ಬೆಂಗಳೂರು: ಆಯುಧ ಪೂಜೆಗೂ ಸಾರಿಗೆ ಸಂಸ್ಥೆಯಲ್ಲಿ ದುಡ್ಡಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಏಕೆಂದರೆ, ಈ ಬಾರಿಯ ಆಯುಧ ಪೂಜೆಗೆ ಪ್ರತಿಯೊಂದು ಬಸ್ ಗೆ ಕೇವಲ ತಲಾ 100 ರೂ. ಖರ್ಚು ಮಾಡುವಂತೆ ರಾಜ್ಯ ರಸ್ತೆ ಸಾರಿಗೆ ನಿಗಮ ಸೂಚನೆ ನೀಡಿದೆ. ಹೀಗಾಗಿ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗಿದೆ.
ಹೀಗಾಗಿ ಹಲವರು ದಿವಾಳೆಯಾಗಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಶಕ್ತಿ ಯೋಜನೆಗೆ (Shakti Scheme) ಶ್ರಮಿಸುತ್ತಿರುವ ಬಸ್ ಗಳಿಗೆ ಆಯುಧ ಪೂಜೆಗೆ ತಲಾ 100 ರೂ. ಖರ್ಚು ಮಾಡುವಂತೆ ರಾಜ್ಯ ರಸ್ತೆ ಸಾರಿಗೆ ನಿಗಮ ಸೂಚನೆ ನೀಡಿದೆ.
ಆಯುಧ ಪೂಜೆ ಸ್ವಚ್ಛತೆ, ಅಲಂಕಾರಕ್ಕೆ ಬಸ್ ಕೇವಲ ಪುಡಿಗಾಸು ಬಿಡುಗಡೆ ಮಾಡಿದೆ. ಈ ಬಾರಿಯೂ ಪುಡಿಗಾಸು ಕೊಟ್ಟು ಕೈತೊಳೆದುಕೊಂಡ ಸಾರಿಗೆ ನಿಗಮ 1 ಬಸ್ ಗೆ ತಲಾ 100 ರೂ. ಖರ್ಚು ಮಾಡುವಂತೆ ಸೂಚನೆ ನೀಡಿದೆ. ಪ್ರತಿಯೊಂದು ಬಸ್ಸಿನ ಸ್ವಚ್ಛತೆ ಅಲಂಕಾರ ಮತ್ತು ನಿರ್ವಹಣೆಗೆ ಕಡಿಮೆ ಹಣ ಬಿಡುಗಡೆ ಮಾಡಿದ್ದಕ್ಕೆ ಸಿಬ್ಬಂದಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಬಸ್ ಗಳನ್ನು ಚೆನ್ನಾಗಿ ಅಲಂಕಾರ ಮಾಡುವ ಸಿಬ್ಬಂದಿ ಆಸೆಗೆ ಕೆಎಸ್ ಆರ್ ಟಿಸಿ ಆಡಳಿತ ಮಂಡಳಿ ಅಕ್ಷರಶಃ ತಣ್ಣೀರೆರಚಿದೆ. ಬಿಡುಗಡೆ ಮಾಡಿರುವ 100 ರೂ. ನಲ್ಲಿ ಒಂದು ಬಸ್ ಗೆ ಪೂಜೆ ಮಾಡಲು ಆಗತ್ತಾ? ಒಂದು ಮಾರು ಸೇವಂತಿಗೆ ಹೂವಿಗೆ 70 ರೂ. ಇರುವಾಗ ಹಬ್ಬದ ದಿನ 100 ರೂ. ನಲ್ಲಿ ಬಸ್ಗೆ ಹೇಗೆ ಪೂಜೆ ಮಾಡೋದು? ಎಂದು ಸಿಬ್ಬಂದಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಪ್ರತಿ ವಿಭಾಗೀಯ ಕಾರ್ಯಾಗಾರಕ್ಕೆ 1,000 ಹಾಗೂ ಪ್ರಾದೇಶಿಕ ಕಾರ್ಯಾಗಾರಕ್ಕೆ 5,000 ರೂ ಬಿಡುಗಡೆ ಮಾಡಿದೆ. ಎಲ್ಲಾ ಯಂತ್ರೋಪಕರಣಗಳು ಸುಸ್ಥಿತಿಯಲ್ಲಿರುವಂತೆ ಅರ್ಥಪೂರ್ಣ ವಾಗಿ ಆಯುಧ ಪೂಜೆ ಮಾಡಲು ಕೂಡ ಇಲಾಖೆ ಆದೇಶ ನೀಡಿದೆ.