ಬೆಂಗಳೂರು : ಟಿ20 ವಿಶ್ವಕಪ್ 2026ರ ಭಾರತ ವಿರುದ್ಧದ ಹೈವೋಲ್ಟೇಜ್ ಪಂದ್ಯವನ್ನು ಬಹಿಷ್ಕರಿಸುವ ಪಾಕಿಸ್ತಾನದ ನಿಲುವಿನ ಬಗ್ಗೆ ಭಾರತದ ಮಾಜಿ ವೇಗಿ ಚೇತನ್ ಶರ್ಮಾ ಮಹತ್ವದ ಭವಿಷ್ಯ ನುಡಿದಿದ್ದಾರೆ. ಫೆಬ್ರವರಿ 12ರ ನಂತರ ಪಾಕಿಸ್ತಾನ ತನ್ನ ನಿರ್ಧಾರದಿಂದ ಹಿಂದೆ ಸರಿಯಲಿದ್ದು, ಖಂಡಿತವಾಗಿಯೂ ಭಾರತದ ವಿರುದ್ಧ ಆಡಲು ಮುಂದಾಗಲಿದೆ ಎಂದು ಅವರು ವಿಶ್ಲೇಷಿಸಿದ್ದಾರೆ. ಕೊಲಂಬೊದ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ಫೆಬ್ರವರಿ 15ರಂದು ನಡೆಯಬೇಕಿರುವ ಈ ಪಂದ್ಯಕ್ಕೆ ಪಾಕಿಸ್ತಾನ ಸರ್ಕಾರ ಅನುಮತಿ ನಿರಾಕರಿಸಿರುವ ಬೆನ್ನಲ್ಲೇ ಚೇತನ್ ಶರ್ಮಾ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದೆಲ್ಲಾ ರಾಜಕೀಯ ಪ್ರೇರಿತ ನಾಟಕ
‘ಸಲಾಮ್ ಕ್ರಿಕೆಟ್ 2026’ ಕಾರ್ಯಕ್ರಮದಲ್ಲಿ ಮಾತನಾಡಿದ ಚೇತನ್ ಶರ್ಮಾ, ಪ್ರಸ್ತುತ ನಡೆಯುತ್ತಿರುವ ಬೆಳವಣಿಗೆಗಳು ಕೇವಲ ರಾಜಕೀಯ ಪ್ರೇರಿತ ಎಂದು ಬಣ್ಣಿಸಿದ್ದಾರೆ. “ಬಾಂಗ್ಲಾದೇಶದ ಆಟಗಾರರ ತಪ್ಪೇನಿದೆ? ಏನೂ ಇಲ್ಲ. ಇದೆಲ್ಲವೂ ರಾಜಕೀಯ. ಫೆಬ್ರವರಿ 12ರಂದು ಬಾಂಗ್ಲಾದೇಶದಲ್ಲಿ ಚುನಾವಣೆ ನಡೆಯಲಿದೆ. ಆ ಚುನಾವಣೆ ಮುಗಿದ ತಕ್ಷಣ ಪಾಕಿಸ್ತಾನ ‘ಯು-ಟರ್ನ್’ ಹೊಡೆಯುವುದನ್ನು ನೀವು ನೋಡಲಿದ್ದೀರಿ. ‘ಸಾರ್ವಜನಿಕರ ಭಾವನೆಗಳನ್ನು ಗೌರವಿಸಿ, ಕ್ರಿಕೆಟ್ ಸೋಲಬಾರದು ಎಂಬ ಕಾರಣಕ್ಕೆ ಭಾರತದ ವಿರುದ್ಧ ಆಡುತ್ತಿದ್ದೇವೆ’ ಎಂಬ ಹೇಳಿಕೆ ಪಾಕಿಸ್ತಾನದಿಂದ ಬರಲಿದೆ,” ಎಂದು ಚೇತನ್ ಶರ್ಮಾ ಭವಿಷ್ಯ ನುಡಿದಿದ್ದಾರೆ.
