ಬಳ್ಳಾರಿ: ಶಾಸಕ ಜನಾರ್ಧನ ರೆಡ್ಡಿ ಇಂದು ಬಳ್ಳಾರಿ ಪ್ರವೇಶಿಸಿದ್ದಾರೆ. ಆದರೆ, ಈ ವೇಳೆ ಸಿಎಂ ಸಿದ್ದರಾಮಯ್ಯ ವಿರುದ್ಧ ಗಂಭೀರ ಆರೋಪ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಗೆ ಪ್ರವೇಶ ಮಾಡುತ್ತಿದ್ದಂತೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ 5 ಸಾವಿರ ಕೋಟಿ ರೂ. ಬೇನಾಮಿ ಆಸ್ತಿಯ ಆರೋಪ ಮಾಡಿದ್ದಾರೆ. ಸಿದ್ದರಾಮಯ್ಯ 5 ಸಾವಿರ ಕೋಟಿ ರೂ. ಬೇನಾಮಿ ಆಸ್ತಿ ಮಾಡಿದ್ದಾರೆ. ಸಿದ್ದರಾಮಯ್ಯ ಅವರ ಕುಟುಂಬಸ್ಥರು, ಸಂಬಂಧಿಕರ ಮೂಲಕ ಐದು ಸಾವಿರ ಕೋಟಿ ರೂ. ಆಸ್ತಿ ಬೇನಾಮಿ ಮಾಡಿದ್ದಾರೆ. ಇದರ ತನಿಖೆಯಾಗಲಿ ಎಂದು ಆರೋಪಿಸಿದ್ದಾರೆ.
ಹಿಂದೆ ಮಾಡಿರುವುದನ್ನು ಈಗ ಸಿದ್ದರಾಮಯ್ಯ ಅನುಭವಿಸುತ್ತಿದ್ದಾರೆ. ಮುಡಾ ಪ್ರಕರಣದಲ್ಲಿ ಕೇವಲ ಹದಿನಾಲ್ಕು ಸೈಟು, 62 ಕೋಟಿ ವಿಚಾರ ಅಲ್ಲ. ಇನ್ನೂ ಹೆಚ್ಚಿನ ಆಸ್ತಿ ಮಾಡಿದ್ದಾರೆ. ಅಡ್ವಾಣಿ ಹಾಗೂ ಯಡಿಯೂರಪ್ಪ ಅವರು ರಾಜೀನಾಮೆ ಹೇಳುತ್ತಿದ್ದಂತೆ ನಾವೆಲ್ಲ ರಾಜೀನಾಮೆ ನೀಡಿದೇವು. ಸರ್ಕಾರವನ್ನೇ ವಿಸರ್ಜನೆ ಮಾಡಿದ್ದೆವು. ಈಗ ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ಮುಳುಗಿದೆ. ಆದರೂ ರಾಜೀನಾಮೆ ನೀಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಬಳ್ಳಾರಿಯಿಂದ ದೂರ ಇದ್ದು ನೋವು ಅನುಭವಿಸಿದ್ದೇನೆ. ಇವತ್ತು ನನ್ನ ಹುಟ್ಟೂರಿಗೆ ಮರಳಿದೆ ಎನ್ನುವ ಖುಷಿ ಇದೆ. ಬಳ್ಳಾರಿಗೆ ಹೋಗಿ ಜನಸೇವೆ ಮಾಡಬೇಕೆಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದೆ. ಸುಳ್ಳು ಆರೋಪ ಮಾಡಿ ನನ್ನ ತುಳಿಯುವ ಕೆಲಸ ಮಾಡಿದರು. ಬಳ್ಳಾರಿಯನ್ನು ಅಭಿವೃದ್ಧಿ ಮಾಡುವುದು ನನ್ನ ಕೆಲಸ ಎಂದಿದ್ದಾರೆ.
ಶ್ರೀರಾಮುಲು, ಸೋಮಶೇಖರ್ ರೆಡ್ಡಿ ಹಾಗೂ ನನ್ನ ಮಧ್ಯೆ ಯಾವುದೇ ಸಮಸ್ಯೆ ಇಲ್ಲ. ನಾನೇ ಅವರಿಗೆ ಬರಬಾರದು ಎಂದಿದ್ದೇನೆ ಎಂದು ಹೇಳಿದ್ದಾರೆ.