ಬೆಂಗಳೂರು : ದೇಶದಲ್ಲಿ ಚಿನ್ನದ ಬೆಲೆ ದಿನೇದಿನೆ ಗಗನಕ್ಕೇರುತ್ತಿದೆ. ಬಡವರು ಚಿನ್ನ ಖರೀದಿಸಲು ಆಗದಂತಹ ಸ್ಥಿತಿ ನಿರ್ಮಾಣವಾಗಿದೆ. ಇನ್ನು, ಚಿನ್ನದ ಬೆಲೆ ಜಾಸ್ತಿಯಾಗಿದೆ. ಮನೆಯಲ್ಲಿ ಇಟ್ಟುಕೊಳ್ಳುವುದು ಸುರಕ್ಷಿತವಲ್ಲ ಎಂದು ಬ್ಯಾಂಕ್ ಲಾಕರ್ ಗಳಲ್ಲಿ ಇರಿಸುವವರ ಸಂಖ್ಯೆಯೂ ಜಾಸ್ತಿಯಾಗಿದೆ. ಹೀಗೆ ಬ್ಯಾಂಕ್ ಲಾಕರ್ ಗಳಲ್ಲಿ ಚಿನ್ನವನ್ನು ಇರಿಸುವುದು ಕೂಡ ನೂರಕ್ಕೆ ನೂರರಷ್ಟು ಸುರಕ್ಷಿತವಲ್ಲ ಎಂಬುದನ್ನು ಕೂಡ ಗ್ರಾಹಕರು ತಿಳಿದುಕೊಳ್ಳಬೇಕಾಗಿದೆ. ಬ್ಯಾಂಕ್ ಲಾಕರ್ ನಲ್ಲಿ ನೀವು ಇಟ್ಟ ಚಿನ್ನ ಕಳ್ಳತನವಾದರೆ, ಯಾವುದೇ ಅವಘಡ ಸಂಭವಿಸಿ ಹಾನಿಯಾದರೆ, ನಿಮ್ಮ ಚಿನ್ನದ ಮೌಲ್ಯದಷ್ಟೇ ಹಣವನ್ನು ಬ್ಯಾಂಕ್ ಗಳು ನೀಡುವುದಿಲ್ಲ ಎಂಬುದನ್ನು ನೀವು ತಿಳಿಯುವುದು ಅತ್ಯವಶ್ಯಕವಾಗಿದೆ.
ನಿಮಗೆ ಸಿಗುವ ಪರಿಹಾರ ಎಷ್ಟು?
ಬ್ಯಾಂಕ್ ಸಿಬ್ಬಂದಿಯ ನಿರ್ಲಕ್ಷ್ಯ, ವಂಚನೆ, ಕಳ್ಳತನ, ಬೆಂಕಿ ಅವಘಡ ಅಥವಾ ಕಟ್ಟಡ ಕುಸಿತದಂತಹ ಸಂದರ್ಭಗಳಲ್ಲಿ ಲಾಕರ್ನಲ್ಲಿರುವ ಚಿನ್ನಾಭರಣಗಳು ಕಳೆದುಹೋದರೆ, ಹಾನಿಗೀಡಾದರೆ, ಬ್ಯಾಂಕ್ ಪರಿಹಾರ ನೀಡುತ್ತದೆ. ಆದರೆ, ನೀವು ಲಾಕರ್ ನಲ್ಲಿ ಇಟ್ಟಿರುವ ಚಿನ್ನದ ಮೌಲ್ಯವನ್ನೇ ನಿಮಗೆ ಪರಿಹಾರ ನೀಡುವುದಿಲ್ಲ. ಬದಲಾಗಿ, ಇಷ್ಟೇ ಪರಿಹಾರ ನೀಡಬೇಕು ಎಂಬ ಕುರಿತು ಆರ್ ಬಿಐ ನಿಯಮಗಳನ್ನು ರೂಪಿಸಿದೆ.
ನೀವು ಪಾವತಿಸುವ ವಾರ್ಷಿಕ ಲಾಕರ್ ಬಾಡಿಗೆಯ 100 ಪಟ್ಟು ಮೊತ್ತವನ್ನು ಬ್ಯಾಂಕ್ ಪರಿಹಾರವಾಗಿ ನೀಡುತ್ತದೆ. ಉದಾಹರಣೆಗೆ, ನಿಮ್ಮ ಲಾಕರ್ ನ ವಾರ್ಷಿಕ ಬಾಡಿಗೆ 4 ಸಾವಿರ ರೂಪಾಯಿ ಆಗಿದ್ದರೆ, ಬ್ಯಾಂಕ್ ಗರಿಷ್ಠ 4 ಲಕ್ಷ ರೂಪಾಯಿ ಮಾತ್ರ ಪರಿಹಾರ ನೀಡುತ್ತದೆ. ನೀವು ಲಾಕರ್ ನಲ್ಲಿ ಇರಿಸಿದ ಚಿನ್ನದ ಮೌಲ್ಯ 10 ಲಕ್ಷ ರೂ., 50 ಲಕ್ಷ ರೂ. ಇದ್ದರೂ, ನಿಮಗೆ ಇಷ್ಟೇ ಪರಿಹಾರ ಸಿಗುತ್ತದೆ.
ಪ್ರವಾಹ, ಭೂಕಂಪ, ಕಳ್ಳತನ, ನೈಸರ್ಗಿಕ ವಿಕೋಪಗಳಿಂದ ಲಾಕರ್ ಗೆ ಹಾನಿಯಾದರೆ, ಹೆಚ್ಚಿನ ಸಂದರ್ಭಗಳಲ್ಲಿ ಬ್ಯಾಂಕುಗಳು ಹೊಣೆಗಾರರಾಗುವುದಿಲ್ಲ. ಆಗ ಉಂಟಾಗುವ ಆರ್ಥಿಕ ನಷ್ಟವನ್ನು ಗ್ರಾಹಕರೇ ಭರಿಸಬೇಕಾಗುತ್ತದೆ. ಆದರೂ, ಗ್ರಾಹಕರ ಹಿತದೃಷ್ಟಿಯಿಂದ ಬ್ಯಾಂಕ್ ಗಳು ಲಾಕರ್ ಒಪ್ಪಂದವನ್ನು ಅನುಸರಿಸಬೇಕು ಎಂದು ಆರ್ ಬಿಐ ಸೂಚಿಸಿದೆ. ಲಾಕರ್ ನಲ್ಲಿ ಚಿನ್ನ ಇರಿಸುವ ಮೊದಲು ಗ್ರಾಹಕರಿಗೆ ಪರಿಹಾರದ ನಿಯಮಗಳ ಕುರಿತು ಸ್ಪಷ್ಟವಾಗಿ ತಿಳಿಸಿರಬೇಕು ಎಂದು ಆರ್ ಬಿಐ ಬ್ಯಾಂಕ್ ಗಳಿಗೆ ಸೂಚನೆ ನೀಡಿದೆ.
ಇದನ್ನೂ ಓದಿ : ಜೇನುನೊಣಗಳಿಂದ 20 ಮಕ್ಕಳ ಪ್ರಾಣ ಉಳಿಸಲು ತನ್ನ ಪ್ರಾಣವನ್ನೇ ಅರ್ಪಿಸಿದ ಅಂಗನವಾಡಿ ಅಡುಗೆ ಸಹಾಯಕಿ!



















