ಮಳೆಗಾಲ ಆರಂಭವಾಗುತ್ತಿದ್ದಂತೆ ಸಾಕಷ್ಟು ಹೊಸ ಸಸ್ಯಗಳು ಹುಟ್ಟಿಕೊಳ್ಳುತ್ತವೆ. ಅವು ತಮ್ಮ ಬಣ್ಣ ಹಾಗೂ ವಿಶೇಷತೆಯಿಂದ ಪ್ರಕೃತಿಯಲ್ಲಿ ಹೊಸತನವನ್ನು ಮೂಡಿಸುತ್ತವೆ. ಅಂತಹ ವಿಶೇಷ ಸಸ್ಯಗಳಲ್ಲಿ ಕಳಲೆಯು ಒಂದು. ಬಿದಿರಿನ ಪುಟ್ಟ ಪುಟ್ಟ ಸಸಿಗಳಿಗೆ ಕಳಲೆ ಎಂದು ಕರೆಯುತ್ತಾರೆ. ಇದು ಮಳೆಗಾಲದಲ್ಲಿ ಹೇರಳವಾಗಿ ದೊರೆಯುವುದರಿಂದ ಇದನ್ನು ಬಳಸಿ ಸಾಕಷ್ಟು ಆಹಾರ ಪದಾರ್ಥಗಳನ್ನು ತಯಾರಿಸಲಾಗುತ್ತದೆ. ಇದರಲ್ಲಿ ಇರುವ ಔಷಧೀಯ ಗುಣ ಹಾಗೂ ಆರೋಗ್ಯಕರ ಅಂಶವು ಅತ್ಯುತ್ತಮ ಪೋಷಣೆ ನೀಡುತ್ತದೆ. ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಇದರ ಖಾದ್ಯಗಳನ್ನು ಹೆಚ್ಚಾಗಿ ಮಾಡುತ್ತಾರೆ. ಇತ್ತೀಚೆಗೆ ಇದನ್ನು ವಿವಿಧ ಪ್ರದೇಶಗಳಲ್ಲೂ ಬಳಕೆ ಮಾಡುತ್ತಿರುವುದನ್ನು ಕಾಣಬಹುದು.
ಈ ಸಸ್ಯದಲ್ಲಿ ಸೈನೋಜೆನಿಕ್ ಗ್ಲೈಕೋಸೈಡ್ ಎಂಬ ನೈಸರ್ಗಿಕ ಜೀವಾಣು ತುಂಬಿರುತ್ತದೆ. ಇದು ಒಂದು ಬಗೆಯ ವಿಷದ ರೂಪ. ಅಡುಗೆ ಮಾಡುವಾಗ ಇದನ್ನು ಕುದಿಯುವ ನೀರಿನಲ್ಲಿ ಹಲವಾರು ಬಾರಿ ಕುದಿಸಿ, ಸ್ವಚ್ಛಮಾಡಲಾಗುವುದು. ನಂತರ ಇದನ್ನು ಅಡುಗೆಯಲ್ಲಿ ಬಳಸಲಾಗುತ್ತದೆ. ಜಪಾನ್, ತೈವಾನ್ ಮತ್ತು ಚೀನಾಗಳಲ್ಲಿ ಇದನ್ನು ಬೇಸಿಗೆಯಲ್ಲಿಯೇ ಕೊಯ್ಲು ಮಾಡುತ್ತಾರೆ. ನಮ್ಮ ಭಾರತದ ಅಸ್ಸಾಂ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮಣಿಪುರ, ಜಾರ್ಖಂಡ್, ಒಡಿಶಾ ಮತ್ತು ಕರ್ನಾಟಕ ರಾಜ್ಯದಲ್ಲಿ ಇದನ್ನು ಬೆಳೆಯುವರು. ಅರಣ್ಯ ತರಕಾರಿಗಳ ರಾಜ ಎಂದು ಕರೆಯಲ್ಪಡುವ ಈ ಗಿಡಮೂಲಿಕೆಯನ್ನು ಪ್ರಾಚೀನ ಕಾಲದ ವಿವಿಧ ಸಾಂಪ್ರದಾಯಿಕ ಚಿಕಿತ್ಸೆಯಲ್ಲಿ ಹಾಗೂ ಔಷಧಿಯಲ್ಲಿಯೂ ಬಳಸಲಾಗುತಿತ್ತು.
“ಪೌಷ್ಠಿಕಾಂಶದ ವಿವರ:”
ಬಿದಿರಿನ ಚಿಗುರಿನಲ್ಲಿ ಸಾಕಷ್ಟು ಪ್ರೋಟೀನ್, ಕಾರ್ಬೋಹೈಡ್ರೇಟ್, ನಾರಿನಂಶ, ಖನಿಜಗಳು ಇರುತ್ತವೆ. ಇದರಲ್ಲಿ ಕೊಬ್ಬು ಮತ್ತು ಸಕ್ಕರೆಯ ಪ್ರಮಾಣ ಕಡಿಮೆ ಇರುವುದರಿಂದ ಮಧುಮೇಹಿಗಳಿಗೆ ಇದು ಅತ್ಯುತ್ತಮ ಆಹಾರ ಪದಾರ್ಥಗಳಾಗುವುದು. ಕಳಲೆಯಲ್ಲಿ ನ್ಯೂಟ್ರಾಸ್ಯುಟಿಕಲ್ ಎಂದು ಕರೆಯಲ್ಪಡುವ ದೊಡ್ಡ ನಾರಿನಂಶ ಅಧಿಕವಾಗಿರುತ್ತದೆ. ಇದು ಕರುಳಿನ ಸಮಸ್ಯೆ ನಿಭಾಯಿಸಲು ಸಹಾಯ ಮಾಡುವುದು.
