ಕನ್ನಡದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಕಮಲ್ ಹಾಸನ್ ವಿರುದ್ಧ ಇಡೀ ಕರ್ನಾಟಕವೇ ಆಕ್ರೋಶ ವ್ಯಕ್ತಪಡಿಸಿದೆ. ಕ್ಷಮೆ ಕೇಳುವವರಿಗೂ ಅವರ ಚಿತ್ರ ಬಿಡುಗಡೆ ಮಾಡದಂತೆ ಕನ್ನಡಪರ ಸಂಘಟನೆ ಕಾರ್ಯಕರ್ತರು ಗುಡುಗಿದ್ದಾರೆ. ಈ ವಿಚಾರವನ್ನು ಕನ್ನಡ ಸಾಹಿತ್ಯ ಪರಿಷತ್ತು ಗಂಭೀರವಾಗಿ ಪರಿಗಣಿಸಿದೆ.

ಕಮಲ್ ಹಾಸನ್ ಅವರ ವಿವಾದಾತ್ಮಕ ಹೇಳಿಕೆಯಿಂದ ಕರ್ನಾಟಕದಲ್ಲಿ ಹೋರಾಟ ನಡೆಯುತ್ತಿವೆ. ಹೀಗಾಗಿ ಕಮಲ್ ಹಾಸನ್ ಅವರ ತಗ್ ಲೈಫ್ ಸಿನಿಮಾ ಬಹಿಷ್ಕರಿಸುವಂತೆ ಅನೇಕ ಹೋರಾಟ ಸಂಘಟನೆಗಳು ಕರೆ ನೀಡಿವೆ. ಸಿನಿಮಾ ಬಿಡುಗಡೆಗೆ ತೊಂದರೆ ಆಗಬಹುದು ಎಂದು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಕಮಲ್ ಹಾಸನ್ ಅರ್ಜಿ ಸಲ್ಲಿಸಿದ್ದಾರೆ. ಈ ಮೂಲಕ ನಿಮಾ ಬಿಡುಗಡೆಗೆ ಯಾವುದೇ ತೊಂದರೆ ಆಗದಂತೆ ಹಾಗೂ ಪೊಲೀಸರಿಗೆ ನಿರ್ದೇಶನ ನೀಡಿ ಭದ್ರತೆ ಒದಗಿಸುವಂತೆ ಕೋರಿದ್ದಾರೆ.

ಕಮಲ್ ಹಾಸನ್ ಅವರು ಸಲ್ಲಿಸಿರುವ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ನಾಗ ಪ್ರಸನ್ನ ಕರ್ನಾಟಕದ ಜನತೆಗೆ ಜಲ, ಭಾಷೆ, ಜಾಗದ ಬಗ್ಗೆ ಇರುವ ಸ್ವಾಭಿಮಾನದ ಬಗ್ಗೆ ವಿವರಿಸಿ ಯಾವುದೇ ಆದೇಶ ನೀಡಲು ತಿರಸ್ಕರಿಸಿದ್ದಾರೆ. ಕಮಲ ಹಾಸನ್ ಅವರ ವಕೀಲರ ಮನವಿಯ ಮೇರೆಗೆ ಅರ್ಜಿಯನ್ನು ಜೂನ್ 13ಕ್ಕೆ ಮುಂದೂಡಲಾಗಿದೆ.ಕಮಲ್ ಹಾಸನ್ ಅವರ ವಿವಾದಾತ್ಮಕ ಹೇಳಿಕೆಯಿಂದ ನೊಂದಿರುವ ಕನ್ನಡಿಗರು ಮತ್ತು ಅನೇಕ ಕನ್ನಡಪರ ಸಂಘಟನೆಗಳು ಹೋರಾಟ ನಡೆಸುತ್ತಿವೆ. ಪೊಲೀಸ್ ಠಾಣೆಗಳಲ್ಲಿ ಕಮಲ್ ಹಾಸನ್ ವಿರುದ್ಧ ಸಹ ದೂರು ದಾಖಲಿಸಲಾಗುತ್ತಿವೆ.
ಇದರ ಮಧ್ಯೆ ವಿವಾದದ ಸೂಕ್ಷ್ಮತೆಯನ್ನು ಮತ್ತು ಕನ್ನಡ ಭಾಷೆಯ ವಿರುದ್ಧ ಕಮಲ್ ಹಾಸನ್ ಅವರು ನೀಡಿರುವ ವಿವಾದಾತ್ಮಕ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ. ಮಹೇಶ್ ಜೋಶಿ, ಕಮಲ್ ಹಾಸನ್ ಸಲ್ಲಿಸಿರುವ ಅರ್ಜಿಗೆ ವಿರುದ್ಧವಾಗಿ ಅರ್ಜಿ ಸಲ್ಲಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಪರವಾಗಿ ವಕೀಲರಾದ ಚಿಂತನ ಚನ್ನಪ್ಪ ಮತ್ತು ರವಿ ಗೌಡ ಜೆ.ಎಸ್ ವಕಾಲತ್ತು ವಹಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಪರವಾಗಿ ಹಿರಿಯ ವಕೀಲ ಎಸ್. ಬಸವರಾಜ್ ವಾದ ಮಂಡಿಸಲಿದ್ದಾರೆ.