ಕರ್ನಾಟಕದ ಇತಿಹಾಸದಲ್ಲೇ ಕಳೆದ 3 ದಶಕಗಳಿಂದ ಕಂಡು ಕೇಳರಿಯದಂತಹ ಕಾಲ್ತುಳಿತ ಪ್ರಕರಣವೊಂದು ನಡೆದು ಹೋಗಿದೆ. 11 ಅಮಾಯಕರ ಜೀವ ಬಲಿಯಾಗಿದೆ. ನಾಡಿನಾದ್ಯಂತ ಈ ಘಟನೆಗೆ ಸರ್ಕಾರವೇ ನೇರ ಹೊಣೆ ಎನ್ನುವ ಆರೋಪಗಳೂ ಕೇಳಿ ಬರುತ್ತಿವೆ. ಇಂತಹ ಹೊತ್ತಲ್ಲೇ ಸಿದ್ದರಾಮಯ್ಯ ಸರ್ಕಾರದ ದೊಡ್ಡ ತಲೆಯೊಂದರ ಬಲಿಯಾಗುತ್ತಾ ಅನ್ನೋ ಪ್ರಶ್ನೆ ಆವರಿಸಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಮುಂದಿನ ವಾರ ದೆಹಲಿಗೆ ಬರುವಂತೆ ಸಿಎಂ, ಡಿಸಿಎಂಗೆ ಹೈಕಮಾಂಡ್ ಬುಲಾವ್ ನೀಡಿದೆ. ಹಾಗಿದ್ದರೆ ಯಾರ ನೆತ್ತಿಯ ಮೇಲೆ ನೇತಾಡುತ್ತಿದೆ ತೂಗುಗತ್ತಿ ಅನ್ನೋದು ದೊಡ್ಡ ಪ್ರಶ್ನೆಯಾಗಿದೆ.
ಕಾಂಗ್ರೆಸ್ ಪಾಳಯದಲ್ಲೇ ಶುರುವಾಗಿದೆ ಹೊಸ ಲೆಕ್ಕಾಚಾರ
ಸಂಪುಟ ವಿಸ್ತರಣೆ ವೇಳೆ ಆಗಲಿದೆಯಾ ಮೆಗಾ ಬದಲಾವಣೆ?
ಕಾಲ್ತುಳಿತ ಕೇಸ್ ನಲ್ಲಿ ಈಗಾಗಲೇ ಪೊಲೀಸ್ ಇಲಾಖೆಯನ್ನು ಟಾರ್ಗೆಟ್ ಮಾಡಿ ಸರ್ಜರಿ ಮಾಡಲಾಗಿದೆ. ಇದರ ಬೆನ್ನಲ್ಲೇ ತಮ್ಮ ರಾಜಕೀಯ ಕಾರ್ಯದರ್ಶಿಯಾಗಿದ್ದ ಕೆ ಗೋವಿಂದುರಾಜುರನ್ನೂ ಹುದ್ದೆಯಿಂದ ಮುಕ್ತಗೊಳಿಸಲಾಗಿದೆ. ಆದರೆ ಜನಾಕ್ರೋಶ ಮಾತ್ರ ಸರ್ಕಾರದ ಮೇಲೆ ತಣ್ಣಗಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಇದರ ನಡುವೆ, ಸಿಎಂ ಹಾಗೂ ಡಿಸಿಎಂಗೆ ದೆಹಲಿಗೆ ಬರುವಂತೆ ಹೈಕಮಾಂಡ್ ಬುಲಾವ್ ನೀಡಿದೆ.
ಆದರೆ, ಈ ಬಾರಿ ಟಾರ್ಗೆಟ್ ಗೃಹ ಸಚಿವರಾ ಅನ್ನೋ ಅನುಮಾನ ಹುಟ್ಟಿದೆ. ಗೃಹ ಇಲಾಖೆಯನ್ನು ನಿಭಾಯಿಸಲು ಅಸಾಧ್ಯವಾಗುತ್ತಿದೆ. ನನಗೆ ಬೇರೆಯದ್ದೇ ಖಾತೆ ನೀಡಿ ಅಂತಾ ಈ ಹಿಂದೆಯೇ ಪರಮೇಶ್ವರ್ ಸಿಎಂಗೆ ಮನವಿ ಮಾಡಿದರು. ಕೋಮುಗಲಬೆ, ಕರಾವಳಿ ಕಿಚ್ಚು, ಈಗ ಚಿನ್ನಸ್ವಾಮಿ ದುರಂತ. ಹೀಗೆ ಸಾಲು ಸಾಲು ಅನಾಹುತಗಳಿಂದ ಬೇಸತ್ತಿರೋ ಪರಮೇಶ್ವರ್ ಖುದ್ದು ಖಾತೆ ಬದಲಾವಣೆಗೆ ಆಗ್ರಹಿಸಿದ್ದಾರೆ. ಇದರ ನಡುವೆ ಹೈಕಮಾಂಡ್ ಕೂಡಾ, ಗೃಹ ಖಾತೆಯನ್ನ ಮತ್ತಷ್ಟು ಹೊಣೆಗಾರಿಕೆ ಇರೋ ಮುಖಂಡನಿಗೆ ನೀಡಿದರೆ ಒಳಿತು ಎನ್ನುವ ಲೆಕ್ಕದಲ್ಲಿದೆ.