“ಕ್ಯಾನ್ಸರ್ ತಡೆಗೆ ಔಷಧಿ:”
ಇತ್ತೀಚೆಗೆ ನಡೆಸಿದ ಕೆಲವು ಅಧ್ಯಯನಗಳ ಪ್ರಕಾರ ಬಿದುರಿನ ಚಿಗುರು ಅಥವಾ ಕಳಲೆಯಲ್ಲಿ ಫಿನಾಲಿಕ್ ಎನ್ನುವ ಸಂಯುಕ್ತಗಳಿವೆ. ಇದು ಉತ್ಕರ್ಷಣ ನಿರೋಧಕವು ಸ್ವತಂತ್ರ ರಾಡಿಕಲ್ಸ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಜೊತೆಗೆ ಕ್ಯಾನ್ಸರ್ ನ ವಿರುದ್ಧ ಹೋರಾಡುತ್ತದೆ. ಪ್ರತಿಜೀವಕ ಮತ್ತು ಆಂಟಿ ವೈರಲ್ ಗುಣಲಕ್ಷಣಗಳನ್ನು ಒಳಗೊಂಡಿರುವುದರಿಂದ ಕ್ಯಾನ್ಸರ್ನಂತಹ ಕಣಗಳನ್ನು ನಾಶಮಾಡುವ ಶಕ್ತಿಯನ್ನು ಕೊಂದಿದೆ. ಇದು ದೇಹಕ್ಕೆ ಅಗತ್ಯವಾದ ವಿಟಮಿನ್ ಎ, ವಿಟಮಿನ್ ಇ, ವಿಟಮಿನ್ ಬಿ6, ಥಯಾಮಿನ್, ರಿಬೋಫ್ಲಾಮಿನ್, ಕ್ಯಾಲ್ಸಿಯಂ, ಮೆಗ್ನಿಸಿಯಮನ್ನು ಒಳಗೊಂಡಿದೆ. ಇದನ್ನು ನಿತ್ಯದ ಆಹಾರದಲ್ಲಿ ಸೇರಿಸಿಕೊಂಡರೆ ಮಾರಣಾಂತಿಕ ಕಾಯಿಲೆಯಿಂದ ದೂರ ಉಳಿಯಬಹುದು.
“ಹೃದಯದ ಆರೋಗ್ಯಕ್ಕೆ ಉತ್ತಮ:”
ಪ್ರತಿ 100 ಗ್ರಾಂ ಕಳಲೆಯಲ್ಲಿ 20 ಗ್ರಾಂ ನಷ್ಟು ಕ್ಯಾಲೋರಿ ಇರುತ್ತದೆ. ಕಾರ್ಬೋಹೈಡ್ರೇಟ್ ಪ್ರಮಾಣವು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಇರುತ್ತದೆ. 100 ಗ್ರಾಂ. ಬಿದುರಿನ ಚಿಗುರಲ್ಲಿ ಕೇವಲ 3 ರಿಂದ 4 ಗ್ರಾಂ ನಷ್ಟು ಕಾರ್ಬೋ ಹೈಡ್ರೇಟ್ ಇರುತ್ತವೆ. ಇದು ಹೃದಯ ಸಮಸ್ಯೆ ಇರುವವರಿಗೆ ಅತ್ಯುತ್ತಮವಾದ ಆಹಾರ ಆಗಿದೆ. ಕೆಟ್ಟ ಕೊಲೆಸ್ಟ್ರಾಲ್ ವಿರುದ್ಧ ಹೋರಾಡುವುದರ ಜೊತೆಗೆ ರಕ್ತದ ಸ್ಥಿತಿ ಸಮತೋಲನದಲ್ಲಿ ಇರುವಂತೆ ಮಾಡುತ್ತದೆ. ಹೃದಯಕ್ಕೆ ಸಂಬಂಧಿಸಿದಂತೆ ಅನೇಕ ಆರೋಗ್ಯ ಸಮಸ್ಯೆಗಳನ್ನು ತಡೆಯುವುದು. ಹಾಗಾಗಿ ಹೃದಯ ರೋಗಿಗಳಿಗೆ ಕಳಲೆಯನ್ನು ಸೇವಿಸಲು ವೈದ್ಯರು ಸಲಹೆ ನೀಡುತ್ತಾರೆ.
