ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಪ್ರಮುಖ ಸ್ಪಿನ್ ಆಲ್ರೌಂಡರ್ ಕೃಣಾಲ್ ಪಾಂಡ್ಯ ಅವರು ಇತ್ತೀಚೆಗೆ ಮೋಜಿನ ಸಂದರ್ಶನವೊಂದರಲ್ಲಿ ಪಾಲ್ಗೊಂಡು ವಿಶ್ವದ ಅತ್ಯುತ್ತಮ ಫೀಲ್ಡರ್ ಯಾರು ಎಂಬ ಪ್ರಶ್ನೆಗೆ ಅತ್ಯಂತ ಕುತೂಹಲಕಾರಿ ಹಾಗೂ ತಮಾಷೆಯ ಉತ್ತರವನ್ನು ನೀಡಿದ್ದಾರೆ.
ರವೀಂದ್ರ ಜಡೇಜಾ ಹಾಗೂ ವಿರಾಟ್ ಕೊಹ್ಲಿಯಂತಹ ಭಾರತದ ಚುರುಕಾದ ಫೀಲ್ಡರ್ಗಳನ್ನು ಬದಿಗೊತ್ತಿರುವ ಕೃಣಾಲ್ ಪಾಂಡ್ಯ, ದಕ್ಷಿಣ ಆಫ್ರಿಕಾದ ದಂತಕಥೆ ಹಾಗೂ ನ್ಯೂಜಿಲೆಂಡ್ನ ಪ್ರಸ್ತುತ ಸ್ಟಾರ್ ಆಟಗಾರನ ಹೆಸರನ್ನು ಒಗ್ಗೂಡಿಸಿ ಹೊಸದೊಂದು ಹೆಸರನ್ನು ಸೃಷ್ಟಿಸುವ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಆರ್ಸಿಬಿ ಫ್ರಾಂಚೈಸಿಯು ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಕ್ಷಿಪ್ರ ಗತಿಯ ಪ್ರಶ್ನೋತ್ತರ (ರ್ಯಾಪಿಡ್-ಫೈರ್) ವಿಡಿಯೋದಲ್ಲಿ ಈ ವಿನೋದಮಯ ಘಟನೆ ನಡೆದಿದೆ.
ವಿಶ್ವ ಕ್ರಿಕೆಟ್ ಕಂಡ ಶ್ರೇಷ್ಠ ಫೀಲ್ಡರ್ಗಳ ನಡುವೆ ಒಬ್ಬರನ್ನು ಆಯ್ಕೆ ಮಾಡುವ ಸವಾಲನ್ನು ಕೃಣಾಲ್ ಪಾಂಡ್ಯ ಅವರಿಗೆ ನೀಡಲಾಗಿತ್ತು. ಆರಂಭದಲ್ಲಿ, ಭಾರತದ ಮಾಜಿ ಆಟಗಾರರಾದ ಸುರೇಶ್ ರೈನಾ ಮತ್ತು ಯುವರಾಜ್ ಸಿಂಗ್ ನಡುವಿನ ಆಯ್ಕೆಯಲ್ಲಿ ಪಾಂಡ್ಯ ಅವರು ಸುರೇಶ್ ರೈನಾ ಅವರನ್ನು ಆರಿಸಿದರು. ಮುಂದಿನ ಹಂತದಲ್ಲಿ, ಸುರೇಶ್ ರೈನಾ ಮತ್ತು ಮೊಹಮ್ಮದ್ ಕೈಫ್ ನಡುವೆ ಸ್ಪರ್ಧೆ ಏರ್ಪಟ್ಟಾಗ ಪಾಂಡ್ಯ ಕೈಫ್ ಅವರತ್ತ ಒಲವು ತೋರಿದರು. ತದನಂತರ ಮೊಹಮ್ಮದ್ ಕೈಫ್ ಮತ್ತು ಆಸ್ಟ್ರೇಲಿಯಾದ ದಿವಂಗತ ಆಟಗಾರ ಆಂಡ್ರ್ಯೂ ಸೈಮಂಡ್ಸ್ ನಡುವಿನ ಆಯ್ಕೆಯಲ್ಲಿ ಸೈಮಂಡ್ಸ್ ಅವರನ್ನು ಹೆಸರಿಸಿದರು. ಇದಾದ ಬಳಿಕ ಸೈಮಂಡ್ಸ್ ಮತ್ತು ದಕ್ಷಿಣ ಆಫ್ರಿಕಾದ ಫೀಲ್ಡಿಂಗ್ ದಂತಕಥೆ ಜಾಂಟಿ ರೋಡ್ಸ್ ನಡುವೆ ಜಾಂಟಿ ಅವರನ್ನು ಆಯ್ಕೆ ಮಾಡಿದರೆ, ಮುಂದಿನ ಸುತ್ತಿನಲ್ಲಿ ಜಾಂಟಿ ರೋಡ್ಸ್ ಮತ್ತು ಎಬಿ ಡಿವಿಲಿಯರ್ಸ್ ನಡುವೆಯೂ ಜಾಂಟಿ ರೋಡ್ಸ್ ಅವರನ್ನೇ ಕೃಣಾಲ್ ಪಾಂಡ್ಯ ಅತ್ಯುತ್ತಮ ಫೀಲ್ಡರ್ ಎಂದು ಪರಿಗಣಿಸಿದರು.
