ಬೆಂಗಳೂರು: ರಾಜ್ಯ ಸರ್ಕಾರ ಹಾಗೂ ರಾಜಭವನದ ಮಧ್ಯೆ ನಡೆದ ಸಂಘರ್ಷದ ಬೆನ್ನಲ್ಲೇ ಕೇಂದ್ರ ಸಚಿವ ಕುಮಾರಸ್ವಾಮಿ ಮತ್ತು ಲೋಕಾಯುಕ್ತ ಎಸ್ ಐಟಿ ಐಪಿಜಿ ಎಂ. ಚಂದ್ರಶೇಖರ್ ಮಧ್ಯೆ ಸಂಘರ್ಷ ಹೆಚ್ಚಾಗಿದೆ.
ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ಕೋರಿದ್ದ ಪತ್ರ ಸೋರಿಕೆಯಾದ ವಿಚಾರಕ್ಕೆ ಸಂಬಂಧಿಸಿದಂತೆ ರಾಜಭವನದ ಅಧಿಕಾರಿಗಳ ತನಿಖೆಗೆ ಅನುಮತಿ ಕೋರಿದ್ದ ಚಂದ್ರಶೇಖರ್ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದರು. ಆನಂತರ ಐಪಿಎಸ್ ಅಧಿಕಾರಿಯ ವಿರುದ್ಧ ಗಂಭೀರ ಸ್ವರೂಪದ ಆರೋಪಗಳನ್ನು ಮಾಡಿದ್ದರು.
ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಐಪಿಎಸ್ ಅಧಿಕಾರಿ ಚಂದ್ರಶೇಖರ್ ಅವರು ತಮ್ಮ ಸಿಬ್ಬಂದಿಗೆ ಪತ್ರ ಬರೆದು ಕುಮಾರಸ್ವಾಮಿ ವಿರುದ್ಧ ಗುಡುಗಿದ್ದರು. ಹಂದಿಗಳೊಂದಿಗೆ ಕುಸ್ತಿ ಒಳ್ಳೆಯದಲ್ಲ ಎಂದಿದ್ದರು. ಇದಕ್ಕೆ ಎಚ್ ಡಿಕೆ ಕೂಡಾ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದು, ಕೆಪಿಸಿಸಿ ಕಚೇರಿಯಿಂದಲೇ ಐಜಿಪಿ ಪ್ರತಿಕ್ರಿಯೆ ಪತ್ರ ಬಹಿರಂಗಗೊಂಡಿದೆ ಎಂದೂ ಆರೋಪಿಸಿದ್ದರು. ಆರೋಪಕ್ಕೆ ಸಂಬಂಧಿಸಿದಂತೆ ಕೆಲವೊಂದು ದಾಖಲೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ದೆಹಲಿ ಪಿಎಸಿಎಲ್ ಕಂಪನಿಗೆ ಸಂಬಂಧಿಸಿದಂತೆ ಆರೋಪ ಮಾಡಿದ್ದ ಕುಮಾರಸ್ವಾಮಿ, ಐಪಿಎಸ್ ಅಧಿಕಾರಿ ಎಂ. ಚಂದ್ರಶೇಖರ್ ವಿರುದ್ಧ ಗಂಭೀರ ಸ್ವರೂಪದ ಆರೋಪ ಮಾಡಿದ್ದರು. ಆ ಇಡೀ ಹಗರಣಕ್ಕೆ ಚಂದ್ರಶೇಖರ್ ಗಾಡ್ ಫಾದರ್ ಎಂದು ಆರೋಪಿಸಿದ್ದರು. ದೂರು ದಾಖಲಿಸಿ 100 ಕೋಟಿ ಬೇಡಿಕೆ ಇಟ್ಟಿದ್ದ ಪ್ರಕರಣದಲ್ಲಿ ಆರೋಪಿಗಳಿಗೆ ಚಂದ್ರಶೇಖರ್ ಬೆಂಬಲ ನೀಡಿದ್ದರು ಎಂದು ಆರೋಪಿಸಿದ್ದರು.
