತ್ತಾಳೆ. ಬಳಿಕ ರೀಟಾ ತನ್ನ ತಾಯಿಗೆ ಕಪಾಳಮೋಕ್ಷ ಮಾಡಿ, “ನೀವೇನು ಶಾಶ್ವತವಾಗಿ ಬದುಕುತ್ತೀರಾ?” ಎಂದು ಪ್ರಶ್ನಿಸುತ್ತಾಳೆ.
ರೀಟಾ ಅವರ ಸಹೋದರ ಅಮರ್ದೀಪ್ ಸಿಂಗ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ, ತನ್ನ ಸಹೋದರಿ ಎರಡು ವರ್ಷಗಳ ಹಿಂದೆ ರಾಜಗಢ ಬಳಿಯ ಹಳ್ಳಿಯಲ್ಲಿ ವಾಸಿಸುವ ಸಂಜಯ್ ಪುನಿಯಾ ಎಂಬಾತನನ್ನು ಮದುವೆಯಾಗಿದ್ದಳು. ಆದರೆ ಕೆಲವೇ ದಿನಗಳಲ್ಲಿ ಅವಳು ತವರುಮನೆಗೆ ವಾಪಸ್ ಬಂದಳು. ನಂತರ ಅವಳು ಆಸ್ತಿಗಾಗಿ ತಾಯಿಗೆ ಕಿರುಕುಳ ನೀಡಲು ಪ್ರಾರಂಭಿಸಿದಳು. ಬಳಿಕ ತನ್ನ ಗಂಡನನ್ನೂ ಕರೆಸಿಕೊಂಡು, ತಾಯಿ ಮತ್ತು ಗಂಡ ಇಬ್ಬರೂ ತನ್ನೊಂದಿಗೇ ವಾಸ ಇರುವಂತೆ ಮಾಡಿದಳು ಎಂದು ಆರೋಪಿಸಿದ್ದಾರೆ.
ಕುರುಕ್ಷೇತ್ರದಲ್ಲಿದ್ದ ನಮ್ಮ ಕುಟುಂಬದ ಆಸ್ತಿಯನ್ನು 65 ಲಕ್ಷ ರೂ.ಗೆ ಮಾರಾಟ ಮಾಡಿ, ಅದರ ಹಣವನ್ನೆಲ್ಲ ತಾನೇ ಇಟ್ಟುಕೊಂಡ ರೀಟಾ, ಉಳಿದ ಆಸ್ತಿಯನ್ನೂ ತನ್ನ ಹೆಸರಿಗೆ ವರ್ಗಾಯಿಸಬೇಕೆಂದು ತಾಯಿಯ ಮೇಲೆ ಒತ್ತಡ ಹೇರತೊಡಗಿದಳು.
ತಾಯಿಯನ್ನು ತನ್ನ ಮನೆಯಲ್ಲೇ ಬಂಧಿಯಾಗಿಟ್ಟಿದ್ದಳು ಎಂದು ಸಿಂಗ್ ಆರೋಪಿಸಿದ್ದಾರೆ. ನಾನು ಆಕೆಯ ಮನೆಗೆ ಭೇಟಿ ನೀಡದಂತೆ, ಅಮ್ಮನನ್ನು ನೋಡದಂತೆ ರೀಟಾ ನನ್ನನ್ನು ತಡೆದಿದ್ದಳು, ಮನೆಗೆ ಬರಲು ಯತ್ನಿಸಿದರೆ ನಿನ್ನ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸುವುದಾಗಿ ಬೆದರಿಕೆ ಹಾಕಿದ್ದಳು ಎಂದೂ ಅಮರ್ ದೀಪ್ ಹೇಳಿದ್ದಾರೆ.
ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಭಾರತೀಯ ನ್ಯಾಯ ಸಂಹಿತೆ ಮತ್ತು ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ, 2007 ರ ಅಡಿಯಲ್ಲಿ ರೀಟಾ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಆಜಾದ್ ನಗರ ಪೊಲೀಸ್ ಠಾಣೆಯ ಸ್ಟೇಷನ್ ಹೆಡ್ ಆಫೀಸರ್, ಇನ್ಸ್ಪೆಕ್ಟರ್ ಸಾಧುರಾಮ್ ತಿಳಿಸಿದ್ದಾರೆ.