ಮುಂದಿನ ವಾರವೇ ಬದಲಾಗ್ತಾರಾ ಗೃಹ ಸಚಿವರು?
ಕುರ್ಚಿ ಸಹವಾಸಬೇಡ ಅಂತಿದ್ದಾರಾ ಅತಿರಥರು?
ಈಗಾಗಲೇ ಪರಮೇಶ್ವರ್ ನನಗೆ ಗೃಹ ಇಲಾಖೆ ಸಹವಾಸ ಸಾಕಪ್ಪಾ ಅಂತಿದ್ದಾರೆ. ಅಷ್ಟೇ ಅಲ್ಲಾ ಕಂದಾಯ ಇಲ್ಲಾ ಕೈಗಾರಿಕೆ ಖಾತೆ ನೀಡಿ ನಿಭಾಯಿಸಿಕೊಂಡು ಹೋಗುತ್ತೇನೆ ಅಂತಲೂ ಸಿಎಂಗೆ ಮನವರಿಕೆ ಮಾಡಿದ್ದಾರೆ. ಆದರೆ ಕಾಂಗ್ರೆಸ್ ನಲ್ಲಿ ಸಂಪುಟ ಪುನಾರಚನೆ ಕಸರತ್ತು ನಡೆದಿರುವಾಗಲೇ ಈ ಗೃಹ ಖಾತೆ ಕುರ್ಚಿ ಸಹವಾಸ ಬೇಡ ಎನ್ನುವವರೇ ಹೆಚ್ಚಿನವರಾಗಿದ್ದಾರೆ.
ಇವತ್ತಿನವರೆಗಿನ ಪರಿಸ್ಥಿತಿ ಅವಲೋಕಿಸಿರುವ ಕೆಲ ಹಿರಿಯರು ಗೃಹ ಖಾತೆ ಸಹವಾಸವೇ ಬೇಡ ಅಂತಿದ್ದಾರೆ. ಹಿರಿಯರಾದ ರಾಮಲಿಂಗಾ ರೆಡ್ಡಿ, ಎಂ.ಬಿ. ಪಾಟೀಲ್, ಹೆಚ್.ಕೆ. ಪಾಟೀಲ್ ಸೇರಿದಂತೆ ಹಲವರು ಹಾಲಿ ಖಾತೆಗಳಲ್ಲೇ ಸಂತೃಪ್ತ ಎನ್ನುವ ಮಾತುಗಳನ್ನಾಡಿದ್ದಾರೆ. ಹೀಗಾಗಿ ಗೃಹ ಖಾತೆ ಎನ್ನುವುದು ಕಾಂಗ್ರೆಸ್ ಗೆ ಬೆಂಕಿ ಕುರ್ಚಿಯಾಗಿದೆ. ಈ ನಡುವೆ, ಪಕ್ಷದ ವರಿಷ್ಠ ಬಿಕೆ ಹರಿಪ್ರಸಾದ್ ರನ್ನು ಸಂಪುಟಕ್ಕೆ ಸೇರಿಸಿಕೊಂಡು ಗೃಹ ಇಲಾಖೆ ವಹಿಸಿದ್ರೆ ಹೇಗೆ ಅನ್ನೋ ಗಣಿತ ಸಿದ್ದರಾಮಯ್ಯರ ತಲೆಯಲ್ಲಿದೆ.
ಹಾಗೆ ಹರಿಪ್ರಸಾದ್ ಹೆಸರಿಗೆ ಹೈಕಮಾಂಡ್ ಕೂಡ ಇಲ್ಲ ಎನ್ನುವುದಿಲ್ಲ ಎನ್ನುವ ಲೆಕ್ಕವೂ ಇದೆ. ಈ ಮೂಲಕ ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆಯೋ ಇರಾದೆ ಕೂಡಾ ಸಿಎಂಗಿದೆ. ತಲೆದಂಡವಂತೂ ಫಿಕ್ಸ್ ಆಗಿದ್ದು, ಯಾವಾಗ ಅನ್ನೋದಷ್ಟೇ ನಿಗದಿಯಾಗಬೇಕಿದೆ.