ಶ್ರೀಧರ್ ಎಂಬ ರೌಡಿ ಶೀಟರ್ ವಿಜಯ್ ತಾತಾ ವಿರುದ್ಧ ದೂರು ದಾಖಲು ಮಾಡುತ್ತಾನೆ. ವಿಜಯ್ ತಾತಾ ಆರೋಪ ಪಟ್ಟಿಯಲ್ಲಿ ಮೊದಲ ಆರೋಪಿ ಆಗುತ್ತಾನೆ. ಆ ಸಂದರ್ಭದಲ್ಲಿ ಈ ಅಧಿಕಾರಿ ಚಂದ್ರಶೇಖರ್ ಮಾಡಿದ್ದೇನು? ಈತನಿಗೆ ಐಜಿ ಕೆಲಸ ಕೊಟ್ಟಿದ್ದು ಇಂಥ ನಟೋರಿಯಸ್ ಮಾಡೋಕಾ? ಕೇಸ್ ನಡೆಸಿ ಅಂದ್ರೆ ಸ್ಟೇ ತೆಗೆದುಕೊಂಡಿದ್ದಾರೆ. ಕಿಶೋರ್ ಎಂಬ ಇನ್ಸ್ ಪೆಕ್ಟರ್ ಒಬ್ಬರನ್ನು ಸಹ ಇವರು ಬ್ಲಾಕ್ ಮೇಲ್ ಮಾಡುತ್ತಾರೆ. ಆನಂತರ 20 ಕೋಟಿ ರೂ.ಗೆ ಡಿಮ್ಯಾಂಡ್ ಮಾಡುತ್ತಾರೆ ಎಂದು ಕೂಡ ಆರೋಪಿಸಿದ್ದಾರೆ.
ಕಿಶೋರ್ ಎಂಬ ಇನ್ಸ್ಪೆಕ್ಟರ್ ಈ ಅಧಿಕಾರಿ ವಿರುದ್ಧ ದೂರು ನೀಡಿದ್ದಾರೆ. ತಕ್ಷಣ 2 ಕೋಟಿ ರೂ.ತಂದು ಕೊಡಬೇಕು ಎಂದು ಬ್ಲಾಕ್ ಮೇಲ್ ಮಾಡಿದ್ದು ಈತನೇ ಅಲ್ಲವೇ? FIR ಹಾಕಿದ ನಂತರ ಕೇಸ್ ಕೋರ್ಟ್ ಮುಂದೆ ಇದೆಯಲ್ಲ. ಇದೇನಾ ಆತನ ಸತ್ಯಮೇವ ಜಯತೆ? ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.
ಇದಕ್ಕೆ ಸಂಬಂಧಿಸಿದ ದಾಖಲೆಗಳೂ ಹರಿದಾಡುತ್ತಿವೆ. ಪೊಲೀಸ್ ಅಧಿಕಾರಿ ಕಿಶೋರ್ ವಿರುದ್ಧ ನ್ಯಾಯಾಲಯದ ಆದೇಶದಂತೆ ಕಾನೂನು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಆಂತರಿಕ ಭದ್ರತೆ ಡಿಜಿಪಿ ಪ್ರಣಬ್ ಮೊಹಾಂತ್ರಿ ಸಿಐಡಿ ಡಿಜಿಪಿಗೆ ನೀಡಿರುವ ದೂರಿನ ಪ್ರತಿ ಕೂಡ ಹರಿದಾಡುತ್ತಿದೆ.
ಪಿಎಸಿಎಲ್ ಗೆ ಸೇರಿದ ಜಮೀನನ್ನು ಇನ್ಪೆಕ್ಟರ್ ಕಿಶೋರ್ ಕುಮಾರ್ ಹಾಗೂ ಇತರರು ಮಾರಾಟ ಮಾಡಿದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ ಅತ್ತಿಬೆಲೆ ಮತ್ತು ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೆ ಕಿಶೋರ್ ಕುಮಾರ್ ವಿರುದ್ಧ ವರ್ತೂರ್ ಪೊಲೀಸ್ ಠಾಣೆಯಲ್ಲಿ ಆರೋಪ ಪಟ್ಟಿಯನ್ನು ಸಲ್ಲಿಕೆ ಮಾಡಲಾಗಿದೆ.
ಪೊಲೀಸ್ ಅಧಿಕಾರಿ ಕಿಶೋರ್ ಕುಮಾರ್ ಈಗಾಗಲೇ ಅಮಾನತಿನಲ್ಲಿದ್ದಾರೆ. ಅವರ ವಿರುದ್ದ ನ್ಯಾಯಾಲಯಕ್ಕೆ ಸುಳ್ಳು ದಾಖಲೆ ನೀಡಿದ ಪ್ರಕರಣ ಸಿಐಡಿಯಲ್ಲಿ ತನಿಖೆ ನಡೆಯುತ್ತಿದೆ ಎಂಬುವುದಕ್ಕೆ ಸಂಬಂಧಿಸಿದ ದಾಖಲೆಗಳು ಕೂಡ ಈಗ ಬಹಿರಂಗವಾಗಿವೆ. ಈಗ ಈ ಯುದ್ಧ ಎಲ್ಲಿಗೆ ಹೋಗಿ ನಿಲ್ಲುತ್ತದೆ ಕಾಯ್ದು ನೋಡಬೇಕಿದೆ.