ಧಾರವಾಡ : ದಿವ್ಯಾಂಗರಾಗಿದ್ದರೂ ಸಹ ಉಪನ್ಯಾಸಕ ಎಚ್.ಪಿ. ಕಡ್ಲಿಮಟ್ಟಿ ಅವರು ಜಿಲ್ಲೆಯ ಶೈಕ್ಷಣಿಕ ಪ್ರಗತಿಗೆ ತಮ್ಮ ವಿಚಾರಗಳನ್ನು ಹಂಚಿಕೊಂಡು ಶ್ರಮಿಸಿದ್ದರು ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪಪ್ರಚಾರ್ಯ ಜೆ.ಜಿ. ಸೈಯ್ಯದ್ ಹೇಳಿದರು.
ಅವರು ವಯೋನಿವೃತ್ತಿ ಹೊಂದಿದ ಡಯಟ್ ಉಪನ್ಯಾಸಕ ಎಚ್.ಪಿ. ಕಡ್ಲಿಮಟ್ಟಿ ಅವರ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡುತ್ತಿದ್ದರು. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಅನುಭವ ಹೊಂದಿದ್ದ ಕಡ್ಲಿಮಟ್ಟಿ ಅವರು ಆದಾಯ ತೆರಿಗೆ ಲೆಕ್ಕಿಸುವ ಸಾಪ್ಟವೇರ್ ಸಿದ್ದಪಡಿಸಿ ರಾಜ್ಯ ಸರ್ಕಾರಿ ನೌಕರರಿಗೆ ಅನುಕೂಲಕಲ್ಪಸಿದ್ದರು ಎಂದರು.
ಕರ್ನಾಟಕ ರಾಜ್ಯ ಸಾವಿತ್ರಬಾಯಿ ಫುಲೆ ಶಿಕ್ಷಕಿಯರ ಸಂಘದ ಸಂಸ್ಥಾಪಕಿ ಲತಾ ಮುಳ್ಳೂರ ಮಾತನಾಡಿ, ಕರುನಾಡು ದಿವ್ಯಾಂಗ ನೌಕರರ ಸಂಘವನ್ನು ಹುಟ್ಟುಹಾಕಿ ಆ ಮೂಲಕ ವಿಕಚೇತನ ನೌಕರರ ದ್ವನಿಯಾಗಿ ಅವರಿಗೆ ಸಿಗಬೇಕಾದ ಸೌಲಭ್ಯಗಳಿಗೆ ನಾಯಕತ್ವವಹಿಸಿ ಹೋರಾಟದ ಮೂಲಕ ಯಶಸ್ಸು ಸಾಧಿಸಿದ್ದಾರೆ ಎಂದರು.

ಸಮಾರಂಭದಲ್ಲಿ ಮಾತನಾಡಿದ ಡಯಟ್ ಹಿರಿಯ ಉಪನ್ಯಾಸಕರುಗಳಾದ ಅರ್ಜುನ ಕಂಬೋಗಿ, ಎ.ಎ. ಖಾಜಿ ಹಾಗೂ ದೀಪಕ ಕುಲಕರ್ಣಿ ಅವರು ಕಡ್ಲಿಮಟ್ಟಿ ಅವರ ಬಹುಮುಖ ಸೇವೆಯನ್ನು ಸ್ಮರಿಸಿದರು.
ಬೀಳ್ಕೊಡುಗೆ ಸ್ವೀಕರಿಸಿದ ಎಚ್.ಪಿ.ಕಡ್ಲಿಮಟ್ಟಿ ಮಾತನಾಡಿ ಅಖಂಡ 35 ವರ್ಷಗಳ ಶಿಕ್ಷಣ ಇಲಾಖೆಯ ಸೇವೆ ತಮಗೆ ಎಲ್ಲಾ ನೆಲೆಗಳಲ್ಲಿ ತೃಪ್ತಿ ತಂದಿದೆ. ‘ಧಾರವಾಡ ಜಿಲ್ಲೆಯ ಸಮೂಹ ಸಂಪನ್ಮೂಲ ಕೇಂದ್ರಗಳ ವಸ್ತುಸ್ಥಿತಿ ಅಧ್ಯಯನʼ ಎಂಬ ವಿಷಯವಾಗಿ ನಾನು ಸಿದ್ಧಪಡಿಸಿದ್ದ ಅಧ್ಯಯನ ವರದಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿತ್ತು. ನನಗೆ ಪ್ರಾಪ್ತವಾದ ವಿಭಿನ್ನ ಪ್ರಶಸ್ತಿ-ಪುರಸ್ಕಾರಗಳಿಂದಾಗಿ ನಾನು ದಿವ್ಯಾಂಗ ಎಂದು ಭಾವಿಸದೇ ಸೇವೆಗೈದಿದ್ದೇನೆ ಎಂದರು.
ರಾಜೇಶ್ವರಿ ಮ್ಯಾಗೇರಿ ಸ್ವಾಗತಿಸಿದರು. ರಮೇಶ ಯರಳಿ ಹಾಗೂ ಕುಮಾರ ಹುಲಗೂರ ನಿರೂಪಿಸಿದರು. ಹೇಮಾ ಅಮ್ಮಿನಬಾವಿ ವಂದಿಸಿದರು. ಆನಂದ ಪವಾರ ವಿವಿಧ ಗೀತೆಗಳನ್ನು ಪ್ರಸ್ತುತಪಡಿಸಿದರು. ನಿವೃತ್ತಿ ಬೀಳ್ಕೊಡುಗೆಯ ಅಂಗವಾಗಿ ಎಚ್.ಪಿ.ಕಡ್ಲಿಮಟ್ಟಿ ದಂಪತಿಗಳನ್ನು ಡಯಟ್ ವತಿಯಿಂದ ಗೌರವಿಸಲಾಯಿತು. ನಂತರ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಗೌರವಿಸಿ ಅಭಿನಂದಿಸಿದರು.