ಉಡಪಿ : ಉಡುಪಿ ಶ್ರೀಕೃಷ್ಣ ಮಠದಲ್ಲಿ ಈ ಬಾರಿ ಎರಡೆರಡು ಅಷ್ಟಮಿ ಆಚರಿಸಲಾಗುತ್ತಿದೆಯಂತೆ. ದೇಶಾದ್ಯಂತ ಇಂದು (ಆ. 16,ಶನಿವಾರ) ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ನಡೆಯುತ್ತಿದ್ದರೆ, ಉಡುಪಿಯ ಅಷ್ಟಮಿ ಹಾಗೂ ವಿಟ್ಲಪಿಂಡಿ ಸೆಪ್ಟೆಂಬರ್ 14, 15ರಂದು ನಡೆಯಲಿದೆ.
ಉಡುಪಿಯ ಶ್ರೀಕೃಷ್ಣ ಮಠದ ಜನ್ಮಾಷ್ಟಮಿ ದೇಶದಲ್ಲೇ ಪ್ರಸಿದ್ಧ. ಆದರೆ ಈ ಬಾರಿ ಉಡುಪಿಯಲ್ಲಿ ಪ್ರತ್ಯೇಕವಾಗಿ ಅಷ್ಟಮಿ ಆಚರಣೆ ನಡೆಯಲಿದೆ. ಇದೊಂದು ಅಪರೂಪದ ಸಂಪ್ರದಾಯ.
ದೇಶದ ಬೇರೆ ಬೇರೆ ಕಡೆಗಳಲ್ಲಿ ಚಾಂದ್ರಮಾನ ಪದ್ಧತಿಯಂತೆ ಕೃಷ್ಣಾಷ್ಟಮಿ ಹಬ್ಬವನ್ನು ಆಚರಿಸಿದರೆ, ಉಡುಪಿಯಲ್ಲಿ ಸೌರಮಾನ ಪದ್ಧತಿಯಂತೆ ಕೃಷ್ಣಾಷ್ಟಮಿ ಆಚರಣೆ ಮಾಡಲಾಗುತ್ತದೆ. ಇದೇ ಕಾರಣಕ್ಕೆ ಈ ಭಿನ್ನತೆ ಕಾಣಬಹುದಾಗಿದೆ. ಹುಣ್ಣಿಮೆ-ಅಮಾವಾಸ್ಯೆಯ ಹಾಗೂ ರೋಹಿಣಿ ನಕ್ಷತ್ರದ ಆಧಾರದ ಗಣನೆಯಲ್ಲಿ ಇತರ ಆಚರಣೆ ನಡೆಯುತ್ತಿದ್ದರೆ, ತುಳುನಾಡ ಕರಾವಳಿಯಲ್ಲಿ ಸಂಕ್ರಮಣ ವಿಶೇಷ.
ಆದರೆ, ಚಾಂದ್ರಮಾನ ಪದ್ಧತಿಯಂತೆ ಹಬ್ಬ ಆಚರಿಸುವವರಿಗೂ ಕೃಷ್ಣಮಠ ಅವಕಾಶ ಕಲ್ಪಿಸಿದೆ. ಸಾಂಕೇತಿಕವಾಗಿ ಇಂದು ಕೂಡ ಅರ್ಗ್ಯ ಪ್ರಧಾನ ಹಾಗೂ ಇತರ ಆಚರಣೆಗಳು ನಡೆಯಲಿವೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಮಠದ ದಿವಾನರಾದ ಪ್ರಸನ್ನ ಆಚಾರ್ಯ ಅವರು, ಈ ಬಾರಿ ನಾವು ಚಂದ್ರ ಕೃಷ್ಣ ಜನ್ಮಾಷ್ಟಮಿ ಮತ್ತ ಸೌರಕೃಷ್ಣ ಜನ್ಮಾಷ್ಟಮಿಯನ್ನು ಅಂತ ಎರಡು ಪದ್ಧತಿಗಳಲ್ಲಿ ಈ ಬಾರಿ ಕೃಷ್ಣಜನ್ಮಾಷ್ಟಮಿಯನ್ನು ಆಚರಣೆ ಮಾಡುತ್ತಿದ್ದೇವೆ. ಇದು ಎರಡ್ಮೂರು ವರ್ಷಗಳಿಗೆ ಒಮ್ಮೆ ಬರುವ ವಿಶೇಷ ಸಂಗತಿಯಾಗಿದೆ. ಉಡುಪಿ ಮತ್ತು ಕರಾವಳಿ ಭಾಗದ ಎಲ್ಲಾ ಹಬ್ಬ ಹರಿದಿನಗಳು ಸೌರ ಕೃಷ್ಣಜನ್ಮಾಷ್ಟಮಿ ರೀತಿಯಲ್ಲಿ ಸಾಮಾನ್ಯವಾಗಿ ನಡೆಯುತ್ತವೆ ಎಂದು ತಿಳಿಸಿದ್ದಾರೆ.



















