ಚಿತ್ರದುರ್ಗ: ಚಿತ್ರದುರ್ಗ ಜೈಲರ್ ಗೆ ಗಾಂಜಾ ಕೇಸ್ ವಿಚಾರಣಾಧೀನ ಕೈದಿಗಳು ಬೆದರಿಕೆ ಹಾಕಿರುವ ಘಟನೆ ನಡೆದಿದೆ.
ವಾಟ್ಸಾಪ್ ಮೂಲಕ ಗನ್ ಫೋಟೋ ಕಳುಹಿಸಿ ಜೈಲರ್ ಗೆ ಬೆದರಿಕೆ ಹಾಕಿದ್ದಾರೆ. ಜೈಲಿನಲ್ಲಿ ಗಾಂಜಾ ಸಪ್ಲೈಗೆ ಬ್ರೇಕ್ ಹಾಕಿ, ವಾರ್ನ್ ಮಾಡಿದ್ದಕ್ಕೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಈ ಕುರಿತು ಜೈಲರ್ ಸಿದ್ದರಾಮ ಪಾಟೀಲ್, ಚಿತ್ರದುರ್ಗ ಎಸ್ಪಿ ರಂಜಿತ್ ಬಂಡಾರುಗೆ ದೂರು ಸಲ್ಲಿಸಿದ್ದಾರೆ. ಜೈಲರ್ ದೂರು ಆಧರಿಸಿ, ಎಸ್ಪಿ ರಂಜಿತ್ ಕುಮಾರ್ ಬಂಡಾರು ನೇತೃತ್ವದಲ್ಲಿ ಜೈಲಿನ ಮೇಲೆ ದಾಳಿ ನಡೆದಿದೆ.
50ಕ್ಕೂ ಅಧಿಕ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ದಾಳಿ ನಡೆಸಿದ್ದಾರೆ. ಆ ವೇಳೆ ವಿಚಾರಣಾಧೀನ ಕೈದಿಗಳ ಬಳಿ ಇದ್ದ 3 ಮೊಬೈಲ್, 65 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ.
ಶಾಹಿದ್ ಖುರೇಶಿ ಎಂಬ ಕೈದಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಶಾಹಿದ್ ಖುರೇಶಿ, ಅಬಿದ್ ಖಾನ್ ಹಾಗೂ ಶಮು ಎಂಬ ಆರೋಪಿಗಳಿಂದ ಗಾಂಜಾ ಹಾಗೂ ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಜೈಲು ರೇಡ್ ವೇಳೆ ಓರ್ವ ಪೊಲೀಸ್ ಪೇದೆ, ನಾಲ್ವರು ಜೈಲು ಸಿಬ್ಬಂದಿಗಳ ಮೇಲೆ ಆರೋಪಿಗಳು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದ್ದು, ಸದ್ಯ ಆರೋಪಿಗಳ ವಿರುದ್ಧ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.