ನರಮೇಧಕ್ಕೆ ನಲುಗಿರುವ ಕಾಶ್ಮೀರ ಕಣಿವೆಯ ಎಲ್ಲೆಡೆ ಈಗ ಮಾನವೀಯತೆಯ ನೆರವಿನ ಹಸ್ತ ಚಾಚಿದೆ. ಪ್ರವಾಸಿಗರನ್ನೇ ದೇವರು ಅಂತಾ ಭಾವಿಸುವ ಇಲ್ಲಿನ ಜನರೀಗ ಜಾತಿ, ಧರ್ಮದಾಚೆಗಿನ ನಿರ್ಧಾರ ಮಾಡಿರುವುದು ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ.
ಉಗ್ರರ ದಾಳಿಯಿಂದ ಕಾಶ್ಮೀರದಲ್ಲಿ ಆವರಿಸಿರುವ ಭಯದ ವಾತಾವರಣಕ್ಕೆ ಹೆದರಿ ಬಹುತೇಕ ಪ್ರವಾಸಿಗರು ವಾಪಸ್ ಆಗುತ್ತಿದ್ದಾರೆ. ಇಂತಹ ಪ್ರವಾಸಿಗರ ನೆರವಿಗಾಗಿಯೇ ಜಮ್ಮು-ಕಾಶ್ಮೀರ ಟ್ಯಾಕ್ಸಿ ಸಂಘ ಉಚಿತ ಸೇವೆ ನೀಡುತ್ತಿದೆ.
ವಿಮಾನ ನಿಲ್ದಾಣ, ಬಸ್ ನಿಲ್ದಾಣ ಹೀಗೆ ಪ್ರವಾಸಿಗರ ಅನುಕೂಲಕ್ಕೆ ತಕ್ಕ ಹಾಗೆ ಉಚಿತ ಟ್ಯಾಕ್ಸಿ ಸೇವೆ ನೀಡಲು ಮುಂದಾಗಿದ್ದಾರೆ. ಈ ಮೂಲಕ ಧರ್ಮದ ಹೆಸರಿನಲ್ಲಿ ರಕ್ತದೋಕುಳಿ ಆಡಿದವರಿಗೆ ಸಹೃದಯದ ಪ್ರತಿ ಬಿಂಬವನ್ನು ಖುದ್ದು ಕಾಶ್ಮೀರಿಗಳೇ ತೋರಿಸುತ್ತಿದ್ದಾರೆ.