ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಸಿಹಿ ಸುದ್ದಿ ನೀಡಿದೆ. ರಾಜ್ಯದ ಸರ್ಕಾರಿ ನೌಕರರು ಪಿಂಚಣಿ ಸೌಲಭ್ಯವನ್ನು ಸುಗಮವಾಗಿ ಪಡೆಯಲು ಸರ್ಕಾರವು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಈ ನಿರ್ಧಾರದಿಂದ ಸರ್ಕಾರಿ ನೌಕರರು ನಿವೃತ್ತರಾದ ನಂತರವೂ ಅದೇ ಬ್ಯಾಂಕ್ ಖತೆಯನ್ನು ಬಳಸಿ ಪಿಂಚಣಿ ಪಡೆಯಲು ಅರ್ಹರಾಗಿದ್ದಾರೆ. ಈ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಇದಕ್ಕೂ ಮೊದಲು ಸರ್ಕಾರಿ ನೌಕರರು ನಿವೃತ್ತರಾದ ಬಳಿಕ ಪಿಂಚಣಿ ಪಡೆಯಲು ಹೊಸ ಬ್ಯಾಂಕ್ ಖಾತೆ ತೆರೆಯಬೇಕಾಗಿತ್ತು. ಆದರೀಗ, ಹಳೆಯ ಬ್ಯಾಂಕ್ ಖಾತೆಯಿಂದಲೇ ಪಿಂಚಣಿ ಪಡೆಯಬಹುದಾಗಿದೆ. ಸರ್ಕಾರಿ ನೌಕರರ ವೇತನ ಮತ್ತು ಭತ್ಯೆಗಳನ್ನು ಪಾವತಿಸಲು “ಸ್ವೀಕರ್ತರ ವಿಧ-27” ಅಡಿಯಲ್ಲಿ ನೋಂದಾಯಿಸಲಾಗುತ್ತದೆ. ನಿವೃತ್ತಿಯ ನಂತರ ಪಿಂಚಣಿ ಪಾವತಿಗಾಗಿ “ಸ್ವೀಕರ್ತರ ವಿಧ-28” ಅಡಿಯಲ್ಲಿ ನೋಂದಾಯಿಸಬೇಕು. ಹಿಂದಿನ ನಿಯಮದಂತೆ, ಒಂದೇ ಖಾತೆಗೆ ಎರಡು ವಿಧದ ನೋಂದಣಿ ಸಾಧ್ಯವಿರಲಿಲ್ಲ. ಆದ್ದರಿಂದ ನಿವೃತ್ತರಾದ ನಂತರ ಹೊಸ ಬ್ಯಾಂಕ್ ಖಾತೆ ತೆರೆಯುವ ಅಗತ್ಯವಿತ್ತು.
ಆದರೆ, ಹೊಸ ನಿಯಮಗಳು ಅನುಕೂಲಕರವಾಗಿವೆ. ನೌಕರರು ನಿವೃತ್ತರಾದ ನಂತರವೂ 20 ದಿನಗಳ ಕಾಲ ಸ್ವೀಕರ್ತರ ವಿಧ-27 ಸಕ್ರಿಯವಾಗಿರುತ್ತದೆ. ಈ ಅವಧಿಯಲ್ಲಿ ಬಾಕಿ ವೇತನ ಅಥವಾ ಭತ್ಯೆಗಳನ್ನು ಪಾವತಿಸಲು ಸಾಧ್ಯವಿದೆ. 20 ದಿನಗಳ ನಂತರ ವಿಧ-27 ನೋಂದಣಿಯನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಅದೇ ಬ್ಯಾಂಕ್ ಖಾತೆಯನ್ನು ಸ್ವೀಕರ್ತರ ವಿಧ-28 ಅಡಿಯಲ್ಲಿ ಪಿಂಚಣಿ ಪಾವತಿಗೆ ನೋಂದಾಯಿಸಲಾಗುತ್ತದೆ.
ನಿವೃತ್ತರಾದ ನಂತರ ಯಾವುದೇ ಹೆಚ್ಚುವರಿ ವೇತನ/ಭತ್ಯೆ ಪಾವತಿಸಬೇಕಾದರೆ, ಸಂಬಂಧಿತ ಡಿಡಿಒ ಖಜಾನೆ-2 ನಲ್ಲಿ ಅರ್ಜಿ ಸಲ್ಲಿಸಿದರೆ, ವಿಧ-27 ಅನ್ನು ತಾತ್ಕಾಲಿಕವಾಗಿ ಪುನಃ ಸಕ್ರಿಯಗೊಳಿಸಲಾಗುವುದು ಎಂದು ರಾಜ್ಯ ಸರ್ಕಾರವು ನೂತನ ಆದೇಶದಲ್ಲಿ ತಿಳಿಸಿದೆ.