“ರೋಗನಿರೋಧಕ ಶಕ್ತಿ ಹೆಚ್ಚಳಕ್ಕೆ ಉತ್ತಮ:”
ಜೀವಸತ್ವಗಳು ಮತ್ತು ಖನಿಜಗಳು ಬಿದಿರಿನ ಚಿಗುರಲ್ಲಿ ಹೇರಳವಾಗಿವೆ. ಇವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ವೈರಸ್, ಬ್ಯಾಕ್ಟೀರಿಯಾ ಮತ್ತು ಸೋಂಕುಗಳು ತಗುಲದಂತೆ ರಕ್ಷಣೆ ನೀಡುತ್ತದೆ. ಹಾಗಾಗಿ ಮಳೆಗಾಲ ಮತ್ತು ಚಳಿಗಾಲದ ಸಮಯದಲ್ಲಿ ಇದನ್ನು ತಪ್ಪದೇ ಸೇವಿಸಬೇಕು ಎಂದು ಸಲಹೆ ನೀಡಲಾಗುವುದು. ಇದರಲ್ಲಿರುವ ಆರೋಗ್ಯಕರ ಘಟಕಗಳು ಮೆದುಳಿನ ತೀಕ್ಷ್ಣವಾದ ಕಾರ್ಯನಿರ್ವಹಣೆಗೆ ಸಹಕಾರಿಯಾಗುತ್ತದೆ. ಅಲ್ಲದೆ ನ್ಯೂರೋ ಡೆಜೆನೆರೆಟಿವ್ ಕಾಯಿಲೆಗಳ ಅಪಾಯವನ್ನು ತಡೆಯುತ್ತದೆ.
“ವಿಷತೆಗೆಯಲು ಸಹಾಯ:”
ಹಾವು, ಚೇಳುಗಳಂತಹ ವಿಷಕಾರಿ ಜೀವಿಗಳು ಕಚ್ಚಿದ ಸಂದರ್ಭದಲ್ಲಿ ಇದರ ರಸವನ್ನು ಕುಡಿಸಿ ವಿಷವನ್ನು ಹೊರ ತೆಗೆಯಲಾಗುತ್ತದೆ. ಇದು ದೇಹದಲ್ಲಿ ಇರುವ ನಂಜು ಹಾಗೂ ಸೋಂಕನ್ನು ತೆಗೆದಯಲು ಸಹಾಯಮಾಡುತ್ತದೆ.
“ಗರ್ಭಕೋಶದ ಆರೋಗ್ಯಕ್ಕೆ ಸಹಕಾರಿ:”
ಬಿದಿರಿನ ಚಿಗುರು ಗರ್ಭಕೋಶದ ಆರೋಗ್ಯವನ್ನು ಕಾಪಾಡುತ್ತದೆ. ಇದು ಗರ್ಭಾಶಯದ ಸಂಕೋಚವನ್ನು ಉತ್ತೇಜಿಸಿ ನೈಸರ್ಗಿಕವಾಗಿ ಹೆರಿಗೆ ಆಗಲು ಸಹಾಯ ಮಾಡುತ್ತದೆ. ಪ್ರಾಚೀನ ಸಾಂಪ್ರದಾಯಿಕ ಔಷಧ ಪದ್ಧತಿಯಲ್ಲಿ ಇದನ್ನು ಬಳಸುತ್ತಿದ್ದು, ಗರ್ಭಾವಸ್ಥೆಯಲ್ಲಿ ಇರುವವರಿಗೆ ಹೆರಿಗೆಗೆ ಅನುಕೂಲವಾಗಲು ಕಳಲೆಯ ಆಹಾರ ಪದಾರ್ಥಗಳನ್ನು ಸಣ್ಣ ಪ್ರಮಾಣದಲ್ಲಿ ಸೇವಿಸಲು ಶಿಫಾರಸ್ಸು ಮಾಡಲಾಗುತ್ತದೆ.
“ಶ್ವಾಸಕೋಶದ ಆರೋಗ್ಯಕ್ಕೆ ಉತ್ತಮ”
ಶ್ವಾಸಕೋಶಗಳನ್ನು ಬಲಪಡಿಸಲು ಕಳಲೆ ಅತ್ಯುತ್ತಮವಾದ ಆಹಾರ. ಶ್ವಾಸಕೋಶದಲ್ಲಿ ಕಫವನ್ನು ಹೊರಹಾಕಲು ಕಳಲೆಯನ್ನು ಬಳಸಬಹುದು. ತೊಳೆದ ಬಿದಿರಿನ ಚಿಗುರನ್ನು ನೀರಿನಲ್ಲಿ ಕುದಿಸಿ. ತಣ್ಣಗಾದ ಬಳಿಕ ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸಿ. ದಿನದಲ್ಲಿ ಎರಡು ಬಾರಿ ಇದನ್ನು ಸೇವಿಸುವುದರಿಂದ ಉಸಿರಾಟದ ತೊಂದರೆ ಹಾಗೂ ಕಫದ ಸಮಸ್ಯೆ ಬಹುಬೇಗ ನಿವಾರಣೆಯಾಗುತ್ತದೆ.


-ಸಂಗೀತ ಆರ್.



















