ನಾಯಕನಾಗಿ ಪ್ರಶಸ್ತಿ ಗೆದ್ದುಕೊಟ್ಟಿದ್ದರೂ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಗೆ ತನ್ನನ್ನು ಉಳಿಸಿಕೊಳ್ಳದ ಕೋಲ್ಕತಾ ನೈಟ್ ರೈಡರ್ಸ್ ಟೀಮ್ ಮ್ಯಾನೇಜ್ಮೆಂಟ್ ಬಗ್ಗೆ ಶ್ರೇಯಸ್ ಅಯ್ಯರ್ (Shreyas Iyer) ಬೇಸರ ವ್ಯಕ್ತಪಡಿಸಿದ್ದಾರೆ. ಮೆಗಾ ಹರಾಜಿಗೂ ಮುನ್ನ ಕೋಲ್ಕತಾ ಫ್ರಾಂಚೈಸಿ ತಮ್ಮೊಂದಿಗೆ ಯಾವುದೇ ಮಾಹಿತಿ ಹಂಚಿಕೊಂಡಿರಲಿಲ್ಲ ಎಂದು ಅವರು ಬೇಸರ ತೋಡಿಕೊಂಡಿದ್ದಾರೆ. ಶ್ರೇಯಸ್ ಈ ಬಾರಿ ಪಂಜಾಬ್ ತಂಡ ಸೇರಿಕೊಂಡಿದ್ದು ಇಲ್ಲೂ ನಾಯಕತ್ವ ವಹಿಸಿಕೊಂಡಿದ್ದಾರೆ.
ಶ್ರೇಯಸ್ ಅಯ್ಯರ್(Shreyas Iyer) ನಾಯಕತ್ವದಲ್ಲಿ ಕೋಲ್ಕತಾ ನೈಟ್ ರೈಡರ್ಸ್(Kolkata Knight Riders) ತಂಡ 2024ರ ಐಪಿಎಲ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಗೌತಮ್ ಗಂಭೀರ್ ಆ ವೇಳೆ ತಂಡದ ಕೋಚ್ ಆಗಿದ್ದರು. ಅದ ಹೊರತಾಗಿಯೂ 2025ರ ಐಪಿಎಲ್ ಮೆಗಾ ಹರಾಜಿಗೆ ಶ್ರೇಯಸ್ ಅಯ್ಯರ್ ಅವರನ್ನು ಬಿಡುಗಡೆ ಮಾಡಲಾಗಿತ್ತು. ಸಿಂಗ್, ಆಂಡ್ರೆ ರಸೆಲ್, ಸುನೀಲ್ ನರೇನ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ ಮತ್ತು ರಮಣ್ದೀಪ್ ಸಿಂಗ್ ಅವರನ್ನು ಮಾತ್ರ ತಂಡ ಉಳಿಸಿಕೊಂಡಿತ್ತು.
2025ರ ಐಪಿಎಲ್ ಮೆಗಾ ಹರಾಜಿಗೆ ಬಂದಿದ್ದ ಶ್ರೇಯಸ್ ಅಯ್ಯರ್ ಅವರನ್ನು ಪಂಜಾಬ್ ಕಿಂಗ್ಸ್ ತಂಡ(Punjab Kings team) 26.75 ಕೋಟಿ ರೂ. ಗಳಿಗೆ ಖರೀದಿಸಿತ್ತು. ಇತ್ತೀಚೆಗೆ ಮಾಧ್ಯಮ ಸಂವಾದವೊಂದರಲ್ಲಿ ಮಾತನಾಡಿದ್ದ ಶ್ರೇಯಸ್ ಅಯ್ಯರ್, ಕೋಲ್ಕತಾ ಫ್ರಾಂಚೈಸಿ ತನ್ನನ್ನು ರಿಲೀಸ್ ಮಾಡಿದ್ದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಇಂಡಿಯನ್ ಎಕ್ಸ್ಪ್ರೆಸ್ ಜೊತೆ ಮಾತನಾಡಿದ್ದ ಶ್ರೇಯಸ್ ಅಯ್ಯರ್, “ಕೆಕೆಆರ್ಗೆ ಚಾಂಪಿಯನ್ ಪಟ್ಟ ತಂದುಕೊಟ್ಟಿದ್ದೇನೆ. ಅಲ್ಲಿ ಕಳೆದ ಪ್ರತಿಯೊಂದು ಕ್ಷಣವನ್ನು ನಾನು ಪ್ರೀತಿಸುತ್ತೇನೆ. ಐಪಿಎಲ್ ಚಾಂಪಿಯನ್ ಆದ ಬಳಿಕ ನಾವು ನೇರವಾಗಿ ಮಾತನಾಡುತ್ತಿದ್ದೆವು. ಆದರೆ, ಕೆಲ ತಿಂಗಳುಗಳ ಬಳಿಕ ನಮ್ಮ ಜೊತೆ ಮಾತನಾಡಲು ಯಾವುದೇ ಪ್ರಯತ್ನ ನಡೆಸಿರಲಿಲ್ಲ. ನಾವು ಪರಸ್ಪರ ಬೇರೆಯಾಗುವ ಪರಿಸ್ಥಿತಿಗೆ ಬಂದಿದ್ದೆವು,” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಿರಾಶೆಯಾಗಿತ್ತು: ಶ್ರೇಯಸ್ ಅಯ್ಯರ್
“ಹೌದು, ತುಂಬಾ ನಿರಾಶೆಯಾಯಿತು, ಏಕೆಂದರೆ ರಿಟೆನ್ಷನ್ ದಿನಾಂಕಕ್ಕೂ ಒಂದು ವಾರದ ಮೊದಲು ನಿಮಗೆ ಯಾವುದೇ ವಿಷಯಗಳು ತಿಳಿದಿಲ್ಲವಾದರೆ, ಅಲ್ಲಿ ಏನೋ ಒಂದು ಕೊರತೆಯಾಗಿದೆ ಎಂದು ಅನಿಸುತ್ತದೆ. ಇದರ ಹೊರತಾಗಿಯೂ ಶಾರುಖ್ ಸರ್, ಕೆಕೆಆರ್ ಕುಟುಂಬ(KKR family) , ಅವರೆಲ್ಲರೊಂದಿಗೆ ನಾನು ಅಲ್ಲಿ ಕಳೆದ ಸಮಯ ಅದ್ಭುತವಾಗಿದೆ ಎಂದು ಹೇಳಲು ಬಯಸುತ್ತೇನೆ,” ಎಂದು ಪಂಜಾಬ್ ಕಿಂಗ್ಸ್ ನಾಯಕ ತಿಳಿಸಿದ್ದಾರೆ.
ಭಾರತ ತಂಡಕ್ಕೆ ಆಯ್ಕೆ
2018 ರಿಂದ 2020ರ ವರೆಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಿದ್ದ ಶ್ರೇಯಸ್ ಅಯ್ಯರ್, ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ 2025ರ ಐಸಿಸಿ ಚಾಂಪಿಯನ್ಷಿಪ್ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. ಆ ಮೂಲಕ ಸುದೀರ್ಘ ಅವಧಿಯ ಬಳಿಕ ಬಲಗೈ ಬ್ಯಾಟ್ಸ್ಮನ್ ಟೀಮ್ ಇಂಡಿಯಾಗೆ ಕಮ್ಬ್ಯಾಕ್ ಮಾಡಿದ್ದಾರೆ.