ಬೆಂಗಳೂರು: ಮಹಿಳೆಯ ಅಪಹರಣ ಪ್ರಕರಣದಲ್ಲಿ ಮಾಜಿ ಸಚಿವ ರೇವಣ್ಮ ಹಾಗೂ ಪತ್ನಿ ಭವಾನಿ ರೇವಣ್ಣ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ.
ಕೆ.ಆರ್. ನಗರದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಎಸ್ ಐಟಿ ಅಧಿಕಾರಿಗಳು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಮಾಜಿ ಸಚಿವ ಹೆಚ್.ಡಿ ರೇವಣ್ಣ (HD Revanna) ಅವರೊಂದಿಗೆ ಪತ್ನಿ ಭವಾನಿ ರೇವಣ್ಣ (Bhavani Revanna) ಅವರನ್ನೂ ಆರೋಪಿ ಎಂದು ಆರೋಪ ಪಟ್ಟಿಯಲ್ಲಿ ಸೂಚಿಸಲಾಗಿದೆ. ಹೀಗಾಗಿ ಇಬ್ಬರಿಗೂ ಸಂಕಷ್ಟ ಶುರುವಾಗಿದೆ.
ಮಾಜಿ ಸಚಿವ ಹೆಚ್.ಡಿ. ರೇವಣ್ಣ ಸೇರಿದಂತೆ 7 ಆರೋಪಿಗಳ ವಿರುದ್ಧ 42ನೇ ಎಸಿಎಂಎಂ ನ್ಯಾಯಾಲಯಕ್ಕೆ (ACMM Court) ಎಸ್ ಐಟಿ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಲಾಗಿದೆ. ಈ ಪ್ರಕರಣದಲ್ಲಿ ಭವಾನಿ ರೇವಣ್ಣ 8ನೇ ಆರೋಪಿಯಾಗಿದ್ದಾರೆ.
ರೇವಣ್ಣ ವಿರುದ್ಧ ಎಫ್ ಐಆರ್ ರದ್ದು ಕೋರಿರುವ ಹಾಗೂ ರೇವಣ್ಣ ಜಾಮೀನು ರದ್ದಿಗೆ ಕೋರಿದ್ದ ಎರಡೂ ಅರ್ಜಿಗಳನ್ನು ಏಕಕಾಲಕಕ್ಕೆ ಹೈಕೋರ್ಟ್ ನ ಏಕಸದಸ್ಯ ಪೀಠ ವಿಚಾರಣೆ ನಡೆಸಿರುವುದು ವಿಶೇಷ. ಎಸ್ ಐಟಿ ಪರ ಪ್ರೊ. ರವಿವರ್ಮಕುಮಾರ್ ವಾದ ಮಂಡಿಸಿದರು. ವಾದ- ಪ್ರತಿವಾದ ಸದ್ಯ ಮುಕ್ತಾಯವಾಗಿದ್ದು, ತೀರ್ಪು ಕಾಯ್ದಿರಿಸಲಾಗಿದೆ.
ಪ್ರಕರಣದ ಆರೋಪಿಗಳಾದ ರೇವಣ್ಣ ಮತ್ತು ಭವಾನಿ ಅಣತಿಯ ಮೇರೆಗೆ ಸಂತ್ರಸ್ತೆಯ ಅಪಹರಣ ನಡೆದಿದೆ. ರೇವಣ್ಣ ಏಪ್ರಿಲ್ 23ರಂದು ಸಂತ್ರಸ್ತೆಯನ್ನು ಹೊಳೆನರಸೀಪುರಕ್ಕೆ ಕರೆದು ಯಾವುದೇ ಕಾರಣಕ್ಕೂ ಪೊಲೀಸರ ಕೈಗೆ ಸಿಗಬಾರದು ಎಂದು ಬೆದರಿಕೆ ಹಾಕಿದ್ದಾರೆ. ಆನಂತರ ಏ.26ರಂದೇ ಸತೀಶ್ ಬಾಬು ಅವರ ಮೂಲಕ ಸಂತ್ರಸ್ತೆಯನ್ನ ಅಪಹರಣ ಮಾಡಿಸಿದ್ದಾರೆ ಎಸ್ ಐಟಿ ಚಾರ್ಚ್ಶೀಟ್ ನಲ್ಲಿ ಉಲ್ಲೇಖಿಸಿದೆ.
ಮಹಿಳೆಯನ್ನು ಅಪಹರಿಸಿ 7ನೇ ಆರೋಪಿ ಮನೆಯಲ್ಲಿ ಇರಿಸಲಾಗಿತ್ತು. ಈ ವೇಳೆ ಭವಾನಿ ರೇವಣ್ಣ ನಿರಂತರವಾಗಿ ಫೋನ್ ಮೂಲಕ ಬೆದರಿಕೆ ಹಾಕಿದ್ದಾರೆ ಎಂದು ಅಧಿಕಾರಿಗಳು ಉಲ್ಲೇಖಿಸಿದ್ದಾರೆ. ಆರೋಪಿಗಳ ಜೊತೆ ಭವಾನಿ ಮಾತನಾಡಿರೋದಕ್ಕೆ 22 ಆಡಿಯೋ ಕ್ಲಿಪ್ಪಿಂಗ್ ಗಳು ಸಿಕ್ಕಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.