ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಬಹುನಿರೀಕ್ಷಿತ ಉದ್ಘಾಟನಾ ಪಂದ್ಯವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳ ನಡುವೆ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅದ್ಧೂರಿಯಾಗಿ ನಡೆದು ಹಾಲಿ ಚಾಂಪಿಯನ್ಗಳು ಗೆಲುವು ಸಾಧಿಸಿದ್ದಾರೆ.
ಪ್ರತಿ ವರ್ಷದಂತೆ ಈ ಬಾರಿಯೂ ಬೆಂಗಳೂರಿನಲ್ಲಿ ಆರ್ಸಿಬಿ ಮೇಲಿನ ಅಭಿಮಾನ ಮುಗಿಲು ಮುಟ್ಟಿದೆ. ಆದರೆ, ಈ ಬಾರಿ ಕ್ರೀಡಾಂಗಣದ ಒಳಗೆ ನಡೆಯುತ್ತಿರುವ ಪಂದ್ಯದಷ್ಟೇ ಆಚೆ ಇರುವ ರಸ್ತೆಗಳಲ್ಲಿಯೂ ಒಂದು ವಿಶೇಷ ಸಂಗತಿ ಎಲ್ಲರ ಗಮನ ಸೆಳೆಯುತ್ತಿದೆ. ಬೆಂಗಳೂರಿನ ಆಟೋ ಚಾಲಕರೊಬ್ಬರು ತಮ್ಮ ನೆಚ್ಚಿನ ತಂಡದ ಮೇಲಿನ ಅಭಿಮಾನವನ್ನು ವ್ಯಕ್ತಪಡಿಸಲು ಕೈಗೊಂಡಿರುವ ವಿಭಿನ್ನ ನಿರ್ಧಾರವು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.

ಅಭಿಮಾನಿಗಳಿಗಾಗಿ ಉಚಿತ ಪ್ರಯಾಣದ ಕೊಡುಗೆ
ಬೆಂಗಳೂರಿನ ಸಂಚಾರ ದಟ್ಟಣೆಯ ನಡುವೆಯೂ ಆರ್ಸಿಬಿ ಅಭಿಮಾನಿಗಳು ಸಕಾಲಕ್ಕೆ ಕ್ರೀಡಾಂಗಣ ತಲುಪಲಿ ಎಂಬ ಉದ್ದೇಶದಿಂದ ಈ ಆಟೋ ಚಾಲಕರು ವಿಶೇಷ ಸೇವೆಯನ್ನು ಆರಂಭಿಸಿದ್ದರು. ಪಂದ್ಯದ ದಿನದಂದು ಆರ್ಸಿಬಿ ಜೆರ್ಸಿ ಧರಿಸಿದ ಅಥವಾ ಪಂದ್ಯದ ಟಿಕೆಟ್ ಹೊಂದಿರುವ ಅಭಿಮಾನಿಗಳಿಗೆ ಉಚಿತವಾಗಿ ಸವಾರಿ ನೀಡುವುದಾಗಿ ಅವರು ಘೋಷಿಸಿದ್ದರು. ಸಾಮಾನ್ಯವಾಗಿ ಹಣಕ್ಕಾಗಿ ಓಡುವ ನಗರದ ಜೀವನದಲ್ಲಿ, ಕೇವಲ ಅಭಿಮಾನಕ್ಕಾಗಿ ಇಂತಹ ನಿರ್ಧಾರ ತಳೆದಿರುವುದು ಕ್ರೀಡಾ ಪ್ರೇಮಿಗಳ ಮನಗೆದ್ದಿದೆ. ಈ ಚಾಲಕನ ಆಟೋ ಮೇಲೆ “ಈ ಸಲ ಕಪ್ ನಮ್ದೇ” ಎಂಬ ಘೋಷಣೆಗಳ ಜೊತೆಗೆ ಆರ್ಸಿಬಿ ಧ್ವಜಗಳು ರಾರಾಜಿಸುತ್ತಿದ್ದು, ಪ್ರಯಾಣಿಕರಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿತ್ತು. ಆದರೆ, ಅವರು ಎಷ್ಟು ಮಂದಿಗೆ ಫ್ರೀ ಕೊಟ್ಟರು ಎಂಬುದು ಗೊತ್ತಿಲ್ಲ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಚಾಲಕನ ಉದಾರತೆ
ಈ ವಿಶೇಷ ಸುದ್ದಿಯು ಇಂಟರ್ನೆಟ್ನಲ್ಲಿ ವೈರಲ್ ಆಗುತ್ತಿದ್ದಂತೆಯೇ, ಕ್ರಿಕೆಟ್ ಅಭಿಮಾನಿಗಳು ಮತ್ತು ನೆಟ್ಟಿಗರು ಚಾಲಕನ ನಿಷ್ಕಲ್ಮಶ ಕ್ರಿಕೆಟ್ ಪ್ರೇಮವನ್ನು ಕೊಂಡಾಡುತ್ತಿದ್ದಾರೆ. “ಆರ್ಸಿಬಿ ಎಂದರೆ ಕೇವಲ ಒಂದು ತಂಡವಲ್ಲ, ಅದೊಂದು ಭಾವನೆ” ಎಂಬುದಕ್ಕೆ ಈ ಘಟನೆಯೇ ಸಾಕ್ಷಿ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ : ಕ್ಯಾಚ್ ವಿವಾದ : ಅಂಪೈರ್ ತೀರ್ಪಿಗೆ ಹೆನ್ರಿಚ್ ಕ್ಲಾಸೆನ್ ಗರಂ, ಸಾಮಾಜಿಕ ಜಾಲತಾಣದಲ್ಲಿ ಚರ್ಚೆ!



















