ರಾಮನಗರ: ಜೆಡಿಎಸ್ ಹಾಗೂ ರಾಮನಗರದ ಮಧ್ಯೆ ನಂಟು ಹೆಚ್ಚಾಗಿತ್ತು. ಹೀಗಾಗಿ ಕಳೆದ ಸುಮಾರು ಹಲವು ವರ್ಷಗಳಿಂದಲೂ ಜೆಡಿಎಸ್ ಈ ಜಿಲ್ಲೆಯಲ್ಲಿ ನೆಲೆಯೂರಿತ್ತು. ಆದರೆ, ಈಗ ಕಾಂಗ್ರೆಸ್ ಪಕ್ಷವು ಜೆಡಿಎಸ್ ನ್ನು ಆಲ್ ಔಟ್ ಮಾಡಿ, ಜಿಲ್ಲೆಯಿಂದ ಹೊರ ಹಾಕಿದೆ.
2023ರ ವಿಧಾನಸಭಾ ಚುನಾವಣೆಯಲ್ಲಿ ಠೇವಣಿ ಕಳೆದುಕೊಂಡಿದ್ದ ಕಾಂಗ್ರೆಸ್ ವರ್ಷಗಳ ಅಂತರದಲ್ಲಿಯೇ ಭರ್ಜರಿ ಗೆಲುವು ಸಾಧಿಸಿ, ಎಲ್ಲ ಕ್ಷೇತ್ರಗಳನ್ನೂ ತನ್ನ ತೆಕ್ಕೆಗೆ ಬೀಳಿಸಿಕೊಂಡಿದೆ. ದಳಪತಿಯ ಕೋಟೆಯಲ್ಲಿ ಕೈ ಬಲಿಷ್ಠಾಗುವ ಮೂಲಕ ತನ್ನ ಅಸ್ತಿತ್ವ ಉಳಿಸಿಕೊಂಡಿದೆ.
ಹಿಂದಿನ ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಹಿಡಿದು ಇಂದಿನ ರಾಮನಗರ ಜಿಲ್ಲೆವರೆಗೂ ಸುಮಾರು 4 ದಶಕಗಳಿಗೂ ಹೆಚ್ಚು ಕಾಲ ಜೆಡಿಎಸ್ ಇಲ್ಲಿ ಅಸ್ತಿತ್ವ ಉಳಿಸಿಕೊಂಡಿತ್ತು. ಆದರೆ, ಡಿಕೆ ಬ್ರದರ್ಸ್ ಈಗ ಜೆಡಿಎಸ್ ನ್ನು ಆಲ್ ಔಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
1994 ರಲ್ಲಿ ದೇವೇಗೌಡರು ರಾಮನಗರದಿಂದ ಸ್ಪರ್ಧಿಸಿ ಗೆಲುವು ಸಾಧಿಸುವುದರ ಮೂಲಕ ಸಿಎಂ ಆಗಿದ್ದರು. ನಂತರ 1999ರಲ್ಲಿ ಕುಮಾರಸ್ವಾಮಿ ಕನಕಪುರ ಲೋಕಸಭೆ ಮತ್ತು ಸಾತನೂರು ವಿಧಾನಸಭಾ ಕ್ಷೇತ್ರದಲ್ಲಿ ಸೋಲು ಕಂಡಿದ್ದರು. ಅಲ್ಲದೇ, 2002ರ ಕನಕಪುರ ಲೋಕಸಭಾ ಉಪಚುನಾವಣೆಯಲ್ಲಿ ಗೆಲ್ಲುವ ಮೂಲಕ ಮತ್ತೆ ಜಿಲ್ಲೆಯಲ್ಲಿ ಹಿಡಿತ ಸಾಧಿಸಿದರು. ಈಗ ಮತ್ತೆ ಜೆಡಿಎಸ್ ನ ಹಿಡಿತ ತಪ್ಪಿದಂತಾಗಿದೆ.
2018ರಲ್ಲಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಪೈಕಿ ಮೂರರಲ್ಲಿ ಜೆಡಿಎಸ್ ಗೆಲುವು ಸಾಧಿಸಿತ್ತು. 2023ರ ವಿಧಾನಸಭಾ ಚುನಾವಣೆಯಲ್ಲಿ ಮೂರು ಕ್ಷೇತ್ರಗಳನ್ನು ಕಳೆದುಕೊಂಡು, ಚನ್ನಪಟ್ಟಣದಲ್ಲಿ ಮಾತ್ರವೇ ಎಚ್.ಡಿ.ಕುಮಾರಸ್ವಾಮಿ ಶಾಸಕರಾಗಿ ಉಳಿದಿದ್ದರು. ಆದರೆ, ಈಗ ಉಪ ಚುನಾವಣೆಯಲ್ಲಿ ಆ ಕ್ಷೇತ್ರವನ್ನು ಕೂಡ ಕಳೆದುಕೊಳ್ಳುವಂತಾಗಿದೆ. ಹಲವಾರು ವರ್ಷಗಳಿಂದ ಜಿಲ್ಲೆಯ ನಂಟು ಹೊಂದಿದ್ದು ಕುಮಾರಸ್ವಾಮಿ ಈಗ ಮಂಡ್ಯದ ಸಂಸದರು. ಹೀಗಾಗಿ ರಾಮನಗರ ಜಿಲ್ಲೆಯಲ್ಲಿ ಜೆಡಿಎಸ್ ನ ಅಸ್ತಿತ್ವ ಇಲ್ಲದಂತಾಗಿದೆ.