ಬೆಂಗಳೂರು : ಸ್ಯಾಂಡಲ್ವುಡ್ನ ‘ಅಭಿನಯ ಚಕ್ರವರ್ತಿ’ ಕಿಚ್ಚ ಸುದೀಪ್ ಅವರು ಚಿತ್ರರಂಗಕ್ಕೆ ಕಾಲಿಟ್ಟು ಇಂದಿಗೆ ಸರಿಯಾಗಿ ಮೂರು ದಶಕಗಳು ಸಂದಿವೆ. 30 ವರ್ಷಗಳ ಈ ಅದ್ಭುತ ಸಿನಿ ಪಯಣದ ಸಂಭ್ರಮವನ್ನು ಸುದೀಪ್ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಅತ್ಯಂತ ಭಾವುಕ ಪೋಸ್ಟ್ ಹಂಚಿಕೊಳ್ಳುವ ಮೂಲಕ ಆಚರಿಸಿದ್ದಾರೆ.
ಹೃದಯ ತುಂಬಿ ಬಂದಿದೆ
ತಮ್ಮ ಸುದೀರ್ಘ ಜರ್ನಿ ಕುರಿತು ಬರೆದುಕೊಂಡಿರುವ ಸುದೀಪ್, ಮೂರು ದಶಕಗಳ ನಂತರ ಈ ಸುಂದರ ಸಿನಿರಂಗದಲ್ಲಿ ನಿಂತಿರುವಾಗ ನನ್ನ ಹೃದಯ ತುಂಬಿದೆ. ಕನಸುಗಳ ಜೊತೆ ಆರಂಭಿಸಿದ ನನ್ನ ಪ್ರಯಾಣ ಇಷ್ಟು ದೊಡ್ಡದಾಗುತ್ತದೆ ಎಂದು ನಾನು ಅಂದು ಊಹಿಸಿರಲಿಲ್ಲ. ಇದಕ್ಕೆ ಕಾರಣ ನೀವು, ಎಂದು ತಮ್ಮ ಯಶಸ್ಸಿನ ಶ್ರೇಯಸ್ಸನ್ನು ಜನರಿಗೆ ಅರ್ಪಿಸಿದ್ದಾರೆ.
ತಮ್ಮ ಏಳುಬೀಳುಗಳಲ್ಲಿ ಜೊತೆಯಾಗಿ ನಿಂತ ಅಭಿಮಾನಿಗಳನ್ನು ನೆನೆದ ಅವರು, ಅಭಿಮಾನಿಗಳೇ ನೀವು ನನ್ನ ಶಕ್ತಿ. ನಿಮ್ಮ ಪ್ರೀತಿಯೇ ನನಗೆ ಮುಂದೆ ಸಾಗುವ ಧೈರ್ಯ ಕೊಡುತ್ತದೆ ಎಂದಿದ್ದಾರೆ. ಸಿನಿಮಾ ಎನ್ನುವುದು ಒಬ್ಬರ ಕೆಲಸವಲ್ಲ, ಅದೊಂದು ತಂಡದ ಕೆಲಸ ಎಂದು ಸುದೀಪ್ ಅಭಿಪ್ರಾಯಪಟ್ಟಿದ್ದಾರೆ. “ನನ್ನ ಮೇಲೆ ನಂಬಿಕೆ ಇಟ್ಟ ನಿರ್ದೇಶಕರು ಮತ್ತು ಬರಹಗಾರರಿಗೆ ಧನ್ಯವಾದಗಳು. ನಿರ್ಮಾಪಕರು ತೋರಿಸಿದ ಧೈರ್ಯ ಮತ್ತು ವಿಶ್ವಾಸದಿಂದ ನನ್ನ ಕನಸುಗಳು ನಿಜವಾದವು. ನನ್ನ ಎಲ್ಲಾ ಸಹನಟರು ಹಾಗೂ ತಾಂತ್ರಿಕ ವರ್ಗದವರ ಪರಿಶ್ರಮ ಅಮೂಲ್ಯ ಎಂದು ಸ್ಮರಿಸಿದ್ದಾರೆ.
ತಮ್ಮ ವೃತ್ತಿಜೀವನದಲ್ಲಿ ಮಾಧ್ಯಮಗಳ ಪಾತ್ರವನ್ನು ಉಲ್ಲೇಖಿಸಿದ ಕಿಚ್ಚ, “ನೀವು ನನ್ನನ್ನು ಬೆಂಬಲಿಸಿ, ಪ್ರಶ್ನಿಸಿ, ಬೆಳೆಸಿದಿರಿ. ಕನ್ನಡ ಚಿತ್ರರಂಗ ನನಗೆ ಗುರುತು ಮತ್ತು ಗೌರವ ಕೊಟ್ಟಿದೆ. ಕನ್ನಡ ಸಿನೆಮಾ ನನ್ನ ಹೆಮ್ಮೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಕೊನೆಯದಾಗಿ ಕುಟುಂಬ ಮತ್ತು ಸ್ನೇಹಿತರಿಗೆ ಧನ್ಯವಾದ ತಿಳಿಸಿರುವ ಸುದೀಪ್, ಈ 30 ವರ್ಷಗಳು ನನಗೆ ವಿನಯವನ್ನು ಕಲಿಸಿವೆ. ನಾನು ಇನ್ನಷ್ಟು ಶ್ರಮಿಸುತ್ತೇನೆ. ಈ ಕಲೆಗೆ ಸದಾ ಗೌರವ ಕೊಡುತ್ತಾ ಮುಂದುವರೆಯುತ್ತೇನೆ ಎಂದು ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ. 1996ರಲ್ಲಿ ಆರಂಭವಾದ ಸುದೀಪ್ ಅವರ ಈ ಪಯಣ ಇಂದು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದೆ. ಅವರ ಈ ಸಾಧನೆಗೆ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಳೆ ಸುರಿಸುತ್ತಿದ್ದಾರೆ.
ಇದನ್ನೂ ಓದಿ : ಸೈಟ್ ಜಟಾಪಟಿ | ಕಾಂಪೌಂಡ್ ಕೆಡವಿದ್ದ ಮಾಲೀಕನ ಜೊತೆ ನಡು ರಸ್ತೆಯಲ್ಲೇ ಯಶ್ ತಾಯಿ ವಾಗ್ವಾದ!



















