ಮಂಡ್ಯ: ಸರ್ಕಾರದಿಂದ KRS ಬೃಂದಾವನದ ಪ್ರವೇಶ ದರ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ದ ಜೆಡಿಎಸ್ ಪಕ್ಷ ತಿರುಗಿ ಬಿದ್ದಿದೆ.

ಸಾಮಾಜಿಕ ಜಾಲತಾಣದಲ್ಲಿ ದರಾಸುರಾ ಸರ್ಕಾರ ಎಂದು ಪೋಸ್ಟ್ ಹಾಕಿ ಜೆಡಿಎಸ್ ನಾಯಕರು ಆಕ್ರೋಶ ಹೊರ ಹಾಕಿದ್ದಾರೆ. K.R.S ಬೃಂದಾವನದ ಪ್ರವೇಶ, ಟೋಲ್ ಸೇರಿ ಪಾರ್ಕಿಂಗ್ ದರ ಏರಿಸಿ ಈ ಸರ್ಕಾರ ಪ್ರವಾಸಿಗರ ಬಳಿ ಸುಲಿಗೆಗೆ ಯತ್ನಿಸುತ್ತಿದೆ ಎಂದು ಕಿಡಿಕಾರಿದ್ದಾರೆ.
ಕೆ.ಆರ್.ಪೇಟೆ ಜೆಡಿಎಸ್ ಶಾಸಕ ಮಂಜು ಮಾತನಾಡಿ, ಈ ಸರ್ಕಾರಕ್ಕೆ ಬರುತ್ತಿರುವ ತೆರಿಗೆ ಹಣ ಲೂಟಿ ಆಗುತ್ತಿದೆ. ಇದರಲ್ಲಿ ಹಗರಣ ನಡೆಯುತ್ತಿರುವುದಾಗಿ ಗಂಭಿರ ಆರೋಪ ಮಾಡಿದ್ದಾರೆ. ಇಲ್ಲಿನ ತೆರಿಗೆ ಹಣವನ್ನು ಬೇರೆ ರಾಜ್ಯಗಳ ಚುನಾವಣೆಗೆ ಈ ಸರ್ಕಾರ ಬಳಕೆ ಮಾಡುತ್ತಿದೆ. ಈಗಾಗಲೇ ಹಲವು ಮಾಧ್ಯಮಗಳಲ್ಲಿ ಇದು ಸಾಬೀತಾಗಿದೆ ಎಂದು ಆರೋಪಿಸಿದ್ದಾರೆ.

ಈ ಸರ್ಕಾರ ಗ್ಯಾರಂಟಿ ಯೋಜನೆಗಳಿಂದ ಲಾಭ ಪಡೆದಿದ್ದರೂ ಕೋಟಿ ಕೋಟಿ ಸಾಲ ಮಾಡುತ್ತಿದೆ. ಇದರ ಜೊತೆಗೆ ಅಬಕಾರಿ, ನೊಂದಣಿ, ಸೇರಿ ಹಲವು ಇಲಾಖೆಯಲ್ಲಿ ದರ ಏರಿಸಿ ತೆರಿಗೆ ಹೆಚ್ಚಸಿಕೊಂಡಿದೆ. ಆ ತೆರಿಗೆ ಆದಾಯ ಎಲ್ಲಿ ಸೋರಿಕೆಯಾಗುತ್ತಿದೆ? ಇದರಲ್ಲಿ ದೊಡ್ಡ ಹಗರಣ ನಡೆದಿದೆ. ಆದ್ದರಿಂದ ಆದಷ್ಟು ಬೇಗ ಇದನ್ನು ತನಿಖೆಗೆ ಒಳಪಡಿಸಬೇಕು ಎಂದು ಕೆ.ಆರ್.ಪೇಟೆ ಜೆಡಿಎಸ್ ಶಾಸಕ ಆಗ್ರಹಿಸಿದ್ದಾರೆ.