ಬೆಂಗಳೂರು: ಕರ್ನಾಟಕ ಹಾಲು ಮಹಾಮಂಡಳವು (ಕೆಎಂಎಫ್) ನಂದಿನಿ ಹಾಲಿನ ಉತ್ಪನ್ನಗಳ ಮಾರಾಟದಲ್ಲಿ ಮತ್ತೊಂದು ಮೈಲುಗಲ್ಲು ನೆಡಲು ಮುಂದಾಗಿದೆ. ನಂದಿನಿ ಹಾಲಿನ ಉತ್ಪನ್ನಗಳು ಈಗಾಗಲೇ ಕೇರಳ ಸೇರಿ ಆರು ರಾಜ್ಯಗಳಲ್ಲಿ ಮಾರಾಟವಾಗುತ್ತಿವೆ. ಇದರ ಬೆನ್ನಲ್ಲೇ, ಉತ್ತರ ಪ್ರದೇಶ ಹಾಗೂ ರಾಜಸ್ಥಾನದಲ್ಲೂ ನಂದಿನಿ ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡಲು ಕೆಎಂಎಫ್ ಮುಂದಾಗಿದೆ.
ನಂದಿನಿ ಹಾಲು ಹಾಗೂ ಮೊಸರನ್ನು ಉತ್ತರ ಪ್ರದೇಶ ಮತ್ತು ರಾಜಸ್ಥಾನದ ಜೈಪುರದಲ್ಲಿ ಮಾರಾಟ ಮಾಡಲು ನಿರ್ಧರಿಸಲಾಗಿದೆ. ಮಾರ್ಚ್ ತಿಂಗಳಾಂತ್ಯದ ವೇಳೆಗೆ ಮಾರಾಟ ಆರಂಭವಾಗಲಿದೆ ಎಂದು ಕೆಎಂಎಫ್ ಪ್ರಕಟಣೆ ತಿಳಿಸಿದೆ. ಇದರೊಂದಿಗೆ ಮತ್ತೆರಡು ರಾಜ್ಯಗಳಿಗೆ ನಂದಿನಿ ಕಾಲಿಟ್ಟಂತಾಗಲಿದೆ. ಉತ್ತರ ಪ್ರದೇಶದ ಮಹಾ ಕುಂಭಮೇಳದಲ್ಲಿ ನಂದಿನಿ ಹಾಲಿನ ಉತ್ಪನ್ನಗಳ ಮಾರಾಟದ ಬೆನ್ನಲ್ಲೇ ಉತ್ತರ ಪ್ರದೇಶಕ್ಕೂ ಮಾರುಕಟ್ಟೆ ವಿಸ್ತರಣೆಯಾಗುತ್ತಿರುವುದು ಮಹತ್ವದ ಸಂಗತಿಯಾಗಿದೆ.
ಮಾರಾಟ ವಿಸ್ತರಣೆ ಕುರಿತು ಕರ್ನಾಟಕ ಹಾಲು ಮಹಾಮಂಡಳವು ಪ್ರಕಟಣೆ ತಿಳಿಸಿದೆ. ದೆಹಲಿ ನಗರಕ್ಕೆ ಸಮೀಪದ ಉತ್ತರಪ್ರದೇಶ ರಾಜ್ಯದ ಹತ್ರಾಸ್ ಜಿಲ್ಲೆಯಲ್ಲಿ ನೂತನ ಹಾಲು ಸಂಸ್ಕರಣಾ ಘಟಕವನ್ನು ಆರಂಭಿಸಲಾಗಿದೆ. ಈ ಘಟಕದ ಸುತ್ತಮುತ್ತಲಿನ ನಗರ ಪ್ರದೇಶಗಳಾದ ಆಗ್ರಾ, ಮಥುರ, ಮೀರತ್, ಅಲಿಗಢ್ (Mathura, Agra, Meerut, Aligarh) ಪ್ರದೇಶಗಳಲ್ಲಿ ನಂದಿನಿ ಹಾಲು ಮಾರಾಟವನ್ನು ಪ್ರಾರಂಭಿಸುವ ಸಂಬಂಧ ಅಲ್ಲಿನ ಮಾರಾಟಗಾರರ ಸಭೆ ನಡೆಸಲಾಗಿದೆ. ಮಾರ್ಚ್ 05ರಂದು ವ್ಯವಸ್ಥಾಪಕ ನಿರ್ದೇಶಕರಾದ ಬಿ.ಶಿವಸ್ವಾಮಿ ಕೆ.ಎ.ಎಸ್ ಅವರು ಸಭೆ ಮುನ್ನಡೆಸಿದರು. ಈ ಪ್ರದೇಶಗಳಲ್ಲಿ ಮಾರ್ಚ್ 16ರಿಂದ ನಂದಿನಿ ಹಾಲು ಮತ್ತು ಮೊಸರು ಮಾರಾಟಕ್ಕೆ ಎಲ್ಲಾ ಪೂರಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಜೈಪುರದಲ್ಲೂ ಮಾರಾಟ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದೆ.