ತಾವೊಬ್ಬ ರಾಜಕಾರಣಿಯಾಗಿ ಚುನಾವಣೆಗಳನ್ನು ಎದುರಿಸಿರುವುದರಿಂದ ಈ ತಂತ್ರಗಳು ತಮಗೆ ಅರ್ಥವಾಗುತ್ತವೆ ಎಂದಿರುವ ಅವರು, “ಚುನಾವಣೆ ಮುಗಿದ ನಂತರ ಸ್ವತಃ ಪಾಕಿಸ್ತಾನದ ಸೇನಾ ಮುಖ್ಯಸ್ಥರೇ ಮಧ್ಯಪ್ರವೇಶಿಸಿ, ಕ್ರೀಡೆಯನ್ನು ರಾಜಕೀಯದಿಂದ ಹೊರಗಿಡಬೇಕು ಎಂದು ಹೇಳಿಕೆ ನೀಡಿದರೂ ಆಶ್ಚರ್ಯವಿಲ್ಲ,” ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ಐಸಿಸಿಗೆ ಇನ್ನೂ ಅಧಿಕೃತ ಮಾಹಿತಿ ಇಲ್ಲ
ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಇಲ್ಲಿಯವರೆಗೂ ಭಾರತದ ವಿರುದ್ಧ ಆಡುವುದಿಲ್ಲ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ (ಐಸಿಸಿ) ಅಧಿಕೃತವಾಗಿ ಯಾವುದೇ ಪತ್ರ ಬರೆದಿಲ್ಲ ಎಂಬುದನ್ನು ಚೇತನ್ ಶರ್ಮಾ ಒತ್ತಿ ಹೇಳಿದ್ದಾರೆ. “ಮಾಧ್ಯಮಗಳ ಮುಂದೆ ಹೇಳಿಕೆ ನೀಡುವುದು ಬೇರೆ, ಅಧಿಕೃತವಾಗಿ ತಿಳಿಸುವುದು ಬೇರೆ. ನಿವೃತ್ತಿ ಘೋಷಣೆ ಮಾಡಿದರೂ ಅಧಿಕೃತ ಪತ್ರ ನೀಡದಿದ್ದರೆ ಅದು ಲೆಕ್ಕಕ್ಕೆ ಬರುವುದಿಲ್ಲ. ಅದೇ ರೀತಿ, ಅಧಿಕೃತವಾಗಿ ತಿಳಿಸದ ಹೊರತು ಈ ಹೇಳಿಕೆಗಳಿಗೆ ಬೆಲೆ ಇಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಕ್ರಿಕೆಟ್ ಮತ್ತು ಕ್ರಿಕೆಟಿಗರು ಬಲಿಪಶುಗಳಾಗುತ್ತಿದ್ದಾರೆ,” ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಕೊಲಂಬೊಗೆ ತೆರಳಲು ಭಾರತ ಸಜ್ಜು
ಒಂದೆಡೆ ಪಾಕಿಸ್ತಾನ ನಾಯಕ ಸಲ್ಮಾನ್ ಅಘಾ ಅವರು ಸರ್ಕಾರದ ನಿರ್ಧಾರಕ್ಕೆ ಬದ್ಧ ಎಂದು ಹೇಳುತ್ತಿದ್ದರೆ, ಸೆಮಿಫೈನಲ್ ಅಥವಾ ಫೈನಲ್ನಲ್ಲಿ ಭಾರತ ಎದುರಾದರೆ ಆಗಲೂ ಸರ್ಕಾರದ ಅನುಮತಿ ಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಮಾತ್ರ ತಮ್ಮ ನಿಲುವಿನಲ್ಲಿ ಸ್ಪಷ್ಟವಾಗಿದ್ದು, “ವೇಳಾಪಟ್ಟಿಯಂತೆ ಭಾರತ ತಂಡ ಕೊಲಂಬೊಗೆ ಪ್ರಯಾಣಿಸಲಿದೆ. ಅಲ್ಲಿ ಆಡುವುದು ಬಿಡುವುದು ಪಾಕಿಸ್ತಾನಕ್ಕೆ ಬಿಟ್ಟ ವಿಚಾರ,” ಎಂದು ಖಡಕ್ ಆಗಿ ಹೇಳಿದ್ದಾರೆ. ಒಟ್ಟಿನಲ್ಲಿ ಫೆಬ್ರವರಿ 12ರ ಬಾಂಗ್ಲಾದೇಶ ಚುನಾವಣೆಯ ನಂತರ ಈ ಹೈಡ್ರಾಮಾಕ್ಕೆ ತೆರೆ ಬೀಳುವ ಸಾಧ್ಯತೆಯಿದೆ.
ಇದನ್ನೂ ಓದಿ : ಬಿಜೆಪಿಗೆ ಮಹಾತ್ಮ ಗಾಂಧೀಜಿ ಬಗ್ಗೆ ಎಂತಹ ಗೌರವ ಇದೆ ಎನ್ನುವುದು ಇಡೀ ಜಗತ್ತಿಗೆ ಗೊತ್ತಿದೆ | ಪರಮೇಶ್ವರ್


