ರೋಚಕ ಉತ್ತರ
ಈ ಆಟದ ನಿಜವಾದ ರೋಚಕತೆ ಹಾಗೂ ತಮಾಷೆ ಶುರುವಾಗಿದ್ದು ಮುಂದಿನ ಸುತ್ತಿನಲ್ಲಿ. ದಕ್ಷಿಣ ಆಫ್ರಿಕಾದ ದಿಗ್ಗಜ ಜಾಂಟಿ ರೋಡ್ಸ್ ಹಾಗೂ ನ್ಯೂಜಿಲೆಂಡ್ ತಂಡದ ಪ್ರಸ್ತುತ ಚುರುಕಿನ ಫೀಲ್ಡರ್ ಗ್ಲೆನ್ ಫಿಲಿಪ್ಸ್ ನಡುವೆ ಒಬ್ಬರನ್ನು ಆಯ್ಕೆ ಮಾಡುವ ಕಠಿಣ ಸವಾಲು ಕೃಣಾಲ್ ಎದುರು ಎದುರಾಯಿತು. ಈ ಇಬ್ಬರು ಅದ್ಭುತ ಫೀಲ್ಡರ್ಗಳ ನಡುವೆ ಕೇವಲ ಒಬ್ಬರನ್ನು ಮಾತ್ರ ಆರಿಸಲು ವಿಫಲರಾದ ಕೃಣಾಲ್ ಪಾಂಡ್ಯ, ನಿಯಮಗಳನ್ನು ಬದಿಗೊತ್ತಿ ಮುಖದಲ್ಲಿ ನಗು ಬೀರತ್ತಾ ‘ಜಾಂಟಿ ಫಿಲಿಪ್ಸ್’ ಎಂದು ಉತ್ತರಿಸಿದರು. ಆಟದ ನಿಯಮದ ಪ್ರಕಾರ ಅವರು ಕೇವಲ ಒಂದು ಹೆಸರನ್ನು ಮಾತ್ರ ಹೇಳಬೇಕಿತ್ತು. ಆದರೆ, ಇಬ್ಬರ ಹೆಸರನ್ನು ವಿಲೀನಗೊಳಿಸಿ ‘ಜಾಂಟಿ ಫಿಲಿಪ್ಸ್’ ಎಂದು ಕರೆದ ಅವರ ನವೀನ ಹಾಗೂ ತಮಾಷೆಯ ಶೈಲಿಯು ಎಲ್ಲರ ಮುಖದಲ್ಲಿ ನಗು ತರಿಸಿತು. ಇದೇ ‘ಜಾಂಟಿ ಫಿಲಿಪ್ಸ್’ ಎಂಬ ಕಾಲ್ಪನಿಕ ಫೀಲ್ಡರ್ ಮುಂದಿನ ಸುತ್ತುಗಳಲ್ಲಿ ರವೀಂದ್ರ ಜಡೇಜಾ, ಗ್ಲೆನ್ ಮ್ಯಾಕ್ಸ್ವೆಲ್ ಮತ್ತು ಆರ್ಸಿಬಿ ತಂಡದ ಸಹ ಆಟಗಾರ ವಿರಾಟ್ ಕೊಹ್ಲಿ ಅವರನ್ನು ಸಹ ಸೋಲಿಸಿ ಕೃಣಾಲ್ ಪಾಂಡ್ಯ ಅವರ ಪಾಲಿನ ಶ್ರೇಷ್ಠ ಫೀಲ್ಡರ್ ಆಗಿ ಹೊರಹೊಮ್ಮಿದರು.
ಇದೇ ವೇಳೆ, ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಋತುವಿಗಾಗಿ ಕೃಣಾಲ್ ಪಾಂಡ್ಯ ಭರ್ಜರಿ ಸಿದ್ಧತೆ ನಡೆಸುತ್ತಿದ್ದಾರೆ. 2025 ಐಪಿಎಲ್ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೊಚ್ಚಲ ಬಾರಿಗೆ ಟ್ರೋಫಿ ಎತ್ತಿಹಿಡಿಯುವಲ್ಲಿ ೩೪ ವರ್ಷದ ಈ ಸ್ಪಿನ್ ಆಲ್ರೌಂಡರ್ ಪ್ರಮುಖ ಪಾತ್ರ ವಹಿಸಿದ್ದರು. ಆ ಆವೃತ್ತಿಯಲ್ಲಿ ಪಾಂಡ್ಯ 15 ಪಂದ್ಯಗಳಲ್ಲಿ 8.23ರ ಎಕಾನಮಿ ದರದಲ್ಲಿ 17 ವಿಕೆಟ್ಗಳನ್ನು ಕಬಳಿಸಿದರೆ, ಬ್ಯಾಟಿಂಗ್ನಲ್ಲಿ ಅಜೇಯ 73 ರನ್ಗಳ ಗರಿಷ್ಠ ಸ್ಕೋರ್ನೊಂದಿಗೆ 7 ಇನ್ನಿಂಗ್ಸ್ಗಳಲ್ಲಿ ಒಟ್ಟು 109 ರನ್ ಗಳಿಸಿದ್ದರು.