ನಿತ್ಯ 4.35 ಲಕ್ಷ ಲೀಟರ್ ಹಾಲು ಪೂರೈಕೆ
ಕರ್ನಾಟಕದಿಂದ ಹಲವು ರಾಜ್ಯಗಳಿಗೆ ನಿತ್ಯ 4.35 ಲಕ್ಷ ಲೀಟರ್ ಹಾಲು ಪೂರೈಕೆಯಾಗುತ್ತಿದೆ. ದೆಹಲಿಗೆ ಮಂಡ್ಯದಿಂದ ನಂದಿನಿ ಹಾಲು ಸೇರಿ ಹಲವು ಉತ್ಪನ್ನ ಪೂರೈಕೆಯಾಗುತ್ತಿವೆ. ಮುಂಬೈಗೆ ತುಮಕೂರಿನಿಂದ, ಹೈದರಾಬಾದ್ ಗೆ ಹಾಸನದಿಂದ, ಚೆನ್ನೈ ಹಾಗೂ ಕೇರಳಕ್ಕೆ ಮೈಸೂರಿನಿಂದ , ಗೋವಾ ಹಾಗೂ ಪುಣೆಗೆ ಬೆಳಗಾವಿಯಿಂದ, ತಮಿಳುನಾಡು ನೀಲಗಿರಿ ಹಾಗೂ ಕೇರಳಕ್ಕೆ ಚಾಮರಾಜನಗರದಿಂದ, ಸೊಲ್ಲಾಪುರಕ್ಕೆ ಬೆಳಗಾವಿಯಿಂದ, ಮಹಾರಾಷ್ಟ್ರಕ್ಕೆ ವಿಜಯಪುರದಿಂದ ನಂದಿನಿ ಹಾಲು ಸಾಗಾಟ ಮಾಡಲಾಗುತ್ತಿದೆ.
ಕರ್ನಾಟಕದಲ್ಲಿ ಮಾತ್ರವಲ್ಲ, ಆರು ರಾಜ್ಯಗಳಿಗೆ ಹಾಲು ಉತ್ಪನ್ನಗಳನ್ನು ಸರಬರಾಜು ಮಾಡುವ ಮೂಲಕ ಕೆಎಂಎಫ್ ಪ್ರತಿದಿನ 2.47 ಕೋಟಿ ರೂ. ಆದಾಯ ಪಡೆಯುತ್ತಿದೆ. ಹಾಲು ಹಾಗೂ ಮೊಸರಿನಿಂದ ಮಾಸಿಕ ಬೇರೆ ರಾಜ್ಯಗಳಿಂದಲೇ 75 ಕೋಟಿ ರೂ. ಆದಾಯ ಗಳಿಸುತ್ತಿದೆ. ಇದೇ ಕಾರಣಕ್ಕಾಗಿ, ಹೈನೋದ್ಯಮದಲ್ಲಿ ಕೆಎಂಎಫ್ ದೇಶದಲ್ಲೇ 2 ನೇ ಸ್ಥಾನ ಪಡೆದಿದೆ. ದಕ್ಷಿಣ ಭಾರತದಲ್ಲಿ ಹಾಲು ಶೇಖರಣೆ ಹಾಗೂ ಮಾರಾಟದಲ್ಲಿ ಅಗ್ರಸ್ಥಾನದಲ್ಲಿದೆ.