ವಿಶೇಷವಾಗಿ, ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ವಿರುದ್ಧ ನಡೆದ ೨೦೨೫ರ ಐಪಿಎಲ್ ಫೈನಲ್ ಪಂದ್ಯದಲ್ಲಿ ಕೃಣಾಲ್ ಪಾಂಡ್ಯ ಅವರ ಪ್ರದರ್ಶನ ನಿರ್ಣಾಯಕವಾಗಿತ್ತು. ಮೊದಲು ಬ್ಯಾಟ್ ಮಾಡಿದ ಆರ್ಸಿಬಿ, ವಿರಾಟ್ ಕೊಹ್ಲಿ ಅವರ ೩೫ ಎಸೆತಗಳಲ್ಲಿನ ೪೩ ರನ್ಗಳ ನೆರವಿನಿಂದ ೨೦ ಓವರ್ಗಳಲ್ಲಿ ೯ ವಿಕೆಟ್ ನಷ್ಟಕ್ಕೆ ೧೯೦ ರನ್ ಗಳಿಸಿತ್ತು. ಬೃಹತ್ ಗುರಿ ಬೆನ್ನತ್ತಿದ ಪಂಜಾಬ್ ಕಿಂಗ್ಸ್ ತಂಡವನ್ನು ಕಟ್ಟಿಹಾಕುವಲ್ಲಿ ಕೃಣಾಲ್ ಪಾಂಡ್ಯ ಅತ್ಯದ್ಭುತ ಬೌಲಿಂಗ್ ಪ್ರದರ್ಶಿಸಿದರು. ತಮ್ಮ ನಾಲ್ಕು ಓವರ್ಗಳ ಕೋಟಾದಲ್ಲಿ ಕೇವಲ ೧೭ ರನ್ ಬಿಟ್ಟುಕೊಟ್ಟ ಅವರು, ಕೇವಲ ೪.೨೫ರ ಅದ್ಭುತ ಎಕಾನಮಿಯಲ್ಲಿ ಪ್ರಭ್ಸಿಮ್ರಾನ್ ಸಿಂಗ್ (೨೬) ಮತ್ತು ಜಾಶ್ ಇಂಗ್ಲಿಸ್ (೩೯) ಅವರಂತಹ ಅಪಾಯಕಾರಿ ಹಾಗೂ ಕ್ರೀಸ್ನಲ್ಲಿ ನೆಲೆಯೂರಿದ್ದ ಇಬ್ಬರು ಪ್ರಮುಖ ಬ್ಯಾಟರ್ಗಳನ್ನು ಪೆವಿಲಿಯನ್ಗೆ ಅಟ್ಟಿದರು. ಪಂಜಾಬ್ ಕಿಂಗ್ಸ್ ಕೊನೆಯ ಎಸೆತದವರೆಗೂ ಹೋರಾಟ ನಡೆಸಿದರೂ ೨೦ ಓವರ್ಗಳಲ್ಲಿ 184 ರನ್ ಗಳಿಸಲಷ್ಟೇ ಶಕ್ತವಾಯಿತು. ಕೃಣಾಲ್ ಪಾಂಡ್ಯ ಅವರ ಈ ಮ್ಯಾಚ್ ವಿನ್ನಿಂಗ್ ಸ್ಪೆಲ್ನಿಂದಾಗಿ ಆರ್ಸಿಬಿ ಕೇವಲ 6 ರನ್ಗಳ ರೋಚಕ ಜಯ ಸಾಧಿಸಿ, ಐಪಿಎಲ್ ಇತಿಹಾಸದಲ್ಲಿ ತನ್ನ ಮೊದಲ ಕಪ್ ಮುಡಿಗೇರಿಸಿಕೊಂಡಿತ್ತು.
ಇದನ್ನೂ ಓದಿ : ಟಾಟಾ ಮೋಟಾರ್ಸ್ನಿಂದ ವಿನೂತನ ಹೆಜ್ಜೆ | EV ಗ್ರಾಹಕರಿಗೆ ಮನೆಬಾಗಿಲಿಗೆ ಬರಲಿದೆ ‘ಹಾಪ್ಚಾರ್ಜ್